ಗದಗ ವಿವಿಗೆ ಅಬ್ದುಲ್ ನಝೀರ್ ಸಾಬ್ ಹೆಸರಿಡಿ

Update: 2019-07-10 18:26 GMT

ಮಾನ್ಯರೇ,

2016ರಲ್ಲಿ ಗದಗ ಜಿಲ್ಲೆಯಲ್ಲಿ ಪ್ರಾರಂಭಿಸಲಾದ ವಿಶ್ವವಿದ್ಯಾನಿಲಯಕ್ಕೆ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ’ ಎಂದು ನಾಮಕರಣ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆಯಡಿ ಪ್ರಾರಂಭಿಸಲಾದ ವಿಶ್ವ ವಿದ್ಯಾನಿಲಯ ಅದಾಗಿರುವುದರಿಂದ ಹಾಗೆ ಹೆಸರಿಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ವಿಶ್ವವಿದ್ಯಾನಿಲಯಗಳಿಗೆ ಸಾಧಕರ ಹೆಸರಿಡುವಂತಹ ಪದ್ಧತಿ ಇದೆ. ರಾಷ್ಟ್ರಕವಿ ಕುವೆಂಪು ಅವರ ತವರು ಜಿಲ್ಲೆ ಶಿವಮೊಗ್ಗವಾದುದರಿಂದ ಅಲ್ಲಿನ ವಿಶ್ವವಿದ್ಯಾನಿಲಯಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ. ವಿಜಯಪುರದಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಕನ್ನಡ ನಾಡಿನ ಮಹಾನ್ ಶಿವಶರಣೆ ಅಕ್ಕ ಮಹಾದೇವಿಯವರ ಹೆಸರಿಡಲಾಗಿದೆ. ಬೆಳಗಾವಿಯ ವಿಶ್ವವಿದ್ಯಾನಿಲಯಕ್ಕೆ ಕಿತ್ತೂರು ರಾಣಿ ಚೆನ್ನಮ್ಮಳ ಹೆಸರಿಡಲಾಗಿದೆ. ಇವೆಲ್ಲವೂ ಅತ್ಯಂತ ಸೂಕ್ತವಾಗಿಯೇ ಇದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಗೆ ದೇಶದಲ್ಲೇ ವಿಶಿಷ್ಟ ಸ್ವರೂಪದಲ್ಲಿ ಕಾಯಕಲ್ಪನೀಡಿದವರು ಮಾಜಿ ಸಚಿವ ಅಬ್ದುಲ್ ನಝೀರ್ ಸಾಬ್.
ಗ್ರಾಮೀಣಾಭಿವೃದ್ಧಿಗೆ ಪರ್ಯಾಯ ಹೆಸರೇ ನಝೀರ್ ಸಾಬ್ ಎಂದು ದೇಶ ಆಡಿಕೊಳ್ಳುವ ರೀತಿಯಲ್ಲಿ ಬಾಳಿ ಬದುಕಿದವರು ಅಬ್ದುಲ್ ನಝೀರ್ ಸಾಬ್. ಅವರು ತನ್ನ ಕೊನೆಯುಸಿರಿನವರೆಗೂ ನಾಡಿನ ಹಿತಕ್ಕಾಗಿ ಕೆಲಸ ಮಾಡಿದವರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮರಣಶಯ್ಯೆಯಲ್ಲಿದ್ದಾಗಲೂ ತನ್ನ ಸಹೋದ್ಯೋಗಿಗಳನ್ನು ಕರೆದು ಅರ್ಧದಲ್ಲಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಕುರಿತಂತೆ ಮಾಹಿತಿ ನೀಡಿ ಅದನ್ನು ಮುಂದುವರಿಸುವಂತೆ, ಪೂರ್ತಿಗೊಳಿಸುವಂತೆ ಕೇಳಿಕೊಂಡವರು. ಕನ್ನಡದ ನಿಷ್ಟೂರ ಪತ್ರಕರ್ತ ಮತ್ತು ಸಾಹಿತಿ ಲಂಕೇಶ್ ಮೇಷ್ಟ್ರು ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ಅಸ್ತಿತ್ವಕ್ಕೆ ಬರುವಲ್ಲಿ ಮುಖ್ಯ ಕಾರಣಕರ್ತರಲ್ಲೊಬ್ಬರಾಗಿದ್ದರು. 1983ರಲ್ಲಿ ಜನತಾ ಸರಕಾರ ರಚನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅತ್ಯಂತ ಸಮರ್ಥ ಮತ್ತು ಸೂಕ್ತ ಆಯ್ಕೆ ಅಬ್ದುಲ್ ನಝೀರ್ ಸಾಬ್ ಎಂದಿದ್ದರು ಮತ್ತು ತನ್ನ ನೆಲೆಯಲ್ಲಿ ನಝೀರ್ ಸಾಬ್‌ರನ್ನು ಮುಖ್ಯಮಂತ್ರಿ ಮಾಡಬೇಕೆಂದು ಲಂಕೇಶ್ ಮೇಷ್ಟ್ರು ಪ್ರಯತ್ನಿಸಿದ್ದರು. ಲಂಕೇಶ್‌ರಂತಹವರೇ ನಝೀರ್ ಸಾಬ್ ಮುಖ್ಯಮಂತ್ರಿಯಾಗಲೇ ಬೇಕೆಂದಿದ್ದರೆ ನಝೀರ್ ಸಾಬ್ ಅದೆಂತಹ ಪ್ರಾಮಾಣಿಕ ಮತ್ತು ಜನಪರ ವ್ಯಕ್ತಿತ್ವದವರಾಗಿದ್ದರು ಎಂದು ಊಹಿಸಬಹುದು.

ನಝೀರ್ ಸಾಬ್ ಮುಖ್ಯಮಂತ್ರಿಯಾಗದಿದ್ದರೂ ಪಂಚಾಯತ್ ರಾಜ್ ಮತ್ತು ನೀರಾವರಿ ಸಚಿವರಾಗಿ ಮಾಡಿದ ಕೆಲಸವನ್ನು ದೇಶಕ್ಕೆ ದೇಶವೇ ಬೆರಗುಗಣ್ಣಲ್ಲಿ ನೋಡಿತ್ತು. ರಾಜಧಾನಿಯಲ್ಲೇ ಜಡ್ಡುಗಟ್ಟಿದ್ದ ಅಧಿಕಾರವನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಿದವರು, ಆಡಳಿತ ಯಂತ್ರವನ್ನು ಅತ್ಯಂತ ಪ್ರಾಯೋಗಿಕವಾಗಿ ಜನತೆಯ ಬಳಿಗೆ ಕೊಂಡೊಯ್ದವರು ನಝೀರ್ ಸಾಬ್. ಒಟ್ಟಿನಲ್ಲಿ ನಝೀರ್ ಸಾಬ್‌ರಂತಹ ಪ್ರಾಮಾಣಿಕ ರಾಜಕಾರಣಿ ಅವರ ಬಳಿಕ ಈ ರಾಜ್ಯಕ್ಕೆ ಸಿಕ್ಕಿಲ್ಲವೆಂದರೂ ಅತಿಶಯೋಕ್ತಿಯಾಗದು. ಅವರ ಸ್ಮಾರಕ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯೂ ರಾಜ್ಯದಲ್ಲಿ ಇದೆ. ಗದಗದಲ್ಲಿ ಪ್ರಾರಂಭಿಸಲಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯಕ್ಕೆ ಅವರ ಹೆಸರಿಡಲೇಬೇಕು. ಬಹುಶಃ ಅದಕ್ಕೆ ಯಾರಿಂದಲೂ ವಿರೋಧ ಬರಲಾರದೇನೋ.... ಅಂತಹ ಅಜಾತ ಶತ್ರುವಾಗಿದ್ದರು ದಿವಂಗತ ಅಬ್ದುಲ್ ನಝೀರ್ ಸಾಬ್. ವಿಶ್ವವಿದ್ಯಾನಿಲಯಕ್ಕೆ ಅವರ ಹೆಸರಿಟ್ಟರೆ ಆ ವಿಶ್ವವಿದ್ಯಾನಿಲಯದ ಗೌರವವೂ ಹೆಚ್ಚುತ್ತದೆ ಅವರ ಹೆಸರೂ ಚಿರಸ್ಥಾಯಿಯಾಗುತ್ತದೆ.
 

Writer - -ಇಸ್ಮತ್ ಪಜೀರ್, ಮಂಗಳೂರು

contributor

Editor - -ಇಸ್ಮತ್ ಪಜೀರ್, ಮಂಗಳೂರು

contributor

Similar News