ಉತ್ತರ ಪ್ರದೇಶ: ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಯುವತಿಗೆ ಅಪಘಾತದಲ್ಲಿ ಗಂಭೀರ ಗಾಯ

Update: 2019-07-28 18:04 GMT
Photo: ANI

ಹೊಸದಿಲ್ಲಿ, ಜು.28: ಉನ್ನಾವೊದಲ್ಲಿ ತನ್ನ ಮೇಲೆ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್ ಅತ್ಯಾಚಾರ ನಡೆಸಿದ್ದ ಎಂದು ಆರೋಪಿಸಿದ್ದ ಯುವತಿ ಹಾಗೂ ಆಕೆಯ ವಕೀಲ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರ ಇಬ್ಬರು ಬಂಧುಗಳು ಮೃತಪಟ್ಟಿದ್ದಾರೆ.

ರವಿವಾರ ಯುವತಿ, ಆಕೆಯ ಇಬ್ಬರು ಬಂಧುಗಳು ಪ್ರಯಾಣಿಸುತ್ತಿದ್ದ ಕಾರನ್ನು ಅವರ ವಕೀಲರು ಚಲಾಯಿಸುತ್ತಿದ್ದರು. ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಯುವತಿ ಹಾಗೂ ವಕೀಲ ಗಂಭೀರ ಗಾಯಗೊಂಡಿದ್ದರೆ ಅವರ ಇಬ್ಬರು ಬಂಧುಗಳು ಮೃತಪಟ್ಟಿದ್ದಾರೆ. ಭಾರೀ ಮಳೆ ಬೀಳುತ್ತಿದ್ದ ಕಾರಣ ರಸ್ತೆ ಬದಿ ನಿಂತಿದ್ದ ಟ್ರಕ್ ಅನ್ನು ಕಾರು ಚಾಲಕ ಗುರುತಿಸದೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಯ್‌ಬರೇಲಿ ಜೈಲಿನಲ್ಲಿರುವ ತನ್ನ ಮಾವನನ್ನು ಭೇಟಿಯಾಗಲು ಯುವತಿ ಮತ್ತು ತಾಯಿ ತೆರಳುತ್ತಿದ್ದರು ಎನ್ನಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

2017ರಲ್ಲಿ ಉನ್ನಾವೊದಲ್ಲಿ ಶಾಸಕ ಹಾಗೂ ಆತನ ಸಹಚರರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ದೂರು ನೀಡಿದ್ದರು. ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಯುವತಿ ಮತ್ತು ಆಕೆಯ ತಾಯಿ 2018ರ ಎಪ್ರಿಲ್‌ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮನೆಯೆದುರು ಆತ್ಮಾಹುತಿಗೆ ಪ್ರಯತ್ನಿಸಿದ್ದರು. ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು ಮತ್ತು ಶಾಸಕ ಸೆಂಗರ್ ಹಾಗೂ ಆತನ ಸಹೋದರನನ್ನು ಬಂಧಿಸಲಾಗಿತ್ತು.

ಈ ಮಧ್ಯೆ, ಎಪ್ರಿಲ್ 3ರಂದು ಸಂತ್ರಸ್ತ ಮಹಿಳೆಯ ತಂದೆಯನ್ನು ಶಾಸಕನ ಸಹೋದರ ಹಾಗೂ ಇತರರು ಮಾರಣಾಂತಿಕವಾಗಿ ಥಳಿಸಿದ್ದರು. ಅಲ್ಲದೆ ಹಲವು ಪ್ರಕರಣ ದಾಖಲಿಸಿ ಮಹಿಳೆಯ ತಂದೆಯನ್ನು ಜೈಲಿಗೆ ಹಾಕಲಾಗಿತ್ತು. ಉನ್ನಾವೊ ಜೈಲಿನಲ್ಲೇ ತೀವ್ರ ಅಸ್ವಸ್ಥರಾದ ಅವರು ಎಪ್ರಿಲ್ 3ರಂದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News