ಈ ಮಕ್ಕಳ ಬಗ್ಗೆ ಅಸಡ್ಡೆ ಯಾಕೆ?

Update: 2017-06-30 06:01 GMT

ಮಾನ್ಯರೆ,

 ಕಡ್ಡಾಯ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಅನೇಕ ಶಾಲೆಗಳಿಗೆ ಪ್ರವೇಶ ಅವಕಾಶವನ್ನು ಪಡೆದಿರುವ ಮಕ್ಕಳನ್ನು ಬಹಳಷ್ಟು ಶಾಲೆಗಳಲ್ಲಿ ಮಾನವೀಯತೆ ಇಲ್ಲದೆ ಪಶುಗಳಂತೆ ನಡೆಸಿಕೊಳ್ಳುತ್ತಿರುವ ಸಂಗತಿ ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿವೆ. ಇಂತಹ ಮಕ್ಕಳಿಗೆ ಪ್ರತ್ಯೇಕವಾದಂತಹ ತರಗತಿಗಳಲ್ಲಿ ಅನುಭವವಿಲ್ಲದ ಶಿಕ್ಷಕರಿಂದ ಶಿಕ್ಷಣ ಕೊಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ನೆಲದ ಮೇಲೆ ಇಂತಹ ಮಕ್ಕಳನ್ನು ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಬೇರೆ ಮಕ್ಕಳ ಜೊತೆಯಲ್ಲಿ ಇವರು ಸೇರಿ ಆಟವಾಡಲು ಅಥವಾ ಪಾಠಕಲಿಯಲು ಅವಕಾಶ ಮಾಡಿಕೊಡುತ್ತಿಲ್ಲ.

ಹಲವಾರು ಶಾಲೆಗಳಲ್ಲಿ ಆಯಾಗಳಿಂದ ಇಂತಹ ಮಕ್ಕಳಿಗೆ ಪಾಠವನ್ನು ಮಾಡಿಸುತ್ತಾರೆ. ಕಡ್ಡಾಯ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಪ್ರವೇಶ ಪಡೆದಿರುವ ಮಕ್ಕಳು ಬಡವರು, ಬುದ್ಧಿವಂತರಲ್ಲದವರು, ರೋಗರುಜಿನಗಳಿಂದ ನರಳುತ್ತಿದ್ದಾರೆ ಎಂಬ ಮಾತುಗಳನ್ನು ಅನ್ಯ ಮಕ್ಕಳ ಮುಂದೆ ಬಹಿರಂಗವಾಗಿ ಹೇಳುತ್ತಾ ಮಕ್ಕಳ ಮನಸ್ಸಿನಲ್ಲಿ ಕೆಟ್ಟ ಭಾವನೆಯನ್ನು ಬಿತ್ತುತ್ತಿದ್ದಾರೆ. ಅನೇಕ ಪ್ರತಿಷ್ಠಿತ ಶಾಲೆಗಳಲ್ಲಿ ಮನುಷ್ಯತ್ವವಿಲ್ಲದೆ ಇಂತಹ ಪುಟ್ಟ ಪುಟ್ಟ ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ತಾತ್ಸಾರ, ಅಸಡ್ಡೆಯನ್ನು ತೋರಿಸುತ್ತಿದ್ದಾರೆ. ಸಾಮಾನ್ಯವಾದ ರೀತಿಯಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ಉತ್ತೇಜನ ನೀಡಲು ಕೊಡುತ್ತಿರುವ ಯಾವುದೇ ರೀತಿಯ ಪ್ರೋತ್ಸಾಹವನ್ನು ಕಡ್ಡಾಯ ಶಿಕ್ಷಣ ಕಾಯ್ದೆಯಡಿಯಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ನೀಡುತ್ತಿಲ್ಲ.

ಉದಾಹರಣೆಗೆ, ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗಳಲ್ಲಿ ಉತ್ತಮವಾದಂತಹ ಪ್ರದರ್ಶನವನ್ನು ನೀಡಿದ ಮಕ್ಕಳಿಗೆ ಬೆಳ್ಳಿಯ ಪದಕಗಳನ್ನು ಪ್ರೋತ್ಸಾಹದಾಯಕವಾಗಿ ನೀಡಿರುತ್ತಾರೆ. ಆದರೆ, ಆರ್‌ಟಿಇ ಯಡಿಯಲ್ಲಿ ಪ್ರವೇಶ ಪಡೆದಿರುವ ಮಕ್ಕಳಿಗೆ ಇಂತಹ ಯಾವ ಪ್ರೋತ್ಸಾಹದ ಪದಕಗಳನ್ನ್ನೂ ನೀಡಿರುವುದಿಲ್ಲ. ಶೌಚಾಲಯಗಳನ್ನು ಸಹ ಇಂತಹ ಮಕ್ಕಳು ಬಳಸಲು ಕೆಲವು ಶಾಲೆಯಲ್ಲಿ ಬಿಡುತ್ತಿಲ್ಲ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂತಹ ಶಾಲೆಗಳ ಬಗ್ಗೆ ದಿಢೀರ್ ಭೇಟಿ ನೀಡಿ ತಪಾಸಣೆ ಮಾಡಿ ಅವರು ಮಾಡುತ್ತಿರುವ ಹೀನಕೃತ್ಯಗಳನ್ನು ಬಹಿರಂಗಗೊಳಿಸಿ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿ ಜೈಲಿಗೆ ಹಾಕಬೇಕು. ಮುಗ್ಧ ಮನಸ್ಸಿನ ಪುಟ್ಟ ಪುಟ್ಟ ಕಂದಮ್ಮಗಳ ಆ ಮುಗ್ಧ ಮನಸ್ಸುಗಳಲ್ಲಿ ಇಂತಹ ವಿಷದ ಭಾವನೆಯನ್ನು ಬಿತ್ತುತ್ತಿರುವ ಶಿಕ್ಷಣ ಸಂಸ್ಥೆಯವರು ರಾಕ್ಷಸರೇ?. ರಾಜ್ಯ ಸರಕಾರ ಈ ಸಂಬಂಧದಲ್ಲಿ ಅಗತ್ಯವಾದರೆ ಸುಗ್ರೀವಾಜ್ಞೆಯನ್ನಾದರೂ ಹೊರಡಿಸಿ ಬಡವರ ಮನೆಯ ಪುಟ್ಟ ಮಕ್ಕಳ ರಕ್ಷಣೆಗೆ ನಿಲ್ಲಬೇಕು.

Similar News