ವಿಧಿ 35ಎಗೆ ‘ಸವಾಲು’ವಿರೋಧಿಸಿ ಪ್ರತ್ಯೇಕತಾವಾದಿಗಳಿಂದ 2 ದಿನ ಕಾಶ್ಮೀರ ಬಂದ್ಗೆ ಕರೆ
ಶ್ರೀನಗರ, ಜು. 29: ಜಮ್ಮು ಹಾಗೂ ಕಾಶ್ಮೀರದ ಖಾಯಂ ನಿವಾಸಿಗಳಿಗಳ ವಿಶೇಷ ಹಕ್ಕುಗಳು ಹಾಗೂ ಸವಲತ್ತುಗಳಿಗೆ ಸಂಬಂಧಿಸಿದ ಸಂವಿಧಾನದ 35ಎ ವಿಧಿಗೆ ಎದುರಾದ ಗಂಭೀರ ಸವಾಲಿನ ವಿರುದ್ಧ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಆಗಸ್ಟ್ 5ರಿಂದ ಎರಡು ದಿನಗಳ ಕಾಶ್ಮೀರ ಬಂದ್ಗೆ ಕರೆ ನೀಡಿದ್ದಾರೆ.
ವಿಧಿ 35ಎಯಗೆ ಎದುರಾದ ಗಂಭೀರ ಸವಾಲನ್ನು ಚರ್ಚಿಸಲು ಜೆಆರ್ಎಲ್ (ಜಂಟಿ ಪ್ರತಿರೋಧ ನಾಯಕತ್ವ) ಸಭೆ ನಡೆಸಿದೆ ಹಾಗೂ ರಾಜ್ಯದ ಭೌಗೋಳಿಕ ಲಕ್ಷಣಗಳ ಬದಲಾವಣೆ ಮಾಡುವ ಯಾವುದೇ ಹಾಗೂ ಪ್ರತಿ ಪ್ರಯತ್ನವನ್ನು ತೀವ್ರವಾಗಿ ಪ್ರತಿಭಟಿಸಲಾಗುವುದು ಎಂಬುದನ್ನು ಭಾರತ ಸರಕಾರಕ್ಕೆ ಸ್ಪಷ್ಟಪಡಿಸಲು ಬಯಸುವುದಾಗಿ ಸೌಮ್ಯಾವಾದಿ ಹುರಿಯತ್ ಕಾನ್ಫರೆನ್ಸ್ನ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಪ್ರತ್ಯೇಕತಾವಾದಿಗಳ ಏಕೀಕೃತ ರಂಗ ಜೆಆರ್ಎಲ್ ಮಿರ್ವೈಝ್, ತೀವ್ರವಾದಿ ಹುರಿಯತ್ ಕಾನ್ಫರೆನ್ಸ್ನ ಅಧ್ಯಕ್ಷ ಸೈಯದ್ ಅಲಿ ಶಾಹ್ ಗಿಲಾನಿ ಹಾಗೂ ಜೆಕೆಎಲ್ಎಫ್ನ ಮುಖ್ಯಸ್ಥ ಮುಹಮ್ಮದ್ ಯಾಸಿನ್ ಮಲಿಕ್ ಅವರನ್ನು ಒಳಗೊಂಡಿದೆ.