ಕಾಮಪಿಶಾಚಿಗಳಿಗೆ ಕಠಿಣ ಶಿಕ್ಷೆ ಸಿಗಲಿ

Update: 2019-04-25 17:57 GMT

ಮಾನ್ಯರೇ,

ದೇಶಾದ್ಯಂತ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದು, ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಮೊನ್ನೆಯಷ್ಟೇ ರಾಯಚೂರಿನ ನವೋದಯ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಇಂದು ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು ಏನು ಮಾಡಿದರೂ ಸುದ್ದಿಯಾಗುತ್ತದೆ. ಆದರೆ ಸಾಮಾನ್ಯ ಜನರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದ್ದರೂ ಎಲ್ಲವೂ ಮುಚ್ಚಿಹೋಗುತ್ತಿದೆ. ಸಾಮಾನ್ಯ ಜನರು ಧ್ವನಿ ಕಳೆದುಕೊಂಡಿರುವವರಾದ್ದರಿಂದ, ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕಾನೂನು ಕೂಡಾ ಮೂಕವಾಗುತ್ತದೆ.

ದೇಶದಲ್ಲಿ ಎಷ್ಟೋ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆ ನಡೆಸಿರುವ ಕಾಮ ಪಿಶಾಚಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಕಾನೂನಿನ ಕಣ್ತಪ್ಪಿಸಿ ಅವರು ಮೆರೆಯುತ್ತಲೇ ಇದ್ದಾರೆ. ಅತ್ಯಾಚಾರಿಗಳಿಗೆ ವಿಳಂಬಿಸದೆ ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು. ಹೆಣ್ಣು ಮಕ್ಕಳನ್ನು ಮುಟ್ಟಿದರೆ ಇಂತಹ ಶಿಕ್ಷೆ ಸಿಗುತ್ತದೆ ಎಂಬ ಭಯ ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟಬೇಕು. ಆಗ ಇಂತಹ ಪ್ರಕರಣಗಳು ನಡೆಯಲು ಸಾಧ್ಯವಿಲ್ಲ, ಹಿಂದೆ ನಡೆದ ಅತ್ಯಾಚಾರ ಪ್ರಕರಣಗಳಿಗೆ ಕಾನೂನು ಸರಿಯಾದ ರೀತಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ. ಈಗಲಾದರೂ ಕಾನೂನು ಸರಿಯಾದ ರೀತಿಯಲ್ಲಿ ಕ್ರಮಕೈಗೊಂಡು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿರುವ ಕಾಮಪಿಶಾಚಿಗಳಿಗೆ ಕಠಿಣ ಶಿಕ್ಷೆ ಕೊಡಬೇಕು.

Similar News