ಕಳ್ಳನೆಂಬ ಶಂಕೆಯಲ್ಲಿ ಥಳಿತ: ದಲಿತ ಯುವಕ ಮೃತ್ಯು

Update: 2019-07-23 12:09 GMT

ಲಕ್ನೋ : ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ರಾಘೋಪುರ್ ಗ್ರಾಮದಲ್ಲಿ ಕಳೆದ ವಾರ ಕಳ್ಳನೆಂದು ತಪ್ಪಾಗಿ ತಿಳಿದು ಸ್ಥಳೀಯರ ಗುಂಪೊಂದರಿಂದ ಥಳಿತಕ್ಕೊಳಗಾಗಿ ನಂತರ ಜನರಿಂದ ಬೆಂಕಿ ಹಚ್ಚಲ್ಪಟ್ಟಿದ್ದ  28 ವರ್ಷದ ದಲಿತ ಯುವಕ ಸೋಮವಾರ ನಗರದ ಶ್ಯಾಮ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಳೆದ ಗುರುವಾರ ತನ್ನ ಅತ್ತೆ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ಸುಜಿತ್ ಕುಮಾರ್ ನನ್ನು ಕೆಲ ಬೀದಿ ನಾಯಿಗಳು ಬೆಂಬತ್ತಿದ್ದವು. ನಾಯಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ಅಲ್ಲಿನ ಮನೆಯೊಂದನ್ನು ಪ್ರವೇಶಿಸಿದ್ದು ಆಗ ಅಲ್ಲಿನ ಜನರು ಆತನನ್ನು ಕಳ್ಳನೆಂದು ತಪ್ಪಾಗಿ ತಿಳಿದು ಆತನಿಗೆ ಥಳಿಸಿ ನಂತರ ಪೆಟ್ರೋಲ್ ಸುರಿದು ಆತನಿಗೆ ಬೆಂಕಿ ಹಚ್ಚಿದ್ದರು.

ಪೊಲೀಸರು ಆತನನ್ನು ರಕ್ಷಿಸುವಷ್ಟರ ಹೊತ್ತಿಗೆ ಆತನಿಗೆ ಶೇ 40ರಷ್ಟು ಸುಟ್ಟ ಗಾಯಗಳುಂಟಾಗಿದ್ದವು. ಮೊದಲಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಿ ನಂತರ ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಘಟನೆ ಸಂಬಂಧ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News