ಡೇರಾ ಚರ್ಚಾ ಘರ್ ಅನ್ನು ಶಾಲೆ, ವಿವಾಹ ಸಭಾ ಮಂದಿರವಾಗಿ ಪರಿವರ್ತಿಸಲು ಗ್ರಾಮಸ್ಥರ ಆಗ್ರಹ
ಮೀರತ್, ಆ. 28: ಡೇರಾ ಸಾಚಾ ಸೌದಾದ ಚರ್ಚಾ ಘರ್ ಅನ್ನು ಶಾಲೆ, ವಿವಾಹ ಸಭಾ ಮಂದಿರವಾಗಿ ಪರಿವರ್ತಿಸಲು , ಉತ್ತರಪ್ರದೇಶದ ಮುಹಮ್ಮದ್ಪುರ ಗುಮಿ ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ನಾಮ್ ಚರ್ಚಾ ಘರ್ ಅಥವಾ ಚರ್ಚಾ ಘರ್ ಆರಂಭಿಸಲಾಗಿತ್ತು.
ಪ್ರತೀ ರವಿವಾರ ಧಾರ್ಮಿಕ ಚರ್ಚೆ ಹಾಗೂ ಪ್ರಾರ್ಥನೆಗೆ ಗುರ್ಮಿತ್ ಬೆಂಬಲಿಗರು ಈ ಚರ್ಚಾ ಘರ್ ಆರಂಭಿಸಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮದ ಯಾವುದೇ ನಿವಾಸಿ ಬಾಬಾ ಗುರ್ಮಿತ್ ಪಂಥದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಗ್ರಾಮದ ಮುಖ್ಯಸ್ಥ ಜೈವೀರ್ ಸಿಂಗ್ ಪ್ರತಿಪಾದಿಸಿದ್ದಾರೆ.
ಚರ್ಚಾ ಘರ್ನಿಂದ ಗ್ರಾಮಸ್ಥರಿಗೆ ಯಾವುದೇ ಲಾಭ ಇಲ್ಲ. ಬಹುಜನರ ಹಿತಾಸಕ್ತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಚರ್ಚಾಘರ್ ಅನ್ನು ಶಾಲೆ ಅಥವಾ ವಿವಾಹ ಸಭಾ ಮಂದಿರವಾಗಿ ಪರಿವರ್ತಿಸಿದರೆ ಉತ್ತಮ ಎಂದು ಅವರು ಹೇಳಿದ್ದಾರೆ.
ಈ ಚರ್ಚಾ ಘರ್ ಅನ್ನು ಮೀರತ್ನ ಬ್ರಹ್ಮಪುರಿಯ ವೈದ್ಯರೊಬ್ಬರು ನಿರ್ವಹಿಸುತ್ತಿದ್ದಾರೆ. ಪಾಲನೆಗಾಗಿ ಸ್ವಯಂ ಸೇವಕನೋರ್ವನನ್ನು ನಿಯೋಜಿಸಲಾಗಿದೆ. ಈ ಹಳ್ಳಿಯಲ್ಲಿ 1,600 ನಾಗರಿಕರು ಇದ್ದಾರೆ ಎಂದು ಅವರು ಹೇಳಿದ್ದಾರೆ.