ಭಟ್ಟರು ಯಾಕೆ ಕೊರೋನ ಹಾಡು ಬರೆಯಲಿಲ್ಲ ಗೊತ್ತೇ..?!

Update: 2020-03-28 17:35 GMT

ಯೋಗರಾಜ್ ಭಟ್ಟರೆಂದರೆ ಕನ್ನಡ ಸಿನಿರಸಿಕರಲ್ಲಿ ಒಂದು ನಿರೀಕ್ಷೆ ಇದ್ದೇ ಇರುತ್ತದೆ. ಆ ನಿರೀಕ್ಷೆ ಏನೆಂದರೆ ಅವರು ನಮ್ಮ ನಿರೀಕ್ಷೆಯನ್ನು ಮೀರಿ ಏನಾದರೂ ಮಾಡುತ್ತಾರೆ ಎನ್ನುವುದೇ ನಿರೀಕ್ಷೆ. ಸಾಮಾನ್ಯವಾಗಿ ಯಾವುದೇ ಸಾಮಾಜಿಕ ಘಟನೆಗಳಿಗೆ ಯೋಗರಾಜ್ ಭಟ್ಟರು ತಕ್ಷಣದ ಪ್ರತಿಕ್ರಿಯೆಯನ್ನು ತಮ್ಮ ಮೊನಚಾದ ಲೇಖನಿಯ ಮೂಲಕ ನೀಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಬಹಳಷ್ಟು ಬಾರಿ ಅವು ಹಾಡುಗಳ ರೂಪದಲ್ಲಿರುತ್ತವೆ. ಉಳಿದವುಗಳು ಸಿನೆಮಾಗಳ ಪಾತ್ರಗಳ ಮೂಲಕ, ಸಂಭಾಷಣೆಗಳ ಮೂಲಕ, ದೃಶ್ಯಗಳ ಮೂಲಕ ಅವರು ಹೊರಗೆಡಹುವುದನ್ನು ಕಂಡಿದ್ದೇವೆ. ಆ ನಿಟ್ಟಿನಲ್ಲಿ ಈ ಬಾರಿ ಕೊರೋನ ವೈರಸ್ ಕುರಿತಾದ ಗೀತೆಯೊಂದು ಅವರ ಕಡೆಯಿಂದ ಬಂದೇ ಬರುವುದೆನ್ನುವ ನಂಬಿಕೆ ಹಲವರಲ್ಲಿತ್ತು. ಆದರೆ ಭಟ್ಟರು ಆ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ. ಅದು ಯಾಕೆ ಮತ್ತು ಈ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಅವರು 'ವಾರ್ತಾಭಾರತಿ'ಯ ಮೂಲಕ ಉತ್ತರಿಸಿದ್ದಾರೆ.

  ಕರ್ಫ್ಯೂನಲ್ಲಿ ಹೇಗಿದ್ದೀರಿ ಭಟ್ಟರೇ?
 
 ಆರಾಮ. ಬರವಣಿಗೆ, ಓದುವುದು ಮತ್ತು ಸಂಗೀತ ಕೇಳುವುದು ಇವುಗಳಲ್ಲೇ ಜೀವನ ಸಾಗುತ್ತಿದೆ. ‘ಗಾಳಿಪಟ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಗೆ ಸಂಬಂಧಿಸಿದಂತೆ ಸಂಕಲನ ಮಾಡುವ ತನಕದ ಕೆಲಸಗಳು ನಡೆದಿವೆ. ದೀಪು ನೀಟಾಗಿ ಎಲ್ಲ ಮುಗಿಸಿದ್ದಾನೆ. ಚಿತ್ರದ ಇನ್ನೊಂದಷ್ಟು ಭಾಗ ಪೋಲ್ಯಾಂಡ್ ನಲ್ಲಿ ಚಿತ್ರೀಕರಣದ ಯೋಜನೆ ಹಾಕಿದ್ದೆವು. ಅಷ್ಟರಲ್ಲಿ ಹೀಗಾಯಿತು.

ನಿಮಗೆ ಯಾವತ್ತಾದರೂ ಇಂತಹದೊಂದು ವೈರಸ್ ಕಾಟವಾಗುವ ಕಲ್ಪನೆ ಇತ್ತೇ?

 ಹಿಂದೆ ನಾನು ಒಂದು ಇಂಗ್ಲಿಷ್ ಸೀರೀಸ್ ನೋಡುತ್ತಿದ್ದೆ. ಅದರ ಹೆಸರು ‘ಎಎಕ್ಸ್‌ಎನ್ 24’ ಎಂದು. ಅದರಲ್ಲಿ ಬಯಾಲಾಜಿಕಲ್ ಅಟ್ಯಾಕ್ ಆಗಲಿದೆ ಎಂದು ಗೊತ್ತಾದಾಗ ಹೊಟೇಲ್‌ನಲ್ಲಿ ಇರುವ ಎಲ್ಲ ಗ್ರಾಹಕರನ್ನು, ಸೇವಾ ನಿರತರನ್ನು ಪೊಲೀಸರು ಕೂಡಿ ಹಾಕಿರುತ್ತಾರೆ. ಆಗ ಒಬ್ಬನಿಂದ ಎಷ್ಟು ಜನಕ್ಕೆ ಬರುತ್ತದೆ ಎಂದು ಹುಡುಕಿದಾಗ ಒಂಥರಾ ಹೆದರಿಕೆ ಆಗಿ ಬಿಟ್ಟಿತ್ತು. ಹೀಗೆಲ್ಲ ಆದರೆ ಏನಾಗಿಬಿಡಬಹುದು ಪ್ರಪಂಚ ಎಂದು ಆತಂಕವಾಗಿತ್ತು.

ಒಂದು ವೇಳೆ ಹೊರಗೆ ತಿರುಗಾಡಬಹುದು ಎಂದು ಇದ್ದಲ್ಲಿ ನೀವೇನು ಮಾಡುತ್ತಿದ್ದಿರಿ?
ನಾನು ಒಂಥರಾ ತಿರುಗಾಡೋ ತಿಪ್ಪ. ಯೋಜನೆಗಳಿಲ್ಲದೇ ತಿರುಗಾಡೋನು ನಾನು. ಪ್ರತಿ ವರ್ಷ ಸುಮಾರು ಆರು ತಿಂಗಳ ಕಾಲ ಸುತ್ತಾಟದಲ್ಲೇ ಕಳೆದು ಹೋಗುತ್ತದೆ. ಗ್ರಾಮೀಣ ಪ್ರದೇಶಗಳೇ ಇಷ್ಟ. ನಗರದಲ್ಲಿದ್ದು ಮಾಡುವುದಾದರೂ ಏನು? ಹಾಗಾಗಿ ಹಳ್ಳಿಗಾಡು, ಗ್ರಾಮೀಣ ಪ್ರದೇಶಗಳನ್ನು ಸುತ್ತುವ ಕಾರ್ಯಕ್ರಮ ಹಾಕುತ್ತಿದ್ದೆ.

 ನೀವೇಕೆ ಕೊರೋನ ಬಗ್ಗೆ ಜಾಗೃತಿ ಗೀತೆ ಬರೆಯಲಿಲ್ಲ?

ಈ ಬಾರಿ ಇಂಟರ್ನೆಟ್‌ನಲ್ಲಿ ನಾನೇ ತುಂಬ ಕಡೆಯಲ್ಲಿ ನೋಡಿದೆ. ಎಲ್ಲರೂ ಬರೆಯುತ್ತಿದ್ದಾರೆ. ಪಬ್ಲಿಕ್ ಕೂಡ ಬರೆಯುತ್ತಿದ್ದಾರೆ. ಬೇರೆಯವರು ಬರೆದಿರುವುದು ಕೂಡ ತುಂಬ ಚೆನ್ನಾಗಿಯೇ ಇದೆ ಅನಿಸಿತು. ಇನ್ನು ನಾನಾಗಿ ಏನು ಬರೆಯಲಿ ಅಂದುಕೊಂಡು ಸುಮ್ಮನಾದೆ. ಮಾತ್ರವಲ್ಲ, ಈಗ ಒಂದು ವೇಳೆ ಬರೆದರೆ ಕೂಡ ರೆಕಾರ್ಡಿಂಗ್ ಬೇರೆ ಮಾಡಬೇಕಲ್ವ? ಅದು ಕೂಡ ಸಾಧ್ಯವಾಗುತ್ತಿಲ್ಲ ಎನ್ನುವುದು ಸಮಸ್ಯೆ.

ನೀವು ಆ ಹಾಡಿನಲ್ಲಿ ನೀಡಬೇಕಾದ ಜಾಗೃತಿಯನ್ನು ಮಾತಿನಲ್ಲಿ ಹೇಗೆ ಹೇಳುತ್ತೀರಿ?
ಮನುಷ್ಯರು ಹೇಳಿದರೆ ಮನುಷ್ಯರಿಗೆ ಅರ್ಥವಾಗುವ ಕಾಲ ಹೋಗಿದೆ ಅನಿಸುತ್ತಿದೆ. ಪ್ರಕೃತಿಯೇ ಹೇಳಬೇಕು. ಅದನ್ನು ಪ್ರಕೃತಿ ಈಗ ವೈರಸ್ ರೂಪದಲ್ಲಿ ಹೇಳುತ್ತಿದೆ ಮುಚ್ಕೊಂಡು ಮನೇಲಿರಿ ಅಂತ. ನಾವು ಪ್ರಕೃತಿಯ ಮಾತನ್ನು ಕೇಳುವುದು ಯಾವಾಗಲೂ ಒಳ್ಳೆಯದು. ಸದ್ಯದ ಮಟ್ಟಿಗಂತೂ ಅದೇ ಅಂತಿಮ. ಬೇರೆ ಆಪ್ಷನ್ ಕೂಡ ಇಲ್ಲ. ನಮ್ಮ ವೈದ್ಯರುಗಳು ಹೇಳಿದರಾಗಲೀ, ಪೊಲೀಸ್ ಅಧಿಕಾರಿಗಳು ಹೇಳಿದಾಗ ಆಗಲೀ ನಾವು ಅದನ್ನು ಅನುಸರಿಸುವ ಮನಸು ಮಾಡುತ್ತಿಲ್ಲ. ಮನುಷ್ಯನ ಮೌಢ್ಯಕ್ಕೆ ಪ್ರಕೃತಿಯೇ ಬಂದು ಚುಚ್ಚು ಮದ್ದು ಕೊಟ್ಟಿದೆ ಎಂದು ಸುಮ್ಮನಿರಬೇಕಾದ ಕಾಲ ಇದು.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News