ಆ್ಯಪಲ್ ಉದ್ಯೋಗಿ ಹತ್ಯೆ ಪ್ರಕರಣ ಮುಚ್ಚಿಹಾಕಲು ಪೊಲೀಸ್ ಅಧಿಕಾರಿಗಳ ಯತ್ನ: ಉತ್ತರ ಪ್ರದೇಶ ಸಚಿವ

Update: 2018-10-01 13:28 GMT

ಲಕ್ನೋ, ಅ.1: ಆ್ಯಪಲ್ ಕಂಪನಿಯ ಉದ್ಯೋಗಿ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ರಾಜ್ಯ ಪೊಲೀಸ್ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಸಚಿವ ಬೃಜೇಶ್ ಪಾಠಕ್ ಹೇಳಿದ್ದಾರೆ.

ಕಾರು ನಿಲ್ಲಿಸಿಲ್ಲ ಎಂಬ ಕಾರಣಕ್ಕಾಗಿ ಆ್ಯಪಲ್ ಉದ್ಯೋಗಿ ವಿವೇಕ್ ತಿವಾರಿಯನ್ನು ಶನಿವಾರ ಮುಂಜಾನೆ ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಹಂತಕರಿಗೆ ಶಿಕ್ಷೆಯಾಗಬೇಕು; ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಚಿವರು ಹೇಳಿದರು.

"ಕೆಲ ಉನ್ನತ ಮಟ್ಟದ ಅಧಿಕಾರಿಗಳು ಸತ್ಯಾಂಶವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿರುದ್ಧವೂ ತನಿಖೆ ನಡೆಸಲಾಗುತ್ತದೆ. ಉತ್ತರ ಪ್ರದೇಶ ಸರ್ಕಾರವು ಅಮಾಯಕ ಯುವಕರನ್ನು ಹತ್ಯೆ ಮಾಡುವ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಯಾವ ಅಪರಾಧಿಗಳನ್ನೂ ಕ್ಷಮಿಸುವುದಿಲ್ಲ" ಎಂದು ಪಾಠಕ್ ಹೇಳಿದ್ದಾಗಿ ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಡೀ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗುವುದು. ಈ ಮೂಲಕ ಸಂತ್ರಸ್ತರ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಬೇಕು ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News