ಆಂಗ್ಲರ ವಿರುದ್ಧ ಸರಣಿ ಗೆಲುವಿನತ್ತ ಭಾರತ ಚಿತ್ತ
ಮುಂಬೈ, ಡಿ.7: ಆತಿಥೇಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೆ ಟೆಸ್ಟ್ ಪಂದ್ಯ ಗುರುವಾರ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಭಾರತ ಈ ಪಂದ್ಯವನ್ನು ಜಯಿಸಿ ಸತತ ಐದನೆ ಸರಣಿ ಗೆಲ್ಲುವ ಮಹತ್ವದ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಮತ್ತೊಂದೆಡೆ ಇಂಗ್ಲೆಂಡ್ ನಾಲ್ಕನೆ ಟೆಸ್ಟ್ ಪಂದ್ಯವನ್ನು ಜಯಿಸಿ ಸರಣಿಯಲ್ಲಿ ಸ್ಪರ್ಧೆಯಲ್ಲಿರುವ ವಿಶ್ವಾಸದಲ್ಲಿದೆ.
ವಿರಾಟ್ ಕೊಹ್ಲಿ ಪಡೆ 4ನೆ ಟೆಸ್ಟ್ನಲ್ಲಿ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿದೆ. ವೇಗದ ಬೌಲರ್ ಮುಹಮ್ಮದ್ ಶಮಿ(ಮಂಡಿನೋವು) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ(ಬೆರಳು ಮುರಿತ) ಗಾಯಗೊಂಡಿದ್ದಾರೆ. ಪಂದ್ಯದ ಅಭ್ಯಾಸದ ವೇಳೆ ಗಾಯಗೊಂಡಿರುವ ರಹಾನೆ ಸರಣಿಯಿಂದ ಹೊರ ನಡೆದಿದ್ದಾರೆ. ಶಮಿ ಹಾಗೂ ರಹಾನೆ ಬದಲಿಗೆ ಕರ್ನಾಟಕದ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಹಾಗೂ ಮುಂಬೈ ವೇಗಿ ಶಾರ್ದೂಲ್ ಠಾಕೂರ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇಂಗ್ಲೆಂಡ್ ತಂಡದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಕೂಡ ಗಾಯದಿಂದ ಬಳಲುತ್ತಿದ್ದು, ಅವರು ನಾಲ್ಕನೆ ಪಂದ್ಯದಲ್ಲಿ ಆಡುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ.
ಜೇಮ್ಸ್ ಆ್ಯಂಡರ್ಸನ್ ನೇತೃತ್ವದ ಇಂಗ್ಲೆಂಡ್ನ ಬೌಲಿಂಗ್ ವಿಭಾಗ ಭಾರತದ ಆರಂಭಿಕ ಆಟಗಾರ ಮುರಳಿ ವಿಜಯ್ರನ್ನು ಹಲವು ಬಾರಿ ಬೇಗನೆ ಔಟ್ ಮಾಡಿದೆ. ಮಧ್ಯಮ ಕ್ರಮಾಂಕದಲ್ಲಿ ಆರ್.ಅಶ್ವಿನ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಈವರೆಗೆ ಎರಡು ಬಾರಿ ಟಾಸ್ ಜಯಿಸಿದ್ದ ಇಂಗ್ಲೆಂಡ್ ಅವಕಾಶವನ್ನು ಕೈಚೆಲ್ಲಿದೆ. 3ನೆ ಟೆಸ್ಟ್ನಲ್ಲಿ ಭಾರತವನ್ನು 5 ವಿಕೆಟ್ಗೆ 156 ರನ್ಗೆ ನಿಯಂತ್ರಿಸಿದ್ದ ಇಂಗ್ಲೆಂಡ್ ಆ ಬಳಿಕ 417 ರನ್ ಗಳಿಸಲು ಅವಕಾಶ ನೀಡಿತ್ತು. ಬ್ಯಾಟಿಂಗ್ನ ವೇಳೆ ದಿನದಾಟದಂತ್ಯಕ್ಕೆ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ತನ್ನ ಅದೃಷ್ಟದ ತಾಣವಾಗಿರುವ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತನ್ನೆಲ್ಲಾ ತಪ್ಪನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಮತ್ತೊಂದೆಡೆ, ಭಾರತ ತಂಡ ರಾಜ್ಕೋಟ್ ಟೆಸ್ಟ್ನಲ್ಲಿ ಡ್ರಾ ಸಾಧಿಸಿದ್ದು, ವಿಶಾಖಪಟ್ಟಣ ಹಾಗೂ ಮೊಹಾಲಿಯಲ್ಲಿ ಗೆಲುವಿನ ಹಳಿಗೆ ಮರಳಿತ್ತು. ಮುಂಬೈ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಕೊಹ್ಲಿ ಪಡೆ ಸತತ ಐದನೆ ಟೆಸ್ಟ್ ಸರಣಿ ಗೆಲ್ಲುವ ಯೋಜನೆಯಲ್ಲಿದೆ. 84 ವರ್ಷಗಳ ಬಳಿಕ ಭಾರತ ಈ ಮಹತ್ವದ ಸಾಧನೆ ಮಾಡಲು ಯೋಜನೆ ಹಾಕಿಕೊಂಡಿದೆ. ವಾಂಖೆಡೆ ಸ್ಟೇಡಿಯಂ ಈ ಸಾಧನೆಗೆ ವೇದಿಕೆಯಾಗಿದೆ.
ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಮಂಗಳವಾರ ನೆಟ್ ಪ್ರಾಕ್ಟೀಸ್ ನಡೆಸಿದ್ದು, ಮುಂಬೈನಲ್ಲಿ ಮುರಳಿ ವಿಜಯ್ರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಟೀಮ್ ನ್ಯೂಸ್:ರಹಾನೆ ಗಾಯಗೊಂಡಿರುವ ಕಾರಣ ಕರುಣ್ ನಾಯರ್ ಮಧ್ಯಮ ಕ್ರಮಾಂಕದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಮುಹಮ್ಮದ್ ಶಮಿ ಲಭ್ಯತೆಯ ಬಗ್ಗೆ ನಿರ್ಧಾರವಾಗಲಿದೆ. ಒಂದು ವೇಳೆ ಅವರು ಅನ್ಫಿಟ್ ಇದ್ದರೆ, ಭುವನೇಶ್ವರ್ ಕುಮಾರ್ ಅಂತಿಮ 11ರ ಬಳಗಕ್ಕ ವಾಪಸಾಗಲಿದ್ದಾರೆ. ವೃದ್ದಿಮಾನ್ ಸಹಾ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುವ ಹಿನ್ನೆಲೆಯಲ್ಲಿ ಪಾರ್ಥಿವ್ ಪಟೇಲ್ ವಿಕೆಟ್ಕೀಪಿಂಗ್ ನಡೆಸಲಿದ್ದಾರೆ. ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಮೂರು ವಾರಗಳ ಹಿಂದೆ ಕಾಲುನೋವಿಗೆ ಒಳಗಾಗಿರುವ ಸ್ಟುವರ್ಟ್ ಬ್ರಾಡ್ ಮುಂಬೈ ಟೆಸ್ಟ್ನಲ್ಲಿ ಆಡುವುದು ಸಾಧ್ಯತೆ 50-50ರಷ್ಟಿದೆ. ಬ್ರಾಡ್ ಮಂಗಳವಾರ ಲಘು ಪ್ರಾಕ್ಟೀಸ್ ನಡೆಸಿದ್ದಾರೆ.ಬ್ರಾಡ್ ಆಡಲು ಸಿದ್ಧವಾಗಿದ್ದರೆ ಇಂಗ್ಲೆಂಡ್ ನಾಲ್ವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಬಹುದು. ಗಾಯಾಳು ಹಸೀಬ್ ಹಮೀದ್ ಬದಲಿಗೆ ಹೊಸ ಮುಖ ಕೀಟನ್ ಜೆನ್ನಿಂಗ್ಸ್ ಮೊದಲ ಬಾರಿ ಇನಿಂಗ್ಸ್ ಆರಂಭಿಸಲಿದ್ದಾರೆ.
ಪಿಚ್ ಹಾಗೂ ಪರಿಸ್ಥಿತಿ: ಪ್ರಸ್ತುತ ಸರಣಿಯಲ್ಲಿ ಎಲ್ಲ ಪಿಚ್ ತನ್ನದೇ ರೀತಿಯಲ್ಲಿ ವರ್ತಿಸಿದೆ. ಈ ಟ್ರೆಂಡ್ ಈ ಪಂದ್ಯದಲ್ಲೂ ಮುಂದುವರಿಯಲಿದೆ. ಪಿಚ್ ಸಾಮಾನ್ಯವಾಗಿ ಸ್ಪಿನ್ ಸ್ನೇಹಿಯಾಗಿದ್ದು, ಮೂರನೆ ದಿನದ ತನಕ ಬ್ಯಾಟ್ಸ್ಮನ್ಗೆ ತೊಂದರೆ ನೀಡದು.
ಅಂಕಿ-ಅಂಶ
* ಇಂಗ್ಲೆಂಡ್ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ಕಳೆದ 2 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಭಾರತ ಇಲ್ಲಿ ಆಡಿರುವ 24 ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿದೆ.
*ಕಳೆದ 50 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ನ 14 ಬ್ಯಾಟ್ಸ್ಮನ್ಗಳು ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 300ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಅಲೆಸ್ಟೈರ್ ಕುಕ್ ಈ ಪೈಕಿ ಒಬ್ಬರು. ಜೋ ರೂಟ್, ಜಾನಿ ಬೈರ್ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ ಜೊತೆಗೂಡಿ ಮತ್ತೊಮ್ಮೆ ಈ ಸಾಧನೆ ಮಾಡಲಿದ್ದಾರೆ.
*ಕಳೆದ 20 ವರ್ಷಗಳಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 9 ಟೆಸ್ಟ್ ಪಂದ್ಯಗಳಲ್ಲಿ ವೇಗದ ಬೌಲರ್ ಈತನಕ 5 ವಿಕೆಟ್ ಗೊಂಚಲು ಪಡೆದಿಲ್ಲ. ಇದೇ ಸಂದರ್ಭದಲ್ಲಿ ಸ್ಪಿನ್ನರ್ಗಳು 13 ವಿಕೆಟ್ಗಳನ್ನು ಕಬಳಿಸಿದ್ದಾರೆ.
* ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 4,000 ರನ್ ಪೂರೈಸಲು 41 ರನ್ ಅಗತ್ಯವಿದೆ. ಕೊಹ್ಲಿ ಅತ್ಯಂತ ವೇಗವಾಗಿ 4 ಸಾವಿರ ರನ್ ಪೂರೈಸಲಿರುವ ಆರನೆ ಭಾರತೀಯ ಆಟಗಾರನಾಗಲಿದ್ದಾರೆ. ವೀರೇಂದ್ರ ಸೆಹ್ವಾಗ್(79 ಇನಿಂಗ್ಸ್) ಮೊದಲ ಸ್ಥಾನದಲ್ಲಿದ್ದಾರೆ.
ತಂಡಗಳು: ಭಾರತ(ಸಂಭಾವ್ಯರು): ಕೆಎಲ್ ರಾಹುಲ್, ಎಂ.ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಕರುಣ್ ನಾಯರ್/ಮನೀಷ್ ಪಾಂಡೆ, ಆರ್.ಅಶ್ವಿನ್, ಪಾರ್ಥಿವ್ ಪಟೇಲ್(ವಿಕೆಟ್ಕೀಪರ್), ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಮುಹಮ್ಮದ್ ಶಮಿ/ಭುವನೇಶ್ವರ ಕುಮಾರ್.
ಇಂಗ್ಲೆಂಡ್(ಸಂಭಾವ್ಯರು): ಅಲಿಸ್ಟರ್ ಕುಕ್(ನಾಯಕ), ಕೀಟನ್ ಜೆನ್ನಿಂಗ್ಸ್, ಜೋ ರೂಟ್, ಮೊಯಿನ್ ಅಲಿ, ಜಾನಿ ಬೈರ್ಸ್ಟೋವ್(ವಿಕೆಟ್ಕೀಪರ್), ಬೆನ್ ಸ್ಟೋಕ್ಸ್, ಜೋ ಬಟ್ಲರ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್/ಸ್ಟೀವನ್ ಫಿನ್, ಜೇಮ್ಸ್ ಆ್ಯಂಡರ್ಸನ್.
ಪಂದ್ಯದ ಸಮಯ: ಬೆಳಗ್ಗೆ 9:30