ಇಂತಹ ಅದಾಲತ್ ಬೇಕೇ?
ಮಾನ್ಯರೇ,
ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣದ ರಜತಾದ್ರಿಯಲ್ಲಿ ದಿನಾಂಕ 26.12.2017ರಿಂದ 30.12.2017ರವರೆಗೆ ನಡೆಯುತ್ತಿರುವ ಆಧಾರ್ ಅದಾಲತ್ನ್ನು ಮಾನ್ಯ ಜಿಲ್ಲಾಧಿಕಾರಿಯವರು ಉದ್ಘಾಟಿಸಿ ದಿನಕ್ಕೆ 70 ಜನರಿಗೆ ತಿದ್ದುಪಡಿ-ನೋಂದಣಿ ಮಾಡಲು ಕರೆ ನೀಡಿರುತ್ತಾರೆ. ಆದರೆ ನಾನು ದಿನಾಂಕ 27.12.2017ರಂದು ಅಪರಾಹ್ನ 2:00 ಗಂಟೆಗೆ ಹೋದರೆ ನೋಂದಣಿ ನಡೆಯುವ ಹಾಲ್ ಗೆ ಬೀಗ ಜಡಿಯಲಾಗಿತ್ತು.ಇನ್ನೊಂದು ಬಾಗಿಲಿನಿಂದ ಹೋಗಿ ವಿಚಾರಿಸಿದರೆ ಅಲ್ಲಿನ ಸಿಬ್ಬಂದಿ ದಿನಾಂಕ 30.12.2017ರವರೆಗೆ 300 ಜನರನ್ನು ಈಗಾಗಲೇ ಟೋಕನ್ ಕೊಟ್ಟು ನೋಂದಾಯಿಸಿಕೊಳ್ಳಲಾಗಿದೆ. ಇನ್ನು ಬಂದರೆ ಆಗುವುದಿಲ್ಲವೆಂಬ ಉತ್ತರ ಬಂತು. ಇನ್ನು ತಿದ್ದುಪಡಿ ಮಾಡಬೇಕಾದರೆ ಸ್ವಂದನ ಕೇಂದ್ರಕ್ಕೆ ಬನ್ನಿ ಎಂಬ ಉತ್ತರ ಬಂತು.
ಮಾನ್ಯ ಜಿಲ್ಲಾಧಿಕಾರಿಯವರೇ, ನಿಮ್ಮಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ನಾವು ಎಲ್ಲಿಂದಲೋ ದೂರದ ಊರಿನಿಂದ ಪತ್ರಿಕೆ ನೋಡಿ ಮಕ್ಕಳಿಗೆ ಶಾಲೆಗೆ ರಜೆ ಹಾಕಿಸಿ, ಕೆಲಸಕ್ಕೆ ರಜೆ ಹಾಕಿ ಬಂದರೆ ನಮಗಾದ ನಷ್ಟಕ್ಕೆ ಯಾರು ಜವಾಬ್ದಾರರು. ನನ್ನಂತೆ ಅನೇಕ ಜನ ಅಲ್ಲಿದ್ದರು. ಒಂದೇ ದಿನದಲ್ಲಿ ಎಲ್ಲಾ 5 ದಿನಗಳ ಟೋಕನ್ ಕೊಟ್ಟು ಮುಗಿಸಿದ್ದರೆ ಅಥವಾ ಟೋಕನ್ ಖಾಲಿಯಾಗಿದ್ದರೆ ನೀವು ಮೊದಲೇ ಪತ್ರಿಕೆಯಲ್ಲಿ ಪ್ರಕಟನೆ ಕೊಡಬೇಕಿತ್ತಲ್ಲವೇ? ನಮ್ಮ ಸಮಯ ವ್ಯರ್ಥವಾಗುವುದಾರೂ ಉಳಿಯುತ್ತಿತ್ತಲ್ಲವೇ? ಒಂದೇ ದಿನದಲ್ಲಿ ಟೋಕನ್ ಕೊಟ್ಟು ಮುಗಿಸುವುದಾದರೆ ನನ್ನಂತೆ ಬರುವ ಬಡ ಸಾರ್ವಜನಿಕರು ಏನು ಮಾಡಬೇಕು. ಇಂತಹ ಅದಾಲತ್ಗಳನ್ನು ಮಾಡುವ ಆವಶ್ಯಕತೆಯಾದರೂ ಏನಿತ್ತು? ಉತ್ತರ ನೀಡುವಿರೇ?
-ಪೂರ್ಣಿಮಾ, ಬೆಳಪು