ರೋಹಿತ್ ಹೆಗಲಿಗೆ ಟೀಮ್ ಇಂಡಿಯಾ ನಾಯಕತ್ವ
ಹೊಸದಿಲ್ಲಿ, ಫೆ.24: ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಗೆ ಟೀಮ್ ಇಂಡಿಯಾ ನಾಯಕನಾಗಿ ಉಪ ನಾಯಕ ರೋಹಿತ್ ಶರ್ಮಾ ಮುನ್ನಡೆಸುವ ಸಾಧ್ಯತೆ ಇದೆ. ತ್ರಿಕೋನ ಸರಣಿಗೆ ರವಿವಾರ ಟೀಮ್ ಇಂಡಿಯಾದ ಆಯ್ಕೆ ನಡೆಯಲಿದ್ದು, ರೋಹಿತ್ ಶರ್ಮಾ ಅವರಿಗೆ ತಂಡದ ನಾಯಕತ್ವವನ್ನು ವಹಿಸಿಕೊಡಲು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ.
ದಕ್ಷಿಣ ಆಫ್ರಿಕದಲ್ಲಿ ಈಗಾಗಲೇ ಟೆಸ್ಟ್, ಏಕದಿನ, ಟ್ವೆಂಟಿ-20 ಪಂದ್ಯಗಳನ್ನು ಆಡಿ ದಣಿದಿರುವ ಹಿರಿಯ ಆಟಗಾರರು ವಿಶ್ರಾಂತಿ ಬಯಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಭುವನೇಶ್ವರ ಕುಮಾರ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ಸಿಗಲಿದೆ.
ಮಹೇಂದ್ರ ಸಿಂಗ್ ಧೋನಿ ತಂಡದಿಂದ ಹೊರಗುಳಿಯುವ ಹಿನ್ನೆಲೆಯಲ್ಲಿ ದಿಲ್ಲಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಅವಕಾಶ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.