ನೋಟಿನ ಬರ: ಅರೆಹೊಟ್ಟೆಯ ಹಾಹಾಕಾರ

Update: 2016-12-28 18:18 GMT

‘‘ನವೆಂಬರ್‌ನಲ್ಲಿ ಕೆಲಸ ಇಲ್ಲದಿದ್ದರೂ, ಶಾಂತಿ ಹಬ್ಬವನ್ನು ಎಲ್ಲರೂ ಆಚರಿಸಿದರು. ಇದಕ್ಕಾಗಿ ದಲಿತರು ಕಡಿಮೆ ಆಹಾರ ಸೇವಿಸಿದರು. ಮತ್ತಷ್ಟು ದಿನಕ್ಕಾಗುವಂತೆ ಅಕ್ಕಿ ಬಳಕೆ ಕಡಿಮೆ ಮಾಡಿದೆವು’’ ಎಂದು ಕೃಷಿಕೂಲಿ ಕಾರ್ಮಿಕಳಾಗಿರುವ ಹನುಮಕ್ಕ ವಿವರಿಸುತ್ತಾರೆ. 600ಕ್ಕೂ ಹೆಚ್ಚು ದಲಿತ ಕುಟುಂಬಗಳಿರುವ ಈ ಗ್ರಾಮದಲ್ಲಿ ಹನುಮಕ್ಕ ಅವರ ಕುಟುಂಬವೂ ಸೇರಿದಂತೆ ಬಹುತೇಕ ದಲಿತ ಕುಟುಂಬಗಳು ದಿನಕ್ಕೆ ಎರಡು ಹೊತ್ತಷ್ಟೇ ಉಣ್ಣುವ ಮೂಲಕ ಪರಿಸ್ಥಿತಿಯಿಂದ ಹೊರಬರುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ವಾರಕ್ಕೊಮ್ಮೆ ಮಾಂಸ ಸೇವನೆಯನ್ನೂ ತ್ಯಜಿಸಿದ್ದಾರೆ.

‘‘ಪ್ರತಿದಿನ ಕೆಲಸ ಮಾಡಿದರಷ್ಟೇ ನಮ್ಮ ಹೊಟ್ಟೆಗೆ ಹಿಟ್ಟು’’ ಬೆಂಗಳೂರಿನಿಂದ ಬುಚಾರ್ಲಗೆ ವಾಪಸ್ಸಾದ ಡಿ.ನಾರಾಯಣಪ್ಪಎಂಬವರ ಸ್ಪಷ್ಟ ನುಡಿ ಇದು. ಗ್ರಾಮದಲ್ಲಿ ಇತರ ಎಲ್ಲ ದಲಿತರಂತೆ, ಈತ ಕೂಡಾ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಊರಿಂದ ಊರಿಗೆ ಅಲೆದು, ಕೆಲ ದಿನಗಳ ವಿಶ್ರಾಂತಿಗಾಗಿ ಇವರು ಕೂಡಾ ಮನೆಗೆ ಆಗಮಿಸುತ್ತಾರೆ.

ಆದರೆ ಆಂಧ್ರಪ್ರದೇಶ- ಕರ್ನಾಟಕ ಗಡಿ ಪ್ರದೇಶದ ಅನಂತಪುರ ಜಿಲ್ಲೆ ರೊದ್ದಂ ಮಂಡಲದ ಈ ಗ್ರಾಮಸ್ಥರು ನವೆಂಬರ್‌ನಲ್ಲಿ ವಿಶ್ರಾಂತಿಗಾಗಿ ಬಂದವರು ದೀರ್ಘಕಾಲದ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ನವೆಂಬರ್‌ನಲ್ಲಿ ಇತರರಂತೆ ನಾರಾಯಣಪ್ಪಕೂಡಾ ಆದಾಯಕ್ಕಾಗಿ ಬುಚರ್ಲಾ ಹೊಲಗಳಲ್ಲಿ ದುಡಿದರು. ಅದಲ್ಲದೇ ಅವರಿಗೆ ಪರ್ಯಾಯ ಆಯ್ಕೆಯೇ ಇಲ್ಲ.

ಬುಚಾರ್ಲದ ತಮ್ಮ ಮನೆಯ ಹೊರಗೆ ಕುಳಿತುಕೊಂಡು ‘‘ನಾವು ಅಂಬೇಡ್ಕರ್ ಅವರ ಜನ’’ ಎಂದು ನಾರಾಯಣಪ್ಪನಿಟ್ಟುಸಿರು ಬಿಟ್ಟರು. ಅನೌಪಚಾರಿಕವಾಗಿ ಹಣವನ್ನು ಸಾಲ ಪಡೆಯಲು ಏಕೆ ಕಷ್ಟವಾಗುತ್ತದೆ ಎನ್ನುವುದನ್ನು ವಿವರಿಸಿದರು. ಈ ವರ್ಷ ನವೆಂಬರ್ 29ರಂದು ಬಲಿ ನಡೆಯಬೇಕಿತ್ತು. ಇಂಥ ವಲಸೆ ಕಾರ್ಮಿಕರು ತಾವು ಉಳಿಸಿದ ಅಲ್ಪಸ್ವಲ್ಪಆದಾಯದೊಂದಿಗೆ ಊರಿಗೆ ಮರಳಿದ್ದರು. ಹಬ್ಬವನ್ನು ಎದುರು ನೋಡುತ್ತಿರುವಾಗಲೇ, ನೋಟು ರದ್ದತಿ ನಿರ್ಧಾರ ಇವರಿಗೆ ಬರಸಿಡಿಲಿನಂತೆ ಬಂದೆರಗಿತು.

 

ಗ್ರಾಮದಲ್ಲಿ ನೋಟಿನ ಕೊರತೆಯ ಜತೆಗೆ, ಮಳೆ ಕೊರತೆಯಿಂದಾಗಿ ಶೇಂಗಾ ಹಾಗೂ ರೇಷ್ಮೆ ಉತ್ಪಾದನೆಯೂ ಕುಸಿತಗೊಂಡದ್ದು ಇವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಲೆ ವ್ಯತ್ಯಯ ಕೂಡಾ ರೈತರ ಆದಾಯಕ್ಕೆ ಪೆಟ್ಟುಕೊಟ್ಟಿದೆ. ಇದರಿಂದಾಗಿ ಕಾರ್ಮಿಕರಿಗೆ ನಿರಂತರ ಉದ್ಯೋಗ ನೀಡುವ ಸ್ಥಿತಿಯಲ್ಲಿ ಯಾವ ರೈತರೂ ಇಲ್ಲ. ವಿವಿಧ ಜಾತಿಗಳ ಹಲವು ಮಂದಿ ಕೃಷಿ ಕೂಲಿ ಕಾರ್ಮಿಕರಿಗೆ ನವೆಂಬರ್ ತಿಂಗಳಿನ 15 ದಿನ ಕೂಲಿ ಸಿಕ್ಕಿಲ್ಲ. ‘‘ನವೆಂಬರ್‌ನಲ್ಲಿ ಕೆಲಸ ಇಲ್ಲದಿದ್ದರೂ, ಶಾಂತಿ ಹಬ್ಬವನ್ನು ಎಲ್ಲರೂ ಆಚರಿಸಿದರು. ಇದಕ್ಕಾಗಿ ದಲಿತರು ಕಡಿಮೆ ಆಹಾರ ಸೇವಿಸಿದರು. ಮತ್ತಷ್ಟು ದಿನಕ್ಕಾಗುವಂತೆ ಅಕ್ಕಿ ಬಳಕೆ ಕಡಿಮೆ ಮಾಡಿದೆವು’’ ಎಂದು ಕೃಷಿಕೂಲಿ ಕಾರ್ಮಿಕಳಾಗಿರುವ ಹನುಮಕ್ಕ ವಿವರಿಸುತ್ತಾರೆ. 600ಕ್ಕೂ ಹೆಚ್ಚು ದಲಿತ ಕುಟುಂಬಗಳಿರುವ ಈ ಗ್ರಾಮದಲ್ಲಿ ಹನುಮಕ್ಕ ಅವರ ಕುಟುಂಬವೂ ಸೇರಿದಂತೆ ಬಹುತೇಕ ದಲಿತ ಕುಟುಂಬಗಳು ದಿನಕ್ಕೆ ಎರಡು ಹೊತ್ತಷ್ಟೇ ಉಣ್ಣುವ ಮೂಲಕ ಪರಿಸ್ಥಿತಿಯಿಂದ ಹೊರಬರುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ವಾರಕ್ಕೊಮ್ಮೆ ಮಾಂಸ ಸೇವನೆಯನ್ನೂ ತ್ಯಜಿಸಿದ್ದಾರೆ.

ಏಳು ಮಂದಿಯ ನಾರಾಯಣಪ್ಪಕುಟುಂಬಕ್ಕೆ ತಿಂಗಳಿಗೆ 90 ಕೆ.ಜಿ. ಅಕ್ಕಿ ಹಾಗೂ 30 ಸೇರು ರಾಗಿ ಪ್ರತಿ ತಿಂಗಳು ಬೇಕಾಗುತ್ತಿತ್ತು. ಆದರೆ ನವೆಂಬರ್‌ನಲ್ಲಿ ಕೇವಲ 60 ಕೆ.ಜಿ. ಅಕ್ಕಿ ಮತ್ತು 10 ಸೇರು ರಾಗಿ ಮಾತ್ರ ಬಳಸಿದ್ದಾರೆ.

ನಾರಾಯಣಪ್ಪಅವರು ಬುಚಾರ್ಲದಿಂದ ಮೂರು ಕಿಲೋಮೀಟರ್ ದೂರದ ರೊದ್ದಂ ಗ್ರಾಮದ ಜಿ.ಆರ್.ರಾಘವೇಂದ್ರ ಎಂಬವರ ಅಂಗಡಿಯಿಂದ ಅಕ್ಕಿ ಖರೀದಿಸುತ್ತಾರೆ. 50 ಕೆ.ಜಿ. ತೂಕದ ಒಂದು ಚೀಲಕ್ಕೆ 1,200 ರೂಪಾಯಿ. ಇದೀಗ ರಾಘವೇಂದ್ರ ಅವರ ವ್ಯವಹಾರ ಕುಸಿದಿದೆ. ‘‘ಅಕ್ಟೋಬರ್‌ನಲ್ಲಿ ಸುಮಾರು 20 ಚೀಲ ಅಕ್ಕಿ ಖರ್ಚಾಗಿತ್ತು. ಕಳೆದ ತಿಂಗಳು 8-10 ಚೀಲ ಮಾತ್ರ ಖರ್ಚಾಗಿದೆ.’’ ಎನ್ನುತ್ತಾರವರು.

ರೊದ್ದಂನ ಮತ್ತೊಂದು ಕಿರಾಣಿ ಅಂಗಡಿ, ಈ ಮಂಡಲದ 21 ಗ್ರಾಮಗಳ ಜನರಿಗೆ ಅಗತ್ಯವಸ್ತು ಪೂರೈಸುತ್ತದೆ. ನೋಟು ರದ್ದತಿಯ ಏಟು ಇಲ್ಲಿಗೂ ಬಿದ್ದಿದ್ದು, ವ್ಯವಹಾರ ಕುಸಿದಿದೆ. ಅಗತ್ಯವಸ್ತುಗಳ ಮಾರಾಟ ಕುಸಿದಿದೆ. ‘‘ಪ್ರತಿ ವಾರ ಮೂರು ಬಾಕ್ಸ್ ಸೋಪು ಮಾರಾಟವಾಗುತ್ತಿತ್ತು. ಡಿಸೆಂಬರ್ ಮೊದಲ ವಾರದಲ್ಲಿ ಒಂದು ಬಾಕ್ಸ್ ಕೂಡಾ ಮಾರಾಟ ಮಾಡಲು ಸಾಧ್ಯವಾಗಲಿಲ್ಲ’’ ಎನ್ನುವುದು ವರ್ತಕಿ ಪಿ.ಅಶ್ವತ್ಥಲಕ್ಷ್ಮೀ ಅವರ ಅಳಲು.

‘‘ಬುಚರ್ಲಾದ ದಲಿತ ಕಾಲನಿಯ ಬಹುತೇಕ ಮಂದಿ ರೇಷನ್ ಅಂಗಡಿಗಳಿಂದ ಭಾಗಶಃ ಆಹಾರಧಾನ್ಯಗಳನ್ನು ಖರೀದಿಸುವುದಷ್ಟೇ ಸಾಧ್ಯವಾಗಿದೆ. ಉಳಿದ ಪಾಲನ್ನು ಖರೀದಿಸಲು ಅವರಿಗೆ ಹಣ ಇಲ್ಲ. ಏಕೆಂದರೆ ಗ್ರಾಮದಲ್ಲಿ ಬಹುತೇಕ ಕೆಲಸ ಮಾಯವಾಗಿದೆ’’ ಎಂದು ಹನುಮಕ್ಕ ಹೇಳುತ್ತಾರೆ. ದಲಿತ ಕಾಲನಿಯ ಮಂದಿಗೆ ಅಭಾವ ಪರಿಸ್ಥಿತಿ ಹೊಸದಲ್ಲ. ಈ ಗ್ರಾಮದ ಬಹುತೇಕ ಮಂದಿ 1990ರ ದಶಕಕ್ಕಿಂತ ಮೊದಲು ಜೀತದಾಳುಗಳಾಗಿದ್ದವರು. ಪ್ರಸ್ತುತ ಸ್ಥಿತಿ ಇವರಿಗೆ ಹಿಂದಿನ ದಿನಗಳನ್ನು ನೆನಪಿಸುತ್ತಿದೆ. ಆದರೆ ಈ ಬಾರಿ ಅಷ್ಟೊಂದು ಕರಾಳವಲ್ಲ ಎಂದು ಅವರು ನಿಟ್ಟುಸಿರು ಬಿಡುತ್ತಾರೆ. ‘‘ಸುಮಾರು 30 ವರ್ಷಗಳ ಹಿಂದೆಗೆ ಹೋಲಿಸಿದರೆ ಈ ಬಾರಿಯ ಬರ (ನೋಟಿನ ಅಭಾವ) ಅಷ್ಟೊಂದು ತೀವ್ರತರವಲ್ಲ. ನಾನು 20ರ ಆಸುಪಾಸಿನಲ್ಲಿದ್ದಾಗ, ಮೂರು-ನಾಲ್ಕು ದಿನ ನಿರಂತರವಾಗಿ ಹಸಿವಿನಿಂದ ಕಳೆಯಬೇಕಾಗಿತ್ತು. ಹುಣಸೆಬೀಜವನ್ನು ನೀರಲ್ಲಿ ನೆನೆಸಿ ತಿನ್ನುತ್ತಿದ್ದೆವು. ತಾಳೆಯ ಹಣ್ಣು ತಿಂದು ಜೀವಿಸಿದ್ದೂ ಇದೆ. ಆಗ ನಾನು 14 ವರ್ಷ ಕಾಲ ಜೀತದಾಳಾಗಿ ಇದ್ದೆ’’ ಎಂದು 49 ವರ್ಷದ ನಾರಾಯಣಪ್ಪಹಳೆಯ ನೆನಪು ಬಿಚ್ಚಿಟ್ಟರು.

ಮಾಜಿ ಜೀತದಾಳುಗಳು ಇದೀಗ ಪ್ರತಿ ವರ್ಷ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಕೃಷಿ ಕೆಲಸ ಕಡಿಮೆಯಾದ ತಕ್ಷಣ ವಲಸೆ ಹೋಗುವ ಇವರು, ಬೆಂಗಳೂರಿನಲ್ಲಿ ಮೂರು-ನಾಲ್ಕು ತಿಂಗಳು ಕೆಲಸ ಮಾಡಿದ ಬಳಿಕ ವಾಪಸ್ಸಾಗುತ್ತಾರೆ. ನಗರದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಳ್ಳುವ ಇವರು, ಅರ್ಧ ನಿರ್ಮಾಣವಾದ ಕಟ್ಟಡಗಳಲ್ಲೇ ತಮ್ಮ ರಾತ್ರಿಗಳನ್ನು ಕಳೆಯುತ್ತಾರೆ. ಆದರೆ ಕೆಲಸದ ದಣಿವು ತಣಿಸಿಕೊಳ್ಳಲು ಹೊಟ್ಟೆತುಂಬಾ ತಿನ್ನುತ್ತಾರೆ. ‘‘ವಾರಕ್ಕೆರಡು ಬಾರಿ ಮಾಂಸದೂಟ ಸೇವಿಸುತ್ತೇವೆ. ಆದರೆ ನೋಟು ರದ್ದತಿ ಬಳಿಕ ಇದು ಬದಲಾಗಿದೆ’’ ಎಂದು ವಿವರಿಸುತ್ತಾರೆ.

ನವೆಂಬರ್ ಮೊದಲ ವಾರ ಬೆಂಗಳೂರಿನಿಂದ ನಾರಾಯಣಪ್ಪ ಕುಟುಂಬ ಆಗಮಿಸಿದ ಬಳಿಕ, ಹೊಲದಲ್ಲಿ ಕೆಲಸ ಸಿಕ್ಕಿಲ್ಲ. ಇಲ್ಲಿನ ಖರ್ಚಿಗಾಗಿ ಅಲ್ಪಸ್ವಲ್ಪ ಉಳಿತಾಯವನ್ನೇ ಕರಗಿಸಬೇಕಾಗಿದೆ. ಗ್ರಾಮದ ಇತರ ಸಮುದಾಯದವರು, ತಮ್ಮ ಆಹಾರಧಾನ್ಯಗಳನ್ನು ಹಂಚಿಕೊಳ್ಳುವ ಕಾರಣದಿಂದ ಮತ್ತು ಉಳಿತಾಯದ ಹಣವನ್ನು ಹಂಚಿಕೊಂಡು, ಸ್ವಲ್ಪಮಟ್ಟಿಗೆ ಉತ್ತಮ ಸ್ಥಿತಿಯಲ್ಲಿದ್ದಾರೆ. ಆದರೆ ನಾರಾಯಣಪ್ಪಅವರಂಥ ದಲಿತ ಕುಟುಂಬಗಳ ಬಳಿ ದಾಸ್ತಾನೂ ಇಲ್ಲ; ಸುಲಭವಾಗಿ ಇವರು ಸಾಲವನ್ನೂ ಪಡೆಯುವಂತಿಲ್ಲ.

‘‘ನಮಗೂ ಸ್ವಾಭಿಮಾನ ಇದೆ. ಬೇರೆಯವರು ಕೊಟ್ಟರೂ ನಾವು ತಿನ್ನುವುದಿಲ್ಲ. ನಾವು ಸಾಕಷ್ಟು ಆಹಾರ ಸೇವಿಸಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ’’ ಎಂದು ಮಾದಿಗ ಸಮುದಾಯಕ್ಕೆ ಸೇರಿದ ಇವರು ತಮ್ಮ ಬವಣೆಯನ್ನು ಬಿಚ್ಚಿಡುತ್ತಾರೆ.

ನಾರಾಯಣಪ್ಪಕುಟುಂಬದಂತೆ ಇವರ ಸಮುದಾಯದ ಬಹುತೇಕ ಕುಟುಂಬಗಳ ಸದಸ್ಯರು, ನೋಟು ರದ್ದತಿಯ ಹೊಡೆತದಿಂದ ಪಾರಾಗಲು ಕಡಿಮೆ ಆಹಾರ ಸೇವಿಸುತ್ತಿದ್ದರೆ, ಕೆನರಾ ಬ್ಯಾಂಕಿನ ರೊದ್ದಂ ಶಾಖೆಯಲ್ಲಿ ನಗದು ಕೊರತೆ ಮಾತ್ರ ಗ್ರಾಮದ ಬಹುತೇಕ ಮಂದಿಯ ಬದುಕನ್ನು ಅಲ್ಲೋಕ ಕಲ್ಲೋಲವಾಗಿಸಿದೆ. ‘‘ನಮ್ಮಲ್ಲಿ ಹೆಚ್ಚು ಹಣ ಇಲ್ಲ. ನಮಗೆ ಈಗ ಬೇಕಾದ್ದು ಕೆಲಸ’’ ಎನ್ನುವುದು ನಾರಾಯಣಪ್ಪಅವರ ಸ್ಪಷ್ಟ ನುಡಿ.

ಘಟನೋತ್ತರ: ಒಂದು ತಿಂಗಳ ಕಾಲ ಅರೆಹೊಟ್ಟೆ ಉಂಡು, ನಾರಾಯಣಪ್ಪಕುಟುಂಬ ಡಿಸೆಂಬರ್ 4ರಂದು ಬೆಂಗಳೂರಿಗೆ ತೆರಳಿದೆ. ತಾವು ಅಂದುಕೊಂಡದ್ದಕ್ಕಿಂತ ಮೂರು ವಾರ ಮೊದಲೇ ಗ್ರಾಮ ಬಿಟ್ಟಿದ್ದಾರೆ. ಇತರ ದಲಿತ ಕುಟುಂಬಗಳ ಮಂದಿ ಕೂಡಾ ಮಕ್ಕಳನ್ನು ಹಿರಿಯರ ಬಳಿ ಬಿಟ್ಟು ಊರು ತೊರೆದಿದ್ದಾರೆ. ಕಳೆದ ತಿಂಗಳು ಹಬ್ಬದ ವಾತಾವರಣ ಇದ್ದ ಗ್ರಾಮ ಇದೀಗ ನಿಶ್ಶಬ್ದವಾಗಿದೆ.

ಕೃಪೆ: countercurrents.org

Writer - ಎಂ. ರಾಹುಲ್

contributor

Editor - ಎಂ. ರಾಹುಲ್

contributor

Similar News