ಬಾಬರಿ ಮಸೀದಿ ಪ್ರಕರಣದಲ್ಲಿ ಆರನೇ ಅರೋಪಿಗೆ ಜಾಮೀನು
Update: 2017-05-24 16:35 IST
ಲಕ್ನೋ,ಮೇ 24: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರನೇ ಆರೋಪಿ, ಶಿವಸೇನೆಯ ಮಾಜಿ ಸಂಸದ ಸತೀಶ ಪ್ರಧಾನ್ಗೆ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ.
ರಾಜಕೀಯವಾಗಿ ಸೂಕ್ಮವಾಗಿರುವ ಈ ಪ್ರಕರಣದ ವಿಚಾರಣೆಯನ್ನು ದೈನಂದಿನ ಆಧಾರದಲ್ಲಿ ಮೇ 20ರಿಂದ ಆರಂಭಿಸಿರುವ ವಿಶೇಷ ಸಿಬಿಐ ನ್ಯಾಯಾಲಯವು ಆರೋಪಿಗಳೆಂದು ಹೆಸರಿಸಲಾಗಿರುವ ವಿಶ್ವ ಹಿಂದು ಪರಿಷತ್ನ ನಾಯಕರಾದ ಚಂಪತ್ ರಾಯ್, ವೈಕುಂಠ ಲಾಲ್ ಶರ್ಮಾ, ಮಹಂತ ನೃತ್ಯ ಗೋಪಾಲ ದಾಸ್,ರಾಮವಿಲಾಸ್ ವೇದಾಂತಿ ಮತ್ತು ಧರ್ಮದಾಸ್ ಮಹಾರಾಜ್ ಅವರಿಗೆ ಈಗಾಗಲೇ ಜಾಮೀನುಗಳನ್ನು ಮಂಜೂರು ಮಾಡಿದೆ.
ಪ್ರಧಾನ್ ಗೈರುಹಾಜರಾಗಿದ್ದರಿಂದ ನ್ಯಾಯಾಲಯವು ಮಂಗಳವಾರ ವಿಚಾರಣೆ ಯನ್ನು ಕೈಬಿಟ್ಟಿತ್ತು.
ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿ ಅವರು ಆರೋಪಿಗಳಾಗಿರುವ ಪ್ರಕರಣ ಸೇರಿದಂತೆ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯವು ನಡೆಸುತ್ತಿದೆ.