ಟ್ರಂಪ್ ಮತ್ತು ಟೆಹರಾನ್

Update: 2020-01-17 18:29 GMT

ಅಮೆರಿಕದ ಸೇನೆಯು ಜನವರಿ 3ರಂದು ಡ್ರೋನ್ ದಾಳಿ ನಡೆಸಿ ಇರಾನಿನ ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್ ಕಾರ್ಪ್ಸ್ - ಖುದ್ದೂಸ್ ಫೋರ್ಸ್-ನ ಮೇಜರ್ ಜನರಲ್ ಕಾಸಿಮ್ ಸುಲೈಮಾನಿ ಮತ್ತು ಇರಾಕಿನ ಪಾಪುಲರ್ ಮೊಬಿಲೈಸೇಷನ್ ಫೋರ್ಸ್‌ನ ಡೆಪ್ಯೂಟಿ ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ ಅವರ ಹತ್ಯೆಯನ್ನು ಮಾಡಿದ್ದು ಪಶ್ಚಿಮ ಏಶ್ಯದಲ್ಲಿ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ಕಾರಣವಾಗಿದೆ. ತನ್ನ ಈ ಕಾರ್ಯಾಚರಣೆಯ ಮೂಲಕ ಡೊನಾಲ್ಡ್ ಟ್ರಂಪ್ ಸರಕಾರವು 2020ನೇ ಇಸವಿಯು ಹಿಂಸಾಚಾರಗಳಿಂದ ಕೂಡಿರುವ ವರ್ಷವಾಗಲಿದೆ ಎಂದು ಘೋಷಿಸಿದೆ. ಅಮೆರಿಕದ ಈ ಕ್ರಮಕ್ಕೆ ಪ್ರತಿಯಾಗಿ ಇರಾನ್ ಅನ್ಬಾರ್ ಪ್ರಾಂತದಲ್ಲಿರುವ ಹಾಗೂ ಇರಾಕಿನ ಎರ್ಬಿಲ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕದ ಉದಾರವಾದಿಗಳು ಅಥವಾ ಸಂಪ್ರದಾಯವಾದಿಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ರಾಜಕೀಯ ಗಣ್ಯರು ತಮ್ಮ ಸೇನೆಯ ಸರ್ವಶ್ರೇಷ್ಠತೆಯ ಬಗ್ಗೆ ಅಪಾರವಾದ ಅಂಧವಿಶ್ವಾಸವನ್ನಿಟ್ಟುಕೊಂಡಿದ್ದು ಇಡೀ ಜಗತ್ತು ತಾನು ಹಾಕುವ ನಿಮಯದಂತೆ ನಡೆಯಲೇ ಬೇಕೆಂದು ನಂಬಿಕೊಂಡಿದ್ದಾರೆ. ಆದ್ದರಿಂದ ಅಮೆರಿಕವು ತನ್ನ ಸೇನೆಯನ್ನು ನಿಯಂತ್ರಿಸುತ್ತದೆ ಎಂದು ನಿರೀಕ್ಷಿಸುವುದು ಒಂದು ಭ್ರಾಂತಿ. ಶೀತಲ ಯುದ್ಧವು ಕೊನೆಯಾದಾಗಿನಿಂದಲೂ ಅಮೆರಿಕದ ಪೆಂಟಗಾನ್ ಮಧ್ಯ ಏಶ್ಯವನ್ನು ತನ್ನ ಅತ್ಯಾಧುನಿಕ ಶಸ್ತ್ರ ತಂತ್ರಜ್ಞಾನಗಳ ಪ್ರಯೋಗಶಾಲೆಯನ್ನಾಗಿಸಿಕೊಂಡಿದೆ.

ಪ್ರತಿ ವರ್ಷ ಅದು ಸೇನೆಯ ಮೇಲೆ 700 ಬಿಲಿಯನ್ ಡಾಲರಿನಷ್ಟು ಮೊತ್ತವನ್ನು ವೆಚ್ಚ ಮಾಡುತ್ತಿದ್ದು ವಿಶ್ವಶಾಂತಿಯ ಬಯಕೆಯನ್ನು ಅಮೆರಿಕವು ಹಗಲುಗನಸಾಗಿಸುತ್ತಿದೆ. ಅಮೆರಿಕವು ಮತ್ತೊಂದು ಸುತ್ತಿನ ದಾಳಿಗೆ ತಯಾರಾಗುತ್ತಿರುವಂತೆ ಪಶ್ಚಿಮ ಏಶ್ಯದಲ್ಲಿ ರಾಜತಾಂತ್ರಿಕ ರಾಜಕಾರಣ ಕ್ಷೀಣಗೊಳ್ಳುತ್ತಿದೆ. ಒಂದು ರಾಜತಾಂತ್ರಿಕ ಸುರಕ್ಷೆಯನ್ನು ಪಡೆದಿರುವ ವಿದೇಶಿ ನಾಯಕನ ಮೇಲೆ ನಡೆಸುವ ನೇರ ಸೈನಿಕ ಕಾರ್ಯಾಚರಣೆಯು ವೃತ್ತಿಪರ ಸೈನಿಕ ನೀತಿ ಸಂಹಿತೆಯ ಅವಹೇಳನವಾಗಿದೆ ಮತ್ತು ಉದ್ದೇಶಪೂರ್ವಕವಾಗಿ ಯುದ್ಧಕ್ಕೆಳೆಯುವ ಸನ್ನಾಹವೂ ಆಗಿದೆ. ಪ್ರಭುತ್ವ ಕೇಂದ್ರಿತ ಅಂತರ್‌ರಾಷ್ಟ್ರೀಯ ವ್ಯವಸ್ಥೆಯು ವಿದೇಶಿ ನಾಯಕರ ಹತ್ಯೆಯನ್ನು ನಿಷೇಧಿಸುತ್ತದೆ. 1907ರ ಹೇಗ್ ಸನ್ನದು ಇಂತಹ ಹತ್ಯೆಗಳನ್ನು ‘ದ್ರೋಹಪೂರಿತ ಕೊಲೆ’ಗಳೆಂದು ಬಣ್ಣಿಸುತ್ತದೆ. ಟ್ರಂಪ್ ಆಡಳಿತದ ಕ್ರಮಗಳು ನಿಯಮಾಧಾರಿತ ಅಂತರ್‌ರಾಷ್ಟ್ರೀಯ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ ಮತ್ತು ಇಂತಹ ಹತ್ಯೆಗಳೂ ಸಹ ಒಂದು ಕಾನೂನು ಸಮ್ಮತ ಪ್ರಭುತ್ವ ಕಾರ್ಯಾಚರಣೆಯಾಗಿದ್ದ ಮಧ್ಯಯುಗೀನದೆಡೆಗೆ ಹಾಗೂ ಬರ್ಬರತೆಯೆಡೆಗೆ ಜಗತ್ತನ್ನು ದೂಡುತ್ತಿದೆ. ಅಧ್ಯಕ್ಷ ಟ್ರಂಪ್‌ರ ಪ್ರಕಾರ ‘‘ಸುಲೈಮಾನಿಯವರು ದೀರ್ಘಕಾಲದಿಂದ ಸಾವಿರಾರು ಅಮೆರಿಕನ್ನರ ಸಾವಿಗೆ ಮತ್ತು ಗಾಯಾಳುಗಳಾಗುವುದಕ್ಕೆ ಕಾರಣರಾಗಿದ್ದರು ಮತ್ತು ಇನ್ನಷ್ಟು ಜನರನ್ನು ಕೊಲ್ಲುವ ಸಂಚನ್ನು ಮಾಡುತ್ತಿದ್ದರು... ಆದರೆ ಆ ನಡುವೆ ಸಿಕ್ಕಿಹಾಕಿಕೊಂಡರು.’’ ತಾನು ನಡೆಸಿದ ಬರ್ಬರ ಕೃತ್ಯಕ್ಕೆ ಅಮೆರಿಕ ಕೊಡುತ್ತಿರುವ ಕಾರಣವಿದು. ಈ ದಾಳಿಯನ್ನು ಸಂಭವನೀಯ ‘‘ಯುದ್ಧವನ್ನು ತಡೆಗಟ್ಟಲೆಂದೇ’’ ನಡೆಸಲಾಯಿತೇ ಹೊರತು ‘‘ಯುದ್ಧವನ್ನು ಪ್ರಾರಂಭಿಸಲು ಅಲ್ಲ’’ವೆಂದು ಫ್ಲೋರಿಡಾದ ತನ್ನ ಪಾಮ್ ಬೀಚ್ ರೆಸಾರ್ಟಿನಿಂದ ಟ್ರಂಪ್ ಪ್ರತಿಪಾದಿಸಿದರು.

ವಾಸ್ತವವೇನೆಂದರೆ ಅಮೆರಿಕವು ಮತ್ತೊಮ್ಮೆ ರಾಜತಾಂತ್ರಿಕ ಸಭ್ಯತೆಯನ್ನು ಮತ್ತು ಸಾರ್ವಭೌಮಿ ರಕ್ಷಣೆಗಳನ್ನು ಉಲ್ಲಂಘಿಸಲು ಸೈನಿಕ ಅಗತ್ಯಗಳನ್ನು ನೆಪವಾಗಿ ಬಳಸುತ್ತಿದೆ. ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೆನ್ರಿ ಕಿಸಿಂಜರ್ ನಿರ್ಮಿಸಿದ ಅಮೆರಿಕ ನಾಯಕತ್ವದ ‘ಮಧ್ಯ ಪ್ರಾಚ್ಯ ವ್ಯವಸ್ಥೆ’ ಮತ್ತು 1970ರ ಮಧ್ಯಭಾಗದಿಂದ ಮೂರನೇ ವಿಶ್ವದ ದೇಶಗಳು ಹೆಚ್ಚೆಚ್ಚು ಆಗ್ರಹಿಸುತ್ತಿದ್ದ ಹೊಸ ಅಂತರ್‌ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗಳು ಈಗ ಕುಸಿದುಬಿದ್ದಿವೆ. ತನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಧ್ಯ ಪ್ರಾಚ್ಯದ ಯುದ್ಧಗಳಲ್ಲಿ ಅಮೆರಿಕವು ಭಾಗವಹಿಸುತ್ತಿರುವುದರ ವಿರುದ್ಧ ನಿಲುವು ತೆಗೆದುಕೊಂಡಿದ್ದ ಟ್ರಂಪ್ ಆಡಳಿತ, 2017ರಲ್ಲಿ ತನ್ನ ತಂತ್ರವನ್ನು ಬದಲಿಸಿ ಬಹಳ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ವ್ಯವಸ್ಥೆಯನ್ನು ಹಾಳುಗೆಡವಲು ಪ್ರಾರಂಭಿಸಿತು. ಇರಾನ್ ನ್ಯೂಕ್ಲಿಯಾರ್ ಒಪ್ಪಂದದಿಂದ ಅಮೆರಿಕ ಏಕಪಕ್ಷೀಯವಾಗಿ ಹಿಂದೆೆಗೆದದ್ದು, ಜೆರುಸಲೇಂ ಅನ್ನು ಇಸ್ರೇಲಿನ ರಾಜಧಾನಿ ಎಂದು ಮಾನ್ಯ ಮಾಡಿ ಅಮೆರಿಕದ ರಾಯಭಾರ ಕಚೇರಿಯನ್ನು ಅಲ್ಲಿಗೇ ಸ್ಥಳಾಂತರಿಸಿದ್ದು, ಇರಾನಿನ ಜನತೆಯ ಬೆನ್ನು ಮೂಳೆ ಮುರಿಯುವಷ್ಟು ಆರ್ಥಿಕ ದಿಗ್ಬಂಧನ ಗಳನ್ನು ಹೇರಿದ್ದು, ಇರಾನಿನ ರೆವುಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದ್ದು-ಇವೆಲ್ಲವೂ ಇರಾನಿನ ‘ವ್ಯೆಹಾತ್ಮಕ ಸಹನೆ’ಯ ಮೇಲೆ ಅತಿ ಹೆಚ್ಚು ಒತ್ತಡಗಳನ್ನು ಹಾಕಿ ಪ್ರಚೋದಿಸುವ ಕೃತ್ಯಗಳೇ ಆಗಿದ್ದವು. ಸಿರಿಯದಲ್ಲಿ ಇರಾನಿನ ಮಧ್ಯಪ್ರವೇಶ ಮತ್ತು ಐಸಿಸ್ ಮೇಲೆ ಅಮೆರಿಕ ನಡೆಸುತ್ತಿರುವ ಯುದ್ಧದ ವಿರುದ್ಧ ಇರಾನಿನ ಮಧ್ಯಪ್ರವೇಶಗಳು ಅಮೆರಿಕ ಮತ್ತದರ ಮಿತ್ರಶಕ್ತಿಗಳ ಕಣ್ಣುಕೆಂಪಾಗಿಸಿದೆ. ಏಕೆಂದರೆ ಆ ಪ್ರದೇಶದ ದೇಶಗಳ ನಡುವೆ ಸಂಬಂಧಗಳು ಕುದುರಿದರೆ ಅಮೆರಿಕದ ಸಾಮ್ರಾಜ್ಯಶಾಹಿ ಅಗತ್ಯಗಳಿಗೆ ಸೇವೆ ಸಲ್ಲಿಸುವ ಸರಕಾರಗಳು ನಾಶವಾಗುತ್ತವೆ.

ಇರಾಕಿನಲ್ಲಿ ಹೆಚ್ಚಾಗುತ್ತಿರುವ ರಾಷ್ಟ್ರೀಯವಾದಿ ಹೋರಾಟದಲೆಗಳು ಮತ್ತು ಇರಾಕಿನ ನೆಲದಿಂದ ಅಮೆರಿಕದ ಸೇನೆಯನ್ನು ವಾಪಸ್ ಪಡೆಯಬೇಕೆಂಬ ಒತ್ತಡಗಳು ಅಮೆರಿಕವನ್ನು ಕಂಗೆಡಿಸಿವೆ. ವಿಚಿತ್ರವೆಂದರೆ, ಆ ಪ್ರದೇಶದ ಅತ್ಯಂತ ಬಡ ದೇಶವಾದ ಯಮೆನ್‌ನಲ್ಲಿ ಸಾಪೇಕ್ಷವಾಗಿ ಅತ್ಯಂತ ಸಣ್ಣ ಬಂಡುಕೋರರ ಗುಂಪಾದ ಹೌದಿಗಳಿಗೂ ಮತ್ತು ದುರ್ಬಲ ಸರಕಾರಕ್ಕೂ ನಡುವೆ ನಡೆಯುತ್ತಿರುವ ಯುದ್ಧವು ಇರಾನ್ ಮತ್ತು ಸೌದಿ ದೇಶಗಳ ನಡುವಿನ ವೈರತ್ವದ ಕೇಂದ್ರವಾಗಿಬಿಟ್ಟಿದೆ. ಜಗತ್ತಿನ ಅತ್ಯಂತ ದೊಡ್ಡ ತೈಲ ರಫ್ತುದಾರನಾಗಬೇಕೆಂಬ ಉದ್ದೇಶ ಹೊಂದಿರುವ ಅಮೆರಿಕಕ್ಕೆ ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಸಮೈಕ್ಯತೆಯು ರೂಪುಗೊಳ್ಳುವುದು ರುಚಿಸುವುದಿಲ್ಲ. ಜೊತೆಗೆ ಶಿಯಾ ಮತ್ತು ಸುನ್ನಿಗಳ ಐಕ್ಯತೆಯೊಂದಿಗಿರುವ ಒಂದು ಧರ್ಮ ನಿರಪೇಕ್ಷ ಪಶ್ಚಿಮ ಏಶ್ಯ ಇಸ್ರೇಲಿಗೆ ಆತಂಕವನ್ನೇ ಉಂಟುಮಾಡುತ್ತದೆ. 1970ರ ದಶಕದಲ್ಲಿ ಅಭಿವೃದ್ಧಿಶೀಲ ಹಾಗೂ ಬಡದೇಶಗಳ ಒಕ್ಕೂಟದಿಂದ ಪಶ್ಚಿಮ ಏಶ್ಯವನ್ನು ಹೊರಗುಳಿಯುವಂತೆ ಮಾಡಿ ಅವರ ನಡುವಿನ ಸೌಹಾರ್ದತೆಗೆ ಅಮೆರಿಕ ಧಕ್ಕೆಯುಂಟು ಮಾಡಿತು. ತನ್ನ ಆಧಿಪತ್ಯವನ್ನು ಸ್ಥಾಪಿಸಿಕೊಳ್ಳಲು ಆ ಪ್ರದೇಶವನ್ನು ಬಳಸಿಕೊಂಡ ನಂತರ ಈಗ ಅದೇ ದೇಶಗಳನ್ನು ಬಡದೇಶಗಳ ಸಾಲಿಗೆ ತಳ್ಳಲು ಅಮೆರಿಕ ಬಯಸುತ್ತಿದೆ. ವಾಸ್ತವಿಕ ಭೌಗೋಳಿಕ-ರಾಜಕೀಯ ಸತ್ಯವೇನೆಂದರೆ ಇರಾಕ್, ಲೆಬನಾನ್ ಮತ್ತು ಸಿರಿಯದ ಬಂದರುಗಳ ಮೂಲಕ ಮೆಡಿಟರೇನಿಯನ್ ಸಮುದ್ರಕ್ಕೆ ನೇರ ಪ್ರವೇಶ ಒದಗಿಸಲು ಪೂರಕವಾದ ಬಗ್ದಾದ್-ಬೈರೂತ್ ಭೂ-ಸೇತುವೆಯನ್ನು ನಿರ್ಮಿಸಲು ಇರಾನ್ ಬಯಸುತ್ತದೆ. ಅದು ಸಾಧ್ಯವಾಗಿಬಿಟ್ಟರೆ ಆ ಪ್ರದೇಶದ ವಾಣಿಜ್ಯವು ಅಮೆರಿಕದ ನೌಕಾಪಡೆಯು ನಿಯಂತ್ರಣದಲ್ಲಿರುವ ಸಮುದ್ರಮಾರ್ಗದಿಂದ ಮುಕ್ತಗೊಳ್ಳುತ್ತದೆ. ಆದ್ದರಿಂದಲೇ ಈ ಯೋಜನೆಯನ್ನು ಅಮೆರಿಕ, ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳು ಹಾಳುಗೆಡವಲು ಪ್ರಯತ್ನಿಸುತ್ತಿವೆ.

ಈ ಸಂದರ್ಭದಲ್ಲಿ, ಬ್ರಿಟನ್ ಮತ್ತು ಅಮೆರಿಕ ದೇಶಗಳು ಮೊದಲ ಮಹಾಯುದ್ಧಕ್ಕೆ ಪ್ರಚೋದಿಸಲು ಕಾರಣವಾದದ್ದೂ ಸೂಯೆಜ್ ಕಾಲುವೆಯ ಮಹತ್ವವನ್ನು ಕಡೆಗಣನೆಯಾಗುವ ರೀತಿಯಲ್ಲಿ ಜರ್ಮನಿಯು ಬರ್ಲಿನ್-ಬಗ್ದಾದ್ ರೈಲ್ವೆಯನ್ನು ನಿರ್ಮಾಣಕ್ಕೆ ಮುಂದಾದದ್ದೇ ಎಂಬುದನ್ನು ಮರೆಯಬಾರದು. ಅಮೆರಿಕ ಮತ್ತು ಇರಾನಿನ ನಡುವೆ ಹೆಚ್ಚಾಗುತ್ತಿರುವ ಘರ್ಷಣೆಗಳ ಕಾರಣದಿಂದ ನೌಕಾ ಮಾರ್ಗದಿಂದ ಆಗುವ ತೈ ಸಾಗಣೆಯಲ್ಲಿ ಶೇ.20ರಷ್ಟು ಹಾದುಹೋಗುವ ಹೋರ್ಮುಝ್ ಕಾಲುವೆಯು ಬಂದಾಗುವ ಸಾಧ್ಯತೆಯಿದೆ. ಈ ತಡೆಯಿಂದ ತೈಲ ಸಾಗಣೆಗೆ ಆಡಚಣೆಯುಂಟಾಗಿ ತೈಲದ ದರವು ಹೆಚ್ಚಾಗಿ ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಕಳೆದ ಹಲವು ವರ್ಷಗಳಿಂದ ಮಂದಗತಿಯ ಆರ್ಥಿಕತೆಯಿಂದಾಗಿ ಕಂಗೆಟ್ಟಿರುವ ಭಾರತಕ್ಕೆ ಈ ಹೊಡೆತವನ್ನು ತಡೆದುಕೊಳ್ಳಲು ಕಷ್ಟವಾಗಬಹುದು. ಅಮೆರಿಕವು ಭಾರತವನ್ನು ತನ್ನ ಮಧ್ಯವರ್ತಿಯಾಗಿ ಬಳಸಿಕೊಳ್ಳಲು ಬಯಸುವುದಾದರೆ ಭಾರತದ ವಿದೇಶಾಂಗ ವ್ಯವಸ್ಥೆಯು ಟ್ರಂಪ್ ಆಡಳಿತದ ಜೊತೆಗೆ ತನಗಿರುವ ಮಿತ್ರ ಸಂಬಂಧವನ್ನು ಬಳಸಿಕೊಂಡು ವಾತಾವರಣವು ಶಾಂತಿಯೆಡೆಗೆ ಮರಳುವಂತೆ ಪ್ರಯತ್ನಿಸಬೇಕು.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News