ಹರ್ಯಾಣ ಸರಕಾರದ ಬಳಿ ಸಿಎಂ ಖಟ್ಟರ್ ಪೌರತ್ವ ಸಾಬೀತುಪಡಿಸುವ ಯಾವುದೇ ದಾಖಲೆಯಿಲ್ಲ: ಆರ್ ಟಿಐಗೆ ಉತ್ತರ
Update: 2020-03-05 08:44 GMT
ಚಂಡೀಗಢ: ಹರ್ಯಾಣ ಸರಕಾರದ ಬಳಿ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅವರ ಸಚಿವ ಸಂಪುಟ ಸದಸ್ಯರು ಹಾಗೂ ರಾಜ್ಯಪಾಲರ ಪೌರತ್ವ ಕುರಿತಾದ ಯಾವುದೇ ದಾಖಲೆಗಳಿಲ್ಲ ಎಂದು ಆರ್ ಟಿಐ ಅರ್ಜಿಗೆ ದೊರೆತ ಉತ್ತರದಿಂದ ತಿಳಿದು ಬಂದಿದೆ.
ಜನವರಿ 20ರಂದು ಪಾಣಿಪತ್ ಮೂಲದ ಆರ್ ಟಿಐ ಕಾರ್ಯಕರ್ತ ಪಿ ಪಿ ಕಪೂರ್ ಆರ್ ಟಿಐ ಅರ್ಜಿ ಸಲ್ಲಿಸಿ ಮುಖ್ಯಮಂತ್ರಿ, ಸಚಿವರು ಹಾಗೂ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರ ಪೌರತ್ವ ಸಾಬೀತುಪಡಿಸುವ ದಾಖಲೆಗಳ ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಹರ್ಯಾಣದ ಸಾರ್ವಜನಿಕ ಮಾಹಿತಿ ಅಧಿಕಾರಿ, ತಮ್ಮ ದಾಖಲೆಗಳಲ್ಲಿ ಇಂತಹ ಯಾವುದೇ ಮಾಹಿತಿಯಿಲ್ಲ, ಇಂತಹ ಮಾಹಿತಿ ಚುನಾವಣಾ ಆಯೋಗದ ಬಳಿ ಇರಬಹುದು ಎಂದಿದ್ದಾರೆ.
ಹರ್ಯಾಣದಲ್ಲಿಯೂ ಅಸ್ಸಾಂನಂತೆಯೇ ಎನ್ಆರ್ ಸಿ ಜಾರಿಗೊಳಿಸಲಾಗುವುದು ಎಂದು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಖಟ್ಟರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.