ವಾಯುಯಾನ ಹಗರಣ: ದೀಪಕ್ ತಲ್ವಾರ್ ನಿಕಟವರ್ತಿಗೆ ಜಾಮೀನು
Update: 2019-12-13 15:19 GMT
ಹೊಸದಿಲ್ಲಿ,ಡಿ.13: ಸರಕಾರಿ ಸ್ವಾಮ್ಯದ ಏರ್ ಇಂಡಿಯಾಕ್ಕೆ ನಷ್ಟವನ್ನುಂಟು ಮಾಡಿ ವಿದೇಶಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸಿದ್ದ ಮಾತುಕತೆಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಸಹಆರೋಪಿಯಾಗಿರುವ ಕಾರ್ಪೊರೇಟ್ ಲಾಬಿಯಿಸ್ಟ್ ದೀಪಕ್ ತಲ್ವಾರ್ ನಿಕಟವರ್ತಿ ಯಾಸ್ಮೀನ್ ಕಪೂರ್ಗೆ ದಿಲ್ಲಿಯ ವಿಶೇಷ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಯಾಸ್ಮೀನ್ ಪ್ರಕರಣದಲ್ಲಿ ಮುಖ್ಯ ಆರೋಪಿಯಲ್ಲ ಎಂದು ಜಾಮೀನು ನೀಡಿದ ನ್ಯಾ.ಅನುರಾಧಾ ಶುಕ್ಲಾ ಭಾರದ್ವಾಜ್ ಅವರು ಹೇಳಿದರು.
ಯಾಸ್ಮೀನ್ಗೆ ಈ ಹಿಂದೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯವು ರದ್ದುಗೊಳಿಸಿದ ಬಳಿಕ ಅ.3ರಂದು ಜಾರಿ ನಿರ್ದೇಶನಾಲಯ (ಈ.ಡಿ) ವು ಅವರನ್ನ್ನು ಬಂಧಿಸಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲ್ವಾರ್ ಯುಎಇಯಿಂದ ಗಡೀಪಾರುಗೊಂಡಿದ್ದರು.