ಮಹಿಳಾ ಟೆಕ್ಕಿಗೆ ಚೂರಿಯಿಂದ ಇರಿದು ಕೊಲೆ
ಪುಣೆ, ಡಿ.25: ಕೋಲ್ಕತಾ ಮೂಲದ ಯುವ ಸಾಫ್ಟ್ವೇರ್ ಇಂಜಿನಿಯರ್ರನ್ನು ಶುಕ್ರವಾರ ರಾತ್ರಿ ಪುಣೆಯಲ್ಲಿರುವ ಆಕೆಯ ಕಚೇರಿಯ ಬಳಿ ದುಷ್ಕರ್ಮಿಯೊಬ್ಬ ಚೂರಿಯಿಂದ ಇರಿದು ಕೊಲೆಗೈದ ಘಟನೆ ನಡೆದಿದೆ.
ಕಚೇರಿಯಿಂದ 500 ಮೀ.ದೂರದಲ್ಲಿ ಈ ಘಟನೆ ನಡೆದಿದ್ದು, ಅಪರಿಚಿತ ವ್ಯಕ್ತಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ವಾಗ್ವಾದ ನಡೆಸಿದ್ದಾನೆ. ಬಳಿಕ ಆಕೆಯ ತಲೆ ಹಾಗೂ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಬೈಕ್ ಸವಾರನೊಬ್ಬ ಪೊಲೀಸರಿಗೆ ತಿಳಿಸಿದ್ದಾರೆ.
23ರ ಹರೆಯದ ಅಂತರಾ ದಾಸ್ ಕೋಲ್ಕತಾದ ಬೆಹಾಲ ನಿವಾಸಿಯಾಗಿದ್ದಾರೆ. ಅಂತರಾ ತಂದೆ ದೇಬಾನಂದ ದಾಸ್ ಶನಿವಾರ ಸಂಜೆ ಪುಣೆಗೆ ಧಾವಿಸಿ ಬಂದಿದ್ದಾರೆ.
ಅಂತರಾ ಫುಟ್ಪಾತ್ನಲ್ಲಿ ನಡೆದುಕೊಂಡುಹೋಗುತ್ತಿದ್ದಾಗ ಬೀದಿ ದೀಪಗಳು ನಂದಿಹೋಗಿದ್ದವು. ದುಷ್ಕರ್ಮಿ ಆಕೆಯ ಮೇಲೆ ದಾಳಿ ನಡೆಸಿದಾಗ ‘ಬಚಾವೋ ಬಚಾವೋ’ ಎಂದು ಕೂಗಾಡಿದ್ದಾರೆ. ಆಗ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಸತ್ಯೇಂದ್ರ ಸಿನ್ಹಾ(36) ಆಕೆಯ ಸಹಾಯಕ್ಕೆ ಮುಂದಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.