×
Ad

ಖಾಸಗಿ ಭಾಗಕ್ಕೆ ಲಾಠಿಯಿಂದ ತಿವಿದು ಮಹಿಳಾ ಕೈದಿಯನ್ನು ಕೊಂದ ಜೈಲರ್ ಗಳು

Update: 2017-06-27 13:11 IST

ಮುಂಬೈ, ಜೂ. 27: ಇಲ್ಲಿನ ಬೈಕುಲ್ಲ ಕಾರಾಗೃಹದ ಜೈಲರುಗಳು 38 ವರ್ಷದ ಮಹಿಳಾ ಕೈದಿಯೊಬ್ಬರನ್ನು ಅಮಾನುಷವಾಗಿ ಲಾಠಿಯಿಂದ ಆಕೆಯ ಖಾಸಗಿ ಭಾಗಕ್ಕೆ ತಿವಿದು ಆಕೆಯನ್ನು ಕೊಂದ ಘಟನೆಯೊಂದು ವರದಿಯಾಗಿದೆ.

ಬೆಳಗ್ಗಿನ ರೇಶನ್ ನಲ್ಲಿ ಎರಡು ಮೊಟ್ಟೆಗಳು ಹಾಗೂ ಐದು ಪಾವ್ ತುಂಡುಗಳು ಕಾಣುತ್ತಿಲ್ಲ ಎಂದು ದೂರಿದ್ದೇ ಆಕೆಯ ಮೇಲೆ ಈ ಅಮಾನುಷ ದೌರ್ಜನ್ಯಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರು ಸಲ್ಲಿಸಿದ ದೂರಿನ ಆಧಾರದಲ್ಲಿ ದಾಖಲಾದ ಎಫ್ ಐ ಆರ್ ನಲ್ಲಿ ಹೇಳಲಾಗಿದೆ. ಈ ಘಟನೆಯ ಸಂಬಂಧ ಆರು ಮಂದಿ ಜೈಲರುಗಳ ವಿರುದ್ಧ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮೃತ ಕೈದಿಯನ್ನು ಮಂಜುಳಾ ಶೆಟ್ಯೆ ಎಂದು ಗುರುತಿಸಲಾಗಿದೆ.

ಈ ಘಟನೆಯ ನಂತರ ಜೈಲಿನಲ್ಲಿ ಕೈದಿಗಳು ಹಿಂಸಾತ್ಮಕ ಪ್ರತಿಭಟನೆಗಿಳಿದಿದ್ದು, ತನ್ನ ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ಮಾಜಿ ಸೆಲೆಬ್ರಿಟಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಸುಮಾರು 200 ಕೈದಿಗಳ ವಿರುದ್ಧ ಹಿಂಸೆಗಾಗಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಜೂನ್ 23ರಂದು ಬೆಳಿಗ್ಗೆ 9 ರ ಸುಮಾರಿಗೆ ನಡೆದಿದೆ. ತನ್ನ ಉತ್ತಮ ನಡತೆಯಿಂದಾಗಿ ತಾನಿರುವ ಬ್ಯಾರಾಕಿನ ವಾರ್ಡನ್ ಆಗಿದ್ದ ಮಂಜುಳಾ ಆ ದಿನ ಬೆಳಗ್ಗಿನ ಉಪಾಹಾರಕ್ಕಾಗಿ ನಿಗದಿ ಪಡಿಸಲಾಗಿದ್ದ ವಸ್ತುಗಳಲ್ಲಿ ಎರಡು ಮೊಟ್ಟೆಗಳು ಮತ್ತು ಐದು ಪೀಸ್ ಪಾವ್ ಇರದೇ ಇದ್ದುದನ್ನು ಗಮನಿಸಿದ್ದು, ಆಕೆಯನ್ನು ಜೈಲಿನ ಅಧಿಕಾರಿ ಮನೀಶಾ ಪೋಖರ್ಕರ್ ಅವರ ಖಾಸಗಿ ಕೊಠಡಿಗೆ ಹೋಗುವಂತೆ ಹೇಳಲಾಗಿತ್ತು.

ಪ್ರತ್ಯಕ್ಷದರ್ಶಿ ಸಾಕ್ಷಿಯ ಪ್ರಕಾರ ಮಂಜುಳಾ ನೋವಿನಿಂದ ಆರಚುವ ಸದ್ದು ಕೇಳಿಸಿತ್ತು. ಸ್ವಲ್ಪ ಹೊತ್ತಿನ ನಂತರ ತನ್ನ ಸೆಲ್ ಗೆ ಹಿಂದಿರುಗಿದ ಮಂಜುಳಾ ನೋವಿನಲ್ಲಿದ್ದಳು. ನಂತರ ಜೈಲರುಗಳ ಒಂದು ತಂಡ ಅಲ್ಲಿಗೆ ಬಂದು ಮಂಜುಳಾ ಮೇಲೆ ಹಲ್ಲೆ ನಡೆಸಿತು. ಪ್ರತ್ಯಕ್ಷದರ್ಶಿ ಪ್ರಕಾರ ಮಹಿಳಾ ಕಾನ್‌ಸ್ಟೇಬಲ್ ಗಳಾದ ಬಿಂದು ನಾಯ್ಕಡೆ, ವಸೀಮಾ ಶೇಕ್, ಶೀತಲ್ ಶೆಗಾಂವ್ಕರ್, ಸುರೇಖಾ ಗುಲ್ವೆ ಹಾಗೂ ಆರತಿ ಶಿಂಗ್ನೆ ಮಂಜುಳಾಳನ್ನು ವಿವಸ್ತ್ರಗೊಳಿಸಿ ಅವರಲ್ಲಿಬ್ಬರು ಆಕೆಯ ಕಾಲುಗಳನ್ನು ದೂರವಿರಿಸಿದಾಗ ವಸೀಮಾ ಲಾಠಿಯಿಂದ ಆಕೆಯ ಖಾಸಗಿ ಭಾಗಕ್ಕೆ ತಿವಿದಿದ್ದಾಗಿ ತಿಳಿಸಿರುತ್ತಾರೆ.

ತೀವ್ರ ರಕ್ತಸ್ರಾವದಿಂದ ಬಳಲಿದ ಮಂಜುಳಾ ಶೌಚಾಲಯದಲ್ಲಿ ಸ್ಮತಿ ತಪ್ಪಿ ಬಿದ್ದಾಗ ಆಕೆಯನ್ನು ಜೈಲಿನ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಜೆಜೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದರು. ಆಕೆಯ ಶ್ವಾಸಕೋಶಕ್ಕೆ ಪೆಟ್ಟಾಗಿತ್ತು ಹಾಗು ಆಕೆಯ ದೇಹದ ಹಲವೆಡೆ ಗಾಯಗಳಾಗಿದ್ದವು ಎಂದು ಪೋಸ್ಟ್ ಮಾರ್ಟಂ ವರದಿ ತಿಳಿಸಿದೆ.

ಐದು ಮಂದಿ ಕಾನ್‌ಸ್ಟೇಬಲ್ ಗಳು ಹಾಗೂ ಜೈಲ್ ಅಧಿಕಾರಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ತನ್ನ ನಾದಿನಿ ವಿದ್ಯಾ ಶೆಟ್ಯೆ ಕೊಲೆ ಪ್ರಕರಣದಲ್ಲಿ ಮಂಜುಳಾ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಆಕೆಯ ತಾಯಿ ಕೂಡ ಶಿಕ್ಷೆಗೊಳಗಾಗಿದ್ದರೂ ಆಕೆ ಮೃತಪಟ್ಟಿದ್ದಾರೆ. ವಿದ್ಯಾಳನ್ನು ಜನವರಿ 4, 1996ರಲ್ಲಿ ಬೆಂಕಿ ಹಚ್ಚಿ ಸಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News