ದುಷ್ಕರ್ಮಿಗಳಿಂದ ಪಿಣರಾಯಿಗೆ ವಿರೋಧ: ಪೊಲೀಸ್ ಇಲಾಖೆ ಖಾತ್ರಿಪಡಿಸಲಿ

Update: 2017-02-23 18:29 GMT

ಮಾನ್ಯರೆ,

ಮಂಗಳೂರಿನಲ್ಲಿ ಫೆಬ್ರವರಿ 25ರಂದು ಸಿಪಿಐಎಂ ಪಕ್ಷದ ವತಿಯಿಂದ ಐಕ್ಯತಾ ರ್ಯಾಲಿಯನ್ನು ಆಯೋಜಿಸಲಾಗಿದೆ. ಈ ಐಕ್ಯತಾ ರ್ಯಾಲಿ ಸಿಪಿಐಎಂ ಪಕ್ಷದಿಂದ ನಡೆಯುತ್ತಿದೆಯಾದರೂ ಇದು ಇಡೀ ರಾಜ್ಯದ ಬುದ್ಧಿಜೀವಿ ವಲಯ, ಮಾನವ ಹಕ್ಕುಗಳ ಪರ ಇರುವ ಕಾರ್ಯಕರ್ತರ, ಜನಪರ ಕಾರ್ಯಕರ್ತರ, ಜೀವಪ್ರೇಮಿಗಳ ರ್ಯಾಲಿಯಾಗಿದೆ. ಹಿಂದುತ್ವವಾದಿ ತೀವ್ರಗಾಮಿಗಳು ಕರಾವಳಿಯಲ್ಲಿ ನಡೆಸುತ್ತಿರುವ ಭಯೋತ್ಪಾದನೆಯನ್ನು ವಿರೋಧಿಸಿ ಈ ರ್ಯಾಲಿಯನ್ನು ನಡೆಸಲಾಗುತ್ತಿದೆ. ಈ ರ್ಯಾಲಿಯನ್ನು ಕೇರಳದ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್ ಉದ್ಘಾಟನೆ ಮಾಡಲಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರ ಕೇರಳದಲ್ಲಿ ಸಂಘಪರಿವಾರದ ಭಯೋತ್ಪಾದನೆಗೆ ಅವಕಾಶ ಕೊಡುತ್ತಿಲ್ಲ. ಸಣ್ಣ ಕೋಮುಗಲಭೆಯಾದರೂ ಕೇರಳ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಅಲ್ಲಿನ ವಿಚ್ಛಿದ್ರಕಾರಿ ಶಕ್ತಿಯಾಗಿರುವ ಸಂಘಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಈ ಕಾರಣಕ್ಕಾಗಿ ಐಕ್ಯತಾ ರ್ಯಾಲಿಗೆ ಆಗಮಿಸುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ವಿರೋಧ ವ್ಯಕ್ತಪಡಿಸಿರುವ ಸಂಘಪರಿವಾರ ದಕ್ಷಿಣಕನ್ನಡ ಜಿಲ್ಲಾ ಬಂದ್‌ಗೆ ಕರೆ ನೀಡಿದೆ.

ಸಂಘ ಪರಿವಾರ ಅಧಿಕೃತವಾಗಿ ಸಂಘ ನಿಕೇತನದಲ್ಲಿ ಸಭೆ ನಡೆಸಿ, ಮಾಧ್ಯಮಗಳ ಮೂಲಕ ಬಂದ್ ಕರೆ ನೀಡಿದೆ. ರಾಜ್ಯದ ಜನರ ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಅಪರಾಧವಾಗುತ್ತದೆ. ಇದಲ್ಲದೆ ಬಂದ್‌ನಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಪೂರ್ವಭಾವಿ ಸೂಚನೆಗಳನ್ನೂ ಸಂಘ ಪರಿವಾರ ನೀಡಿದೆ. ಮಂಗಳೂರಿನ ತೊಕ್ಕೊಟ್ಟು ಎಂಬಲ್ಲಿರುವ ಸಿಪಿಐಎಂ ಕಚೇರಿಗೆ ನಿನ್ನೆ ತಡ ರಾತ್ರಿ ಸಂಘ ಪರಿವಾರಿಗಳು ಬೆಂಕಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಾಗತಕ್ಕೆ ಹಾಕಲಾದ ಬ್ಯಾನರ್, ಫ್ಲೆಕ್ಸ್, ಕಟೌಟ್‌ಗಳು, ಕಮಾನುಗಳನ್ನು ಅಪಹರಣ ಮಾಡಲಾಗಿದೆ. ಇವೆಲ್ಲವೂ ಫೆಬ್ರವರಿ 23ರಂದು ಸಂಘಪರಿವಾರ ಹಿಂಸಾಚಾರ ನಡೆಸಲು ನಡೆಸಿರುವ ಸಿದ್ಧತೆ ಎಂದು ನಾವು ಅಂದುಕೊಂಡಿದ್ದೇವೆ.

ಸಂಘ ಪರಿವಾರ ಮಂಗಳೂರಿನಲ್ಲಿ ನಡೆಸಿರುವ ಭಯೋತ್ಪಾದಕ ಕೃತ್ಯಗಳು ಒಂದೆರಡಲ್ಲ. ಹಿಂದುಳಿದ ವರ್ಗಗಳ ಅಮಾಯಕ ಯುವಕರಿಗೆ ಧರ್ಮದ ಅಫೀಮು ತುಂಬಿ ಕೋಮು ಗಲಭೆಗಳನ್ನು, ಅನೈತಿಕ ಪೊಲೀಸ್ ಗಿರಿಗಳನ್ನು ಮಾಡುತ್ತಲೇ ಬಂದಿದೆ. ಆದರೂ ಪೊಲೀಸ್ ಇಲಾಖೆ ಸಂಘ ಪರಿವಾರವನ್ನಾಗಲಿ, ಅದರ ಸಹ ಸಂಘಟನೆಗಳಾದ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ತನ್ನಾಗಲೀ, ಹಿಂದೂ ಜಾಗರಣಾ ವೇದಿಕೆಯನ್ನಾಗಲಿ ನಿಷೇಧಿಸುವ ಗೋಜಿಗೆ ಹೋಗಿಲ್ಲ. ಇಂದು ಹತ್ತಾರು ಹಿಂದುಳಿದ ವರ್ಗದ ಹಿಂದುತ್ವವಾದಿ ಯುವಕರೇ ಕೋಮು ಗಲಭೆಗಳಿಗೆ ಬಲಿಯಾಗುತ್ತಿದ್ದಾರೆ. ಹಿಂದುತ್ವವಾದಿಗಳ ದಾಳಿಯಿಂದ ನೂರಾರು ಮುಸ್ಲಿಂ ಕುಟುಂಬಗಳು ಬೀದಿಗೆ ಬಿದ್ದಿವೆ. ಪೊಲೀಸ್ ವೈಫಲ್ಯದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಮುಂದುವರಿಯುತ್ತಲೇ ಇದೆ. ಈ ಕಾರಣಕ್ಕಾಗಿಯೇ ಜನರ ಮಧ್ಯೆ ಸಂಬಂಧಗಳನ್ನು ಬೆಸೆಯಲು ಐಕ್ಯತಾ ರ್ಯಾಲಿಯನ್ನು ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಸಂಘಪರಿವಾರ ತನ್ನ ದುಷ್ಕೃತ್ಯಗಳಿಗೆ ಬಳಕೆ ಮಾಡುತ್ತಿರುವ ಹಿಂದುಳಿದ ವರ್ಗಗಳ ಮಧ್ಯೆ ಜಾಗೃತಿ ಮೂಡಿಸುವಲ್ಲಿ ಐಕ್ಯತಾ ರ್ಯಾಲಿ ಸಫಲವಾಗುತ್ತಿದೆ ಎಂದು ತಿಳಿಯುತ್ತಲೇ ಸಂಘಪರಿವಾರ ಕಿಡಿಗೇಡಿ ಕೃತ್ಯಗಳನ್ನು ನಡೆಸಲು ಪ್ರಾರಂಭಿಸಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಳವ/ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದು, ಕರಾವಳಿಯ ನೆಲದ ಜೊತೆ ಸಂಬಂಧ ಇದೆ. ಈ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿಯಲ್ಲಿ ಶಾಂತಿ ಸೌಹಾರ್ದ ಏರ್ಪಡಲು ಪಿಣರಾಯಿ ವಿಜಯನ್ ಮಾತುಗಳು ಇಂದಿನ ತುರ್ತು ಅಗತ್ಯವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯ ಆಗಮನದ ದಿನ ಬಂದ್ ಆಚರಿಸುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಇಂತಹ ಸಂವಿಧಾನ ಬಾಹಿರ ಕೃತ್ಯಗಳಿಗೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಬಂದ್ ಘೋಷಣೆ ಮಾಡಿರುವ ವ್ಯಕ್ತಿ/ ಸಂಘಟನೆಯ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ತಕ್ಷಣ ಬಂಧನ ಮಾಡಬೇಕು ಮತ್ತು ಕಿಡಿಗೇಡಿ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನೂ ಬಂಧಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

ಫೆಬ್ರವರಿ 25ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೆೇಟಿ ಸಂದರ್ಭ ಯಾವುದೇ ಬಂದ್ ಇರುವುದಿಲ್ಲ ಮತ್ತು ಜನಜೀವನದ ಮೇಲೆ ದುಷ್ಕರ್ಮಿಗಳು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸ್ ಇಲಾಖೆ ಜನರಿಗೆ ಖಾತ್ರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಾವು ಒತ್ತಾಯಿಸುತ್ತಿದ್ದೇವೆ.

 (ಅನಂತ್ ನಾಯಕ್, ಶಿವಮಾಣಿ, ಶ್ರೀನಿವಾಸ್ ಕರಿಯಪ್ಪ, ಕಾವ್ಯಾ ಅಚ್ಚುತ್, ಮಂಜುನಾಥ್ ಸಿದ್ದಾಪುರ ಹಾಗೂ ಇತರರು) 

Writer - -ಅಭಿಮತ ಬೆಂಗಳೂರು

contributor

Editor - -ಅಭಿಮತ ಬೆಂಗಳೂರು

contributor

Similar News