ನೆಗೆಟಿವ್ ರಾಜಕಾರಣಕ್ಕೆ ಜನರೇ ಪಾಠ ಕಲಿಸಿದ್ದಾರೆ : ಸುಮಲತಾ

Update: 2019-05-24 09:09 GMT

ಬೆಂಗಳೂರು, ಮೇ 24: ನೆಗೆಟಿವ್ ರಾಜಕಾರಣಕ್ಕೆ ಜನರೇ ಪಾಠ ಕಲಿಸಿದ್ದಾರೆ ಎಂದು ಮಂಡ್ಯದ ನೂತನ ಸಂಸದೆ ಸುಮಲತಾ ತಿಳಿಸಿದ್ದಾರೆ.
ಕಂಟೀರವಾ ಸ್ಟುಡಿಯೋದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ನನ್ನನ್ನು ಅವಮಾನಿಸಿದವರಿಗೆ ಫಲಿತಾಂಶ ಅಚ್ಚರಿ ತಂದಿದೆ. ಎಷ್ಟೇ ಹಣ ಚೆಲ್ಲಿದರೂ ಮತದಾರರು ನಿರ್ಲಕ್ಷಿಸಿದರು. ಮಂಡ್ಯದ ಜನರು ಮೋಸಕ್ಕೆ ಮರುಳಾಗದೆ ಪ್ರೀತಿಗೆ ಮರುಳಾದರು'' ಎಂದರು.
ಕೆಲವರ ನೆಗೆಟಿವ್ ರಾಜಕಾರಣಕ್ಕೆ ನಾನು ಉತ್ತರ ಕೊಡುವುದಿಲ್ಲವೆಂದು ಹಿಂದೆ  ಹೇಳಿದ್ದೆ. ಈಗ ಜನರೇ ಉತ್ತರ ಕೊಟ್ಟಿದ್ದಾರೆ. ಮಂಡ್ಯಕ್ಕೆ ಕಾಂಗ್ರೆಸ್ ನ ಟಿಕೆಟ್ ಕೇಳಿದೆ. ಆದರೆ ನನ್ನ ಮನವಿಯನ್ನು ಕೈ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಅನಾಯಾಸವಾಗಿ ಗೆಲ್ತಿದ್ದೆ. ಆದರೂ ಮಂಡ್ಯ ಜನರು ನನ್ನ ಪರ ಇದ್ದಾರೆ ಎನ್ನುವುದಕ್ಕೆ ನನ್ನ ಗೆಲುವು ಸಾಕ್ಷಿಯಾಗಿದೆ  ಎಂದು ಅಭಿಪ್ರಾಯಪಟ್ಟರು. 

 ಬಿಜೆಪಿ ಪರ ಬ್ಯಾಟ್  ಬೀಸಿದ ಅವರು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಗೊತ್ತಿತ್ತು. ಆದರೆ ರಾಜ್ಯದಲ್ಲಿ ಅಷ್ಟೊಂದು ಸ್ಥಾನಗಳನ್ನು ಗೆಲ್ಲುವುದನ್ನು ನಿರೀಕ್ಷಿಸಿರಲಿಲ್ಲ. ಒಂದು ಸುನಾಮಿ ಅಲ್ಲ. ಹತ್ತು ಸುನಾಮಿ ಬಂದ ಹಾಗೆ ಆಗಿದೆ. ಮಂಡ್ಯ ಜನರ ಪ್ರೀತಿಯಲ್ಲೇ ಅಂಬರೀಷ್‌ ಕಾಣ್ತೇನೆ. ಅವರ ಕನಸನ್ನು ನನಸು ಮಾಡುತ್ತೇನೆ. ಮಂಡ್ಯ ಜನರ ಅಭಿಪ್ರಾಯ ಕೇಳಿ ಸ್ವತಂತ್ರವಾಗಿ ಸ್ಪರ್ಧಿಸಿದ್ದೆ. ಅವರ ಮಾತು ಕೇಳಿಯೇ ಮುಂದುವರಿಯುತ್ತೇನೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News