ಸರಕಾರದ ಹುಂಬತನ

Update: 2020-01-17 18:22 GMT

ಮಾನ್ಯರೇ,

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿರೋಧ ನಡೆಯುತ್ತಿದೆ. ಜಾತಿ ಮತ ಭೇದವಿಲ್ಲದೆ ಜನರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಸಮುದಾಯವಂತೂ ಹಿಂದೆಂದೂ ನಡೆದಿರದ ರೀತಿಯಲ್ಲಿ ಈ ಚಳವಳಿಯಲ್ಲಿ ಭಾಗವಹಿಸುತ್ತಿದೆ. ವಿದ್ವಾಂಸರೂ, ಪ್ರಬುದ್ಧ ನಾಗರಿಕರೂ ವಿಶ್ವ ಮಟ್ಟದ ಚಿಂತಕರೂ ಕೂಡ ಈ ಹೊಸ ಕಾನೂನು ಕ್ರಮಗಳು ಸರಿಯಲ್ಲವೆಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿದೇಶಗಳಲ್ಲಿ ಕೂಡ ಈ ಸರಕಾರದ ಹೊಸ ಪ್ರಕ್ರಿಯೆಗಳ ಬಗ್ಗೆ ಸಾಕಷ್ಟು ವಿರೋಧಗಳು ಪ್ರಕಟವಾಗಿವೆ. ಪತ್ರಿಕೆಗಳಲ್ಲಂತೂ ಈ ವಿಚಾರ ಬಹಳ ಚರ್ಚೆಯಾಗಿದೆ.

ಇಷ್ಟೆಲ್ಲಾ ಆದರೂ ನಮ್ಮ ಸರಕಾರ ಮಾತ್ರ ಪ್ರತಿಭಟನೆಗಳಿಗೆ ಬೆಲೆ ಕೊಡುವುದಿಲ್ಲವೆಂದು ತನ್ನ ಮೊಂಡುತನ ಪ್ರದರ್ಶಿಸುತ್ತಿದೆ. ಇದಕ್ಕಿಂತ ಕಡಿಮೆ ಮಟ್ಟದ ಚಳವಳಿಗಳಿಗೆ ತಲೆಬಾಗಿ ತಮ್ಮ ಯೋಜನೆಗಳನ್ನು ಸರಕಾರ ಕೈ ಬಿಟ್ಟ ಅನೇಕ ಉದಾಹರಣೆಗಳು ಈ ಹಿಂದೆ ನಡೆದಿವೆ. ಆದರೆ ಇಂದಿನ ಸರಕಾರದಂತೆ ಹಠ ಹಿಡಿದು ಕುಳಿತ ಮತ್ತೊಂದು ಸರಕಾರ ಇದ್ದಿರಲಾರದು. ಕಾರಣ ಮತೀಯ ವಿಚಾರಗಳಿಗೆ ಸಂಬಂಧಪಟ್ಟ ಹಿಡನ್ ಅಜೆಂಡಾವನ್ನು ಹೊಂದಿರುವ ರಾಜಕೀಯ ಪಕ್ಷವೊಂದು ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವುದೇ ಆಗಿದೆ.

ಜೊತೆಗೆ ಇದೊಂದು ಪ್ರಯೋಗವೂ ಹೌದು. ಎಷ್ಟೇ ಪ್ರತಿರೋಧ ಎದುರಾದರೂ ಜಗ್ಗಬಾರದು, ಈ ಪ್ರತಿರೋಧವನ್ನು ಮೀರಲು ಸಾಧ್ಯವಾದರೆ ಮುಂದಕ್ಕೆ ಇದಕ್ಕಿಂತ ಕಠಿಣವಾದ ಶಾಸನಗಳನ್ನು ಹೇರಬಹುದು ಎಂಬ ಯೋಚನೆಯೂ ಇರಬಹುದು. ಆಗ ಇದಕ್ಕಿಂತ ದೊಡ್ಡ ಸಂಖ್ಯೆಯ ದಲಿತ, ಆದಿವಾಸಿ, ಪರಿಶಿಷ್ಟ ಮತ್ತು ಹಿಂದುಳಿದ ಸಮುದಾಯಗಳನ್ನು ಅಂಕೆಯಲ್ಲಿಟ್ಟುಕೊಳ್ಳಬಹುದಾದ ಕಾನೂನುಗಳನ್ನು ಜಾರಿಗೊಳಿಸಬಹುದು ಎಂಬ ಲೆಕ್ಕಾಚಾರವಿರಲೂ ಬಹುದು. ಯಾವುದೇ ರೀತಿಯ ಮಾನವೀಯ ಸ್ಪಂದನವೂ ಇಲ್ಲದ ರೀತಿಯಲ್ಲಿ ಈ ಸರಕಾರವು, ಜನರ ಭಾವನೆಗಳನ್ನು ಧಿಕ್ಕರಿಸಿ ಪ್ರಜಾಪ್ರಭುತ್ವವನ್ನು ಅಣಕವಾಡುತ್ತಿದೆ.

ಕಾಲಬಾಧಿತ ಮೂಲಭೂತವಾದವನ್ನು ನೆಚ್ಚಿಕೊಂಡವರು ದೇಶವಾಳತೊಡಗಿದರೆ ಹೀಗೆ ನಡೆಯುವುದು ಸಹಜ. ವೈಜ್ಞಾನಿಕ ಮನೋಭಾವದಿಂದ ದೂರವೇ ಇರುವ, ಮೂಢನಂಬಿಕೆಗಳನ್ನೇ ನೆಚ್ಚಿಕೊಂಡಿರುವ, ಬೌದ್ಧಿಕ ಚಿಂತನೆಗಳನ್ನು ಅಲ್ಲಗಳೆಯುವ ಸಂಪ್ರದಾಯವಾದಿ ಮನೋಭಾವದವರೇ ಸರಕಾರದಲ್ಲಿ ತುಂಬಿಕೊಂಡಿದ್ದರೆ, ಅಂಥವರು ಯಾವ ಪ್ರತಿಭಟನೆಗಳಿಗೂ ಮಹತ್ವ ನೀಡದಿರುವ ಅಪ್ರಬುದ್ಧತೆಯನ್ನು ಪ್ರದರ್ಶಿಸುವುದು ಸಹಜವೇ ಆಗಿದೆ. ಸರಕಾರದ ಈ ಹಠಮಾರಿತನವು ಜನರಲ್ಲಿ ತಮ್ಮ ಬಗ್ಗೆ ಮತ್ತಷ್ಟು ರೇಜಿಗೆ ಹುಟ್ಟಿಸಬಹುದು ಎಂಬ ಯೋಚನೆ ಕೂಡ ಮಾಡದಷ್ಟೂ ಹುಂಬತನವನ್ನು ತೋರಿಸಿದರೆ, ಆಡಳಿತ ಪಕ್ಷವನ್ನೂ, ಈಗಿನ ಸರಕಾರವನ್ನೂ ಬೆಂಬಲಿಸುವ ಅಷ್ಟಿಷ್ಟು ಪ್ರಬುದ್ಧ ನಾಗರಿಕರು ಕೂಡ ದೂರ ಸರಿಯುವ ಎಲ್ಲ ಲಕ್ಷಣಗಳಿವೆ.

Writer - -ಸದಾಶಿವ, ಮಂಗಳೂರು

contributor

Editor - -ಸದಾಶಿವ, ಮಂಗಳೂರು

contributor

Similar News