ಮರಾಠಾ ಮೀಸಲಾತಿ ವಿರುದ್ಧ ಎಂಬಿಬಿಎಸ್ ಆಕಾಂಕ್ಷಿಗಳ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Update: 2019-07-11 14:37 GMT

ಮುಂಬೈ,ಜು.11: ಈ ವರ್ಷದಿಂದ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಜಾರಿಗೊಳಿಸುವ ಮಹಾರಾಷ್ಟ್ರ ಸರಕಾರದ ನಿರ್ಧಾರದ ವಿರುದ್ಧ ಎಂಬಿಬಿಎಸ್ ಆಕಾಂಕ್ಷಿ ವಿದ್ಯಾರ್ಥಿಗಳ ಗುಂಪೊಂದು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ.

ಮಹಾರಾಷ್ಟ್ರ ರಾಜ್ಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ(ಎಸ್‌ಇಬಿಸಿ)ಗಳಿಗೆ ಮೀಸಲಾತಿ ಕಾಯ್ದೆಯು 2018,ನ.30ರಂದು ಜಾರಿಗೆ ಬಂದಿದ್ದು, ಎಂಬಿಬಿಎಸ್ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಅದಕ್ಕೂ ಮೊದಲೇ ಆರಂಭಗೊಂಡಿತ್ತು. ಹೀಗಾಗಿ ಹಾಲಿ ಶೈಕ್ಷಣಿಕ ವರ್ಷದಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವಂತಿಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ.ಪಿ.ವಾಶಿ ಅವರು ವಾದಿಸಿದರೆ,2019-20ನೇ ಸಾಲಿಗೆ ಪ್ರವೇಶ ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವುದು ನೀತಿ ನಿರ್ಧಾರವಾಗಿದೆ ಎಂದು ಮಹಾರಾಷ್ಟ್ರ ಸರಕಾರದ ವಕೀಲ ವಿ.ಎ.ಥೋರಟ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

2018ರ ಕಾಯ್ದೆಯು ಎಸ್‌ಇಬಿಸಿಗಳ ನೂತನ ವರ್ಗವನ್ನು ಸೃಷ್ಟಿಸುವ ಮೂಲಕ ಮರಾಠಾ ಸಮುದಾಯಕ್ಕೆ ಶೇ.16 ಮೀಸಲಾತಿಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News