ಆರೆಸ್ಸೆಸ್ ಕೂಡ ಮೋದಿ ಸರಕಾರವನ್ನು ದೂರ ಮಾಡುತ್ತಿದೆ : ಮಾಯಾವತಿ
ಲಕ್ನೋ : ''ಪ್ರಧಾನಿ ನರೇಂದ್ರ ಮೋದಿಯ ಸರಕಾರ ಒಂದು ಮುಳುಗುತ್ತಿರುವ ಹಡಗು. ಇದಕ್ಕೆ ಆಧಾರವೆಂಬಂತೆ ಆರೆಸ್ಸೆಸ್ ಕೂಡ ಅದನ್ನು ದೂರ ಮಾಡುತ್ತಿದೆ'' ಎಂದು ಬಹುಜನ್ ಸಮಾಜ ಪಕ್ಷದ ನಾಯಕಿ ಮಾಯಾವತಿ ಟ್ವೀಟ್ ಮಾಡಿದ್ದಾರೆ.
''ಮೋದಿ ಸರಕಾರ ತನ್ನ ಈ ಹಿಂದಿನ ಚುನಾವಣಾ ಆಶ್ವಾಸನೆಗಳನ್ನು ಈಡೇರಿಸದೇ ಇರುವುದರಿಂದ ಜನರು ಆಕ್ರೋಶಗೊಂಡಿದ್ದಾರೆ, ಆರೆಸ್ಸೆಸ್ ಕಾರ್ಯಕರ್ತರು ಎಲ್ಲಿಯೂ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವುದು ಕಾಣಿಸುತ್ತಿಲ್ಲ, ಇದರಿಂದಾಗಿ ಪ್ರಧಾನಿ ಮೋದಿ ಕಳವಳಗೊಂಡಿದ್ದಾರೆ'' ಎಂದು ಮಾಯಾವತಿ ವಿವರಿಸಿದ್ದಾರೆ.
''ಸಂವಿಧಾನದ ಆಶಯದಂತೆ ಕಾರ್ಯಾಚರಿಸುವ ಪ್ರಧಾನಿ ದೇಶಕ್ಕೆ ಬೇಕಾಗಿದ್ದಾರೆ'' ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ದಲಿತರ ಮೇಲಿನ ತಮ್ಮ ಪ್ರೀತಿ ತೋರಿಸಿ ''ಡ್ರಾಮೇಬಾಝಿ' (ನಟಿಸುತ್ತಿದ್ದಾರೆ) ನಡೆಸುತ್ತಿದ್ದಾರೆ'' ಎಂದು ಇದಕ್ಕೂ ಮೊದಲು ಮಾಯಾವತಿ ವ್ಯಂಗ್ಯವಾಡಿದ್ದರು.
ಮಾಯಾವತಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಆಕೆ ''ಸಾರ್ವಜನಿಕ ಜೀವನಕ್ಕೆ ತಕ್ಕವರಲ್ಲ'' ಎಂದಿದ್ದಾರೆ.