'ಒಂದು ಕುಟುಂಬಕ್ಕೆ ಇಬ್ಬರೇ ಮಕ್ಕಳು' ಕಾನೂನು ಜಾರಿಗೆ ಗಿರಿರಾಜ್ ಸಿಂಗ್ ಆಗ್ರಹ

Update: 2019-07-11 11:48 GMT

ಹೊಸದಿಲ್ಲಿ :  ಒಂದು ಕುಟುಂಬಕ್ಕೆ ಕೇವಲ ಇಬ್ಬರೇ ಮಕ್ಕಳಿರಬೇಕೆಂಬ ಕಾನೂನನ್ನು ಕೇಂದ್ರ ಸರಕಾರ ಜಾರಿಗೊಳಿಸಬೇಕೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರಲ್ಲದೆ ಇಂತಹ ಒಂದು ಕಾನೂನನ್ನು ಉಲ್ಲಂಘಿಸುವವರನ್ನು ಮತದಾನ ಹಕ್ಕಿನಿಂದ ವಂಚಿತರನ್ನಾಗಿಸಬೇಕೆಂದೂ ಆಗ್ರಹಿಸಿದ್ದಾರೆ.

ಬಿಹಾರದ ಬೇಗುಸರೈ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರಾಗಿರುವ ಗಿರಿರಾಜ್ ಸಿಂಗ್ ದೇಶದ ಏರುತ್ತಿರುವ ಜನಸಂಖ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಜನಸಂಖ್ಯೆಯನ್ನು ನಿಯಂತ್ರಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಯಾವುದೇ ಸಮುದಾಯ ಯಾ ಧರ್ಮದ ಹೆಸರೆತ್ತದೆಯೇ ದೇಶದ ಏರುತ್ತಿರುವ ಜನಸಂಖ್ಯೆ ಅದರ ಸಂಪನ್ಮೂಲಗಳು ಹಾಗೂ ಸೌಹಾರ್ದತೆಗೆ ಅಪಾಯವೊಡ್ಡುತ್ತಿದೆ ಎಂದು  ಹೇಳಿದರು.

''ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನಿನ ಅಗತ್ಯವಿದೆ. ಈ ವಿಚಾರ ಸಂಸತ್ತಿನಲ್ಲಿ ಎತ್ತಬೇಕು,'' ಎಂದ ಅವರು ಇಸ್ಲಾಮಿಕ್ ದೇಶಗಳಲ್ಲೂ  ಜನಸಂಖ್ಯಾ ನಿಯಂತ್ರಣಕ್ಕೆ  ಯತ್ನಿಸಲಾಗುತ್ತಿದೆ, ಆದರೆ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಧರ್ಮಕ್ಕೆ ನಂಟು ಕಲ್ಪಿಸಲಾಗುತ್ತದೆ'' ಎಂದರು.

ದೇಶದಲ್ಲಿ ಸಂತಾನಹರಣ ಚಿಕಿತ್ಸೆ ಕಡ್ಡಾಯಗೊಳಿಸಲು ಕಾನೂನು ಜಾರಿಗೊಳಿಸಬೇಕೆಂದು ಮೂರು ವರ್ಷಗಳ ಹಿಂದೆ ಅವರು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News