ಭುಜನೋವಿನಿಂದ ಬುಮ್ರಾ ಚೇತರಿಕೆ: ಮುಂಬೆ ಇಂಡಿಯನ್ಸ್
ಮುಂಬೈ, ಮಾ.25: ವಿಶ್ವ ಕ್ರಿಕೆಟ್ನ ಶ್ರೇಷ್ಠ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ಎಡಭುಜನೋವಿಗೆ ಒಳಗಾಗಿದ್ದು,ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್ಮೆಂಟ್ ತಿಳಿಸಿದೆ.
ಬುಮ್ರಾ ಅವರ ಸ್ಥಿತಿಗತಿಯನ್ನು ಸೋಮವಾರ ಪರೀಕ್ಷಿಸಲಾಗಿದೆ ಎಂದು ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್ಮೆಂಟ್ ತಿಳಿಸಿದೆ. ಬುಮ್ರಾ ಡೆಲ್ಲಿ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ರಿಷಭ್ ಪಂತ್ಗೆ ತನ್ನ ಟ್ರೇಡ್ಮಾರ್ಕ್ ಯಾರ್ಕರ್ ಎಸೆದಿದ್ದರು. ಆಗ ಒಂಟಿ ರನ್ ತಡೆಯಲು ಮೇಲಕ್ಕೆ ಹಾರುವ ಸಂದರ್ಭದಲ್ಲಿ ಬಿದ್ದು ಭುಜಕ್ಕೆ ಏಟಾಗಿದೆ. ತೀವ್ರ ನೋವು ಬಾಧಿಸಿದ ಕಾರಣ ಬುಮ್ರಾ ಮುಂಬೈ ತಂಡದ ಫಿಸಿಯೊ ನಿತಿನ್ ಪಟೇಲ್ ನೆರವು ಪಡೆದು ಮೈದಾನದಿಂದ ಹೊರ ನಡೆದರು. 21ರ ಹರೆಯದ ಬುಮ್ರಾ ಗಾಯಗೊಂಡಿರುವ ಹಿನ್ನೆಲೆಯಲ್ಲಿ ವಿಶ್ವಕಪ್ಗೆ ತೆರಳಬೇಕಾಗಿರುವ ಟೀಮ್ ಇಂಡಿಯಾಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ವಿಶ್ವಕಪ್ಗೆಇನ್ನು ಕೇವಲ ಎರಡು ತಿಂಗಳು ಬಾಕಿ ಉಳಿದಿದ್ದು, ಪ್ರಮುಖ ಬೌಲರ್ ಬುಮ್ರಾ ಗಾಯದ ಸಮಸ್ಯೆಗೆ ತುತ್ತಾಗಿರುವುದು ಭಾರತೀಯ ಆಯ್ಕೆಗಾರರಿಗೆ ಹಾಗೂ ಟೀಮ್ ಮ್ಯಾನೇಜ್ಮೆಂಟ್ಗೆ ತಲೆನೋವು ತಂದಿದೆ.
ಬುಮ್ರಾ ಡೆಲ್ಲಿ ವಿರುದ್ಧ ಕೊನೆಯ ಓವರ್ನಲ್ಲಿ 16 ರನ್ ಸೋರಿಕೆ ಮಾಡಿದ್ದು, 4 ಓವರ್ಗಳಲ್ಲಿ ಒಟ್ಟು 40 ರನ್ ನೀಡಿದರು. ಟಿ-20 ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು.