ಯು.ಆರ್.ರಾವ್‌ಗಿಂತ ಸೆಲೆಬ್ರಿಟಿಗಳ ವಿಚಾರವೇ ಮಹತ್ವದ್ದೇ?

Update: 2017-07-26 18:16 GMT

ಮಾನ್ಯರೆ,

ದಿನಾಂಕ 24.07.2017ರಂದು ದೇಶದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು. ಆರ್. ರಾವ್ ನಿಧನರಾಗಿದ್ದಾರೆ. ಬಾಹ್ಯಕಾಶ ಕ್ಷೇತ್ರದಲ್ಲಿ ಇವರ ಸಾಧನೆ ವಿಶ್ವಕ್ಕೆ ಪರಿಚಿತವಾದದ್ದು. ಅನೇಕ ಉಪಗ್ರಹಗಳ ಉಡಾವಣೆಯಲ್ಲಿ ಇವರ ಸೇವೆ ಅನನ್ಯವಾದುದು. ರಾಷ್ಟ್ರದ ಅನೇಕ ಪ್ರಶಸ್ತಿಗಳನ್ನು ಪಡೆದು ಗೌರವಕ್ಕೆ ಪಾತ್ರರಾದವರು. ಇವರ ಸಾವಿಗೆ ವಿಶ್ವದ ನಾಯಕರು, ರಾಷ್ಟ್ರದ ನಾಯಕರು ಮತ್ತು ಅನೇಕ ರಾಜ್ಯದ ಮುಖ್ಯಮಂತ್ರಿಗಳು ಸಂತಾಪ ವ್ಯಕ್ತಪಡಿಸಿರುತ್ತಾರೆ.

ದುರಂತವೆಂದರೆ ನಮ್ಮ ದೃಶ್ಯ ಮಾಧ್ಯಮದವರಿಗೆ ಯು. ಆರ್. ರಾವ್‌ರವರ ಸಾಧನೆಯನ್ನು ಹೇಳುವ, ಅವರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೀಡುವ ಕಾರ್ಯಕ್ರಮಕ್ಕಿಂತ ಖಾಸಗಿ ವಾಹಿನಿಯ ‘ಬಿಗ್‌ಬಾಸ್’ನಲ್ಲಿ ಭಾಗವಹಿಸಿ ಗೆದ್ದವನ ಹುಚ್ಚಾಟಗಳು, ಅವನ ಜಗಳ ಇದೇ ದೊಡ್ಡ ಸುದ್ದಿಯಾಗಿ ಬೆಳಗ್ಗಿನಿಂದ ರಾತ್ರಿಯವರೆಗೆ ಈ ವಿಚಾರವನ್ನೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಿಕೊಂಡು ಜನರಿಗೆ ಹೇಸಿಗೆಯನ್ನುಂಟುಮಾಡಿರುತ್ತಾರೆ.

ಯು. ಆರ್. ರಾವ್‌ಗಿಂತ ಇಂತಹ ಸೆಲೆಬ್ರಿಟಿಗಳ ವಿಚಾರವೇ ಹೆಚ್ಚು ಮಹತ್ವ ಎಂದು ಭಾವಿಸಿರುವ ನಮ್ಮ ದೃಶ್ಯ ಮಾಧ್ಯಮದವರಿಗೆ ದೇವರೇ ಬುದ್ಧ್ದಿ ಕೊಡಬೇಕು. ತೋರಿಸಿದ್ದನ್ನೆಲ್ಲ ನೋಡುತ್ತಾರೆ ಎನ್ನುವ ಭಾವನೆ ದೃಶ್ಯ ಮಾಧ್ಯಮದ ವರಿಗೆ ಇದ್ದರೆ ಅದು ತಪ್ಪು. ಇನ್ನು ಮುಂದಾದರೂ ಎಚ್ಚರಿಕೆಯಿಂದ ಕಾರ್ಯಕ್ರಮಗಳನ್ನು ಬಿತ್ತರಿಸುವುದು ಒಳ್ಳೆಯದು.

-ಕೆ.ಎಸ್.ನಾಗರಾಜ್,ಹನುಮಂತನಗರ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News