ಸಂವಿಧಾನ ವಿರೋಧಿ ಫ್ಯಾಶಿಸ್ಟ್ ಮಸೂದೆ

Update: 2019-12-19 08:00 GMT

ಧರ್ಮವನ್ನು ಮಾನದಂಡವಾಗಿ ಮಾಡಿಕೊಂಡಿರುವ, ದೇಶದಲ್ಲಿ ಅನೈಕ್ಯತೆಯ ವಿಷ ಬೀಜ ಬಿತ್ತುವ ಮೋದಿ ಸರಕಾರದ ಅಪಾಯಕಾರಿಯಾದ ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಸೋಮವಾರ ಮಧ್ಯರಾತ್ರಿ ನಂತರ ಅನುಮೋದನೆ ನೀಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬರುವ ಹಿಂದೂ, ಸಿಖ್, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಆಶ್ರಯ ಒದಗಿಸುವುದು ಈ ಮಸೂದೆಯ ಉದ್ದೇಶ. ಆದರೆ ಮುಸ್ಲಿಮ್ ಸಮುದಾಯದ ಜನರನ್ನು ಈ ವಿವಾದಾತ್ಮಕ ಕಾಯ್ದೆಯಿಂದ ಹೊರಗೆ ಇರಿಸಲಾಗಿದೆ. ಇದು ಭಾರತದ ಬಹುಮುಖಿ ಸಮಾಜಕ್ಕೆ ದೇಶದ ಏಕತೆ ಸಮಗ್ರತೆಗೆ ಗಂಡಾಂತರಕಾರಿಯಾಗಿದೆ. ಅಷ್ಟೇ ಅಲ್ಲ ಇದು ಸಂವಿಧಾನ ವಿರೋಧಿಯಾಗಿದೆ. ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ, ಪ್ರದೇಶದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದೆಂದು ನಮ್ಮ ಸಂವಿಧಾನ ಹೇಳುತ್ತದೆ. ಆದರೆ ಈ ಮಸೂದೆ ಮುಸಲ್ಮಾನರನ್ನು ಪ್ರತ್ಯೇಕಿಸಿ ಅವರಿಗೆ ಪೌರತ್ವ ನೀಡಲು ಮುಂದಾಗಿದೆ. ಅಂತಲೇ ದೇಶದ ಪ್ರಜ್ಞಾವಂತರು, ಹೆಸರಾಂತ ಲೇಖಕರು, ಎಲ್ಲ ಪ್ರಜಾಪ್ರಭುತ್ವವಾದಿಗಳು, ಪ್ರತಿಪಕ್ಷ ನಾಯಕರು ಇದನ್ನು ವಿರೋಧಿಸಿದ್ದಾರೆ.

ಗೃಹ ಸಚಿವ ಅಮಿತ್‌ಶಾ ಲೋಕಸಭೆಯಲ್ಲಿ ಮಂಡಿಸಿದ ಈ ಮಸೂದೆ ಸಂವಿಧಾನದ 14 ಮತ್ತು 15ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಒಂದು ಸಮುದಾಯದ ಬಗ್ಗೆ ಧರ್ಮದ ಆಧಾರದಲ್ಲಿ ಪಕ್ಷಪಾತ ಮಾಡುವುದು ಅತ್ಯಂತ ಖಂಡನೀಯವಾಗಿದೆ. ಫೆಲೆಸ್ತೀನ್ ಜನರನ್ನು ಅವರ ದೇಶದಿಂದಲೇ ಹೊರದಬ್ಬಿದಂತೆ ಶತಮಾನಗಳಿಂದ ಇಲ್ಲೇ ಹುಟ್ಟಿ ಬೆಳೆದ ಮುಸಲ್ಮಾನರನ್ನು ದೇಶ ರಹಿತರನ್ನಾಗಿ ಮಾಡುವ, ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ಹಿಟ್ಲರ್ ಮಾದರಿಯ ಹುನ್ನಾರಗಳು ಈ ಮಸೂದೆಯಲ್ಲಿವೆ.

ಕಳೆದ ಶತಮಾನದ ಮೂವತ್ತು, ನಲವತ್ತರ ದಶಕದಲ್ಲಿ ಹಿಟ್ಲರ್ ಜರ್ಮನಿಯಲ್ಲಿ ಇದೇ ರೀತಿ ಮಸಲತ್ತು ಮಾಡಿ ಚರಿತ್ರೆಯ ಕಸದ ಬುಟ್ಟಿ ಸೇರಿದ. ಆತ 1935 ರಲ್ಲಿ ಜರ್ಮನ್ ಜನಾಂಗದ ಶ್ರೇಷ್ಠತೆಯನ್ನು ಹೇರುವ ಇಂಥ ಕಾನೂನೊಂದನ್ನು ತಂದಿದ್ದ. ಅದನ್ನು ನ್ಯೂರಂಬರ್ಗ್ ಕಾನೂನು ಎಂದು ಕರೆಯಲಾಗುತ್ತದೆ. ಈ ಕಾನೂನಿನ ಪ್ರಕಾರ ಯಹೂದಿಗಳನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಲಾಗುತ್ತಿತ್ತು. ಅವರಿಗೆ ನಾಗರಿಕ ಸೌಕರ್ಯಗಳಿರಲಿಲ್ಲ. ಈ ಜನಾಂಗ ದ್ವೇಷ ಕೊನೆಗೆ ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಸಾವಿರಾರು ಯಹೂದಿಗಳು ನಾಜಿಗಳ ಹಿಂಸಾ ಶಿಬಿರದಲ್ಲಿ ದಬ್ಬಲ್ಪಟ್ಟು ಕೊನೆಯುಸಿರೆಳೆದರು. ನಮ್ಮ ದೇಶದಲ್ಲೂ ಹಿಟ್ಲರ್‌ನ ಆರಾಧಕರಿದ್ದಾರೆ, ಬಿಜೆಪಿಯ ಸೈದ್ಧಾಂತಿಕ ಗುರು ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಹಿಟ್ಲರ್‌ನನ್ನು ಹಾಡಿ ಹೊಗಳುತ್ತಿದ್ದರು. ಹಿಟ್ಲರ್ ಜರ್ಮನ್ ಜನಾಂಗೀಯ ಶ್ರೇಷ್ಠತೆಯ ದೇಶ ಕಟ್ಟಿದಂತೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಕಟ್ಟಬೇಕೆಂದು ಕರೆ ನೀಡಿದ್ದರು. ಗೋಳ್ವಾಲ್ಕರ್‌ಕಲ್ಪನೆಯ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಲ್ಲದವರು ಎರಡನೇ ದರ್ಜೆಯ ನಾಗರಿಕರಾಗಿ, ಹೇಳಿದ್ದನ್ನು ಕೇಳಿಕೊಂಡು ಗುಲಾಮರಂತೆ ಬಿದ್ದಿರಬೇಕೆಂದು ಬಹಿರಂಗವಾಗಿ ಹೇಳಿದ್ದರು. ಈ ಹಿಂದೂರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ತಮ್ಮ ಸಂಘದ ಮುಖ್ಯ ಶತ್ರುಗಳು ಎಂದು ಅವರು ಹೇಳಿದ್ದರು. ಈಗ ಅಮಿತ್ ಶಾ ಮಂಡಿಸಿದ ಮಸೂದೆಗೆ ಈ ಗೋಳ್ವಾಲ್ಕರ್ ಸಿದ್ಧಾಂತವೇ ಆಧಾರವಾಗಿದೆ

ಇದಕ್ಕೂ ಮುನ್ನ ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡಿದ್ದ ಅಮಿತ್ ಶಾ 2024ರೊಳಗೆ ಅಕ್ರಮ ನುಸುಳುಕೋರರನ್ನು ಹೊರದಬ್ಬುವುದಾಗಿ ಬೆದರಿಕೆ ಹಾಕಿದ್ದರು. ತಮ್ಮ ಸರಕಾರದ ಆಡಳಿತ ಮತ್ತು ಆರ್ಥಿಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮೋದಿ ಸರಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ತಂದಿದೆ ಅಂದರೆ ಅತಿಶಯೋಕ್ತಿಯಲ್ಲ.

ಅಕ್ರಮ ನುಸುಳುಕೋರರನ್ನು ಗುರುತಿಸಲು ಈಗಾಗಲೇ ಅನೇಕ ಕಾನೂನುಗಳಿವೆ. ಯಾವುದೇ ಊರಿನಲ್ಲಿ ಅಕ್ರಮ ನುಸುಳುಕೋರರಿದ್ದರೆ ಅವರು ಯಾರೆಂಬುದು ಪೊಲೀಸರಿಗೆ ಗೊತ್ತಿರುತ್ತದೆ. ಅವರನ್ನು ಹೊರ ದಬ್ಬುವ ಹೆಸರಿನಲ್ಲಿ ಪ್ರಜೆಗಳಲ್ಲಿ ಧರ್ಮದ ಆಧಾರದಲ್ಲಿ ಪಕ್ಷಪಾತ ಮಾಡುವುದು ದೇಶದಲ್ಲಿ ಯಾದವೀ ಕಲಹಕ್ಕೆ ಕಾರಣವಾಗುತ್ತದೆ. ಪ್ರಜೆಗಳನ್ನು ಜಾತಿ, ಧರ್ಮದ ಆಧಾರದಲ್ಲಿ ಒಡೆದು ದೇಶವನ್ನು ಆಳುತ್ತೇನೆನ್ನುವುದು ಅವಿವೇಕದ ಅತಿರೇಕದ ಪರಮಾವಧಿ ಮತ್ತು ವಿನಾಶಕಾರಿಯಾಗಿದೆ.

ಭಾರತ ಎಂಬುದು ಯಾವುದೇ ಒಂದು ಜನಾಂಗಕ್ಕೆ, ಧರ್ಮಕ್ಕೆ, ಭಾಷೆಯನ್ನಾಡುವವರಿಗೆ ಸೇರಿದ ದೇಶವಲ್ಲ. ಇದು ಶತಮಾನಗಳಿಂದ ಇಲ್ಲಿ ನೆಲೆಸಿದ, ಪರಸ್ಪರ ಸೌಹಾರ್ದದಿಂದ ಬದುಕಿದ ಎಲ್ಲ ಧರ್ಮೀಯರಿಗೆ, ಸಮುದಾಯಗಳಿಗೆ ಸೇರಿದ ದೇಶ. ಈ ಬಹುಮುಖಿ ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ದ್ವಿರಾಷ್ಟ್ರ ಸಿದ್ಧಾಂತವನ್ನು ಸಾವರ್ಕರ್ ಮತ್ತು ಜಿನ್ನಾ ಪ್ರತಿಪಾದಿಸಿದ್ದರು. ಇದರಿಂದಾಗಿ ದೇಶ ವಿದೇಶಿ ಆಡಳಿತದಿಂದ ಸ್ವತಂತ್ರವಾಗುವುದರೊಂದಿಗೆ ಇಬ್ಭಾಗವೂ ಆಯಿತು. ಅಮಿತ್ ಶಾ ಮಂಡಿಸಿದ ಈ ವಿಧೇಯಕದಲ್ಲೂ ವಿಭಜನಕಾರಿ ಅಂಶಗಳಿವೆ. ಇದು ಕಾನೂನಾಗಿ ಜಾರಿಗೆ ಬಂದರೆ ಭಾರತದ ಏಕತೆ ಮತ್ತು ಸಮಗ್ರತೆಗೆ ಹಿಂದೆಂದೂ ಕಂಡರಿಯದ ಗಂಡಾಂತರ ಎದುರಾಗಲಿದೆ. ಆದ್ದರಿಂದ ಎಲ್ಲ ದೇಶಪ್ರೇಮಿ, ಪ್ರಜಾಪ್ರಭುತ್ವವಾದಿ ಶಕ್ತಿಗಳು ಮತ್ತು ವ್ಯಕ್ತಿಗಳು ಈ ಫ್ಯಾಶಿಸ್ಟ್ ಮಸೂದೆಯ ವಿರುದ್ಧ ಧ್ವನಿಯೆತ್ತಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News