ಬಿಜೆಪಿ ಎದುರಿಸಲು ಕಾರ್ಯತಂತ್ರದಲ್ಲಿ ಬದಲಾವಣೆ ಅಗತ್ಯ: ಅಬ್ದುಲ್ಲ
Update: 2017-08-09 23:33 IST
ಹೊಸದಿಲ್ಲಿ, ಆ.9: ಬಿಜೆಪಿಯನ್ನು ಎದುರಿಸಲು ವಿಪಕ್ಷಗಳು ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಬೇಕಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಹೇಳಿದ್ದಾರೆ.
ನಿರ್ದಯ ಬಿಜೆಪಿ ರಾಜಕೀಯ ತಂತ್ರವನ್ನು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರದ ಬದಲಾವಣೆ ಹಾಗೂ ಆತ್ಮಶೋಧನೆಯ ಅಗತ್ಯವಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಉಮರ್ ಅಬ್ದುಲ್ಲ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಗುಜರಾತ್ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ಗೆಲುವು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಇದು ಇಷ್ಟೊಂದು ಕಠಿಣವಾಗಿರಬಾರದಿತ್ತು ಎಂದರು.
ಚುನಾವಣಾ ಆಯೋಗವನ್ನು ಶ್ಲಾಘಿಸಿದ ಅವರು, ಐವರು ಹಿರಿಯ ಕ್ಯಾಬಿನೆಟ್ ಸಚಿವರು ಒಡ್ಡಿದ್ದ ಒತ್ತಡವನ್ನು ಮೀರಿ ನಿಂತು ಚುನಾವಣಾ ಆಯೋಗ ನೀಡಿದ ತೀರ್ಪು, ಬಿಜೆಪಿಗೆ ಮಾರಣಾಂತಿಕ ಆಘಾತವಾಗಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.