ನಿನ್ನೆ ವಲಸೆ ಕಾರ್ಮಿಕರಿಗೆ ಕೊಟ್ಟ ಪ್ಯಾಕೇಜ್‌ನಲ್ಲಿರುವ ಸೊನ್ನೆಗಳೆಷ್ಟು?

Update: 2020-05-15 17:30 GMT

ಇಂದು ಈ ವಲಸೆ ಕಾರ್ಮಿಕರು ತಮಗಿದ್ದ ಉದ್ಯೋಗ, ಉಳಿತಾಯ, ಆದಾಯ ಎಲ್ಲವನ್ನು ಕಳೆದುಕೊಂಡು ಹಳ್ಳಿಗೆ ಮರಳುತ್ತಿದ್ದಾರೆ. ಹಳ್ಳಿಗಳಲ್ಲಿರುವ ಈ ವಲಸೆ ಕಾರ್ಮಿಕರ ಕುಟುಂಬಗಳು ಸಹ ಇವರು ಪ್ರತಿ ತಿಂಗಳು ಕಳಿಸುತ್ತಿದ್ದ ಹಣವನ್ನು ಆಧರಿಸಿಯೇ ಬದುಕುತ್ತಿದ್ದವು. ಹೀಗಾಗಿ ಊರಿಗೆ ಮರಳುತ್ತಿರುವ ವಲಸೆ ಕಾರ್ಮಿಕರು ಮಾತ್ರವಲ್ಲ ಅವರನ್ನು ನಂಬಿಕೊಂಡು ಊರಲ್ಲೇ ಇದ್ದ ಅವರ ಕುಟುಂಬಗಳಿಗೂ ಸಹ ಈ ಲಾಕ್‌ಡೌನ್‌ನಿಂದ ಹೊತ್ತು ಊಟಕ್ಕೂ ದಾರಿಯಿಲ್ಲದಂತಾಗಿದೆ.


ನಿನ್ನೆ ಕೋವಿಡ್-19 ಪ್ಯಾಕೇಜ್‌ನ ಧಾರಾವಾಹಿಯ ಎರಡನೇ ಕಂತು ಪ್ರಕಟವಾಯಿತಷ್ಟೆ. ಅದನ್ನೇ ವಲಸೆ ಕಾರ್ಮಿಕರ ಬದುಕು-ಭವಿಷ್ಯಕ್ಕಿಂತ ಅವರ ನೆನಪಿಗೆ ಅರ್ಪಿಸಿದಂತಿದೆ.

ಈ ಪ್ಯಾಕೇಜ್, ಮೋದಿ ಸರಕಾರಕ್ಕೆ ಭಾರತದ ಈ ವರ್ಗಗಳು ಎದುರಿಸುತ್ತಿರುವ ಘನಘೋರ ಪರಿಸ್ಥಿತಿಗಳ ಬಗ್ಗೆ ಅರಿವು ಇಲ್ಲ. ಕಾಳಜಿಯೂ ಇಲ್ಲ ಹಾಗೂಕನಿಷ್ಠ ಸಂವೇದನೆಯೂ ಇಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಅದರಲ್ಲೂ ಹಣಕಾಸುಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಈ ಸಂವೇದನಾಶೂನ್ಯತೆಯ ಸಾಕಾರ ರೂಪವೇ ಆಗಿದ್ದಾರೆ ಹಾಗೂ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಫ್ರಾನ್ಸ್‌ನ ರಾಣಿಯಾಗಿದ್ದ ಮೇರಿ ಆಂಟನಿತ್ ಅವರನ್ನು ನೆನಪಿಗೆ ತರುತ್ತಾರೆ. ಆಗ ತಿನ್ನಲು ಬ್ರೆಡ್ ಕೂಡ ಇಲ್ಲದೆ ಹಸಿವು ಬಡತನಗಳಿಂದ ಕಂಗೆಟ್ಟಿದ್ದ ರೈತಾಪಿ ಜನ ಫ್ರಾನ್ಸ್‌ನ ಅರಮನೆಗೆ ಮುತ್ತಿಗೆ ಹಾಕಿದ್ದರಂತೆ. ರೈತರೆಂದರೆ ಯಾರು ಏನು ಎಂದೇ ಅರಿವಿರದ ಆ ಮಹಾರಾಣಿ ಮೇರಿ ತಿನ್ನಲು ಬ್ರೆಡ್ ಇಲ್ಲದಿದ್ದರೇನಂತೆ ಈ ರೈತರು ಕೇಕ್ ತಿನ್ನಬಹುದಲ್ಲ ಎಂದು ಸಲಹೆ ಕೊಟ್ಟಿದ್ದರಂತೆ....ಅದೇ ರೀತಿ ನಮ್ಮ ನಿರ್ಮಲಾ ಮೇಡಂ..

ಸ್ವಲ್ಪ ದಿನಗಳ ಹಿಂದೆ, ಈ ದೇಶದ ಬಡಜನತೆಯ ನಿತ್ಯದ ಆಹಾರದ ಅವಿಭಾಜ್ಯ ಖಾದ್ಯವಾಗಿರುವ ಈರುಳ್ಳಿಯ ಬೆಲೆ ಗಗನಕ್ಕೇರಿತ್ತಷ್ಟೆ. ಸರಕಾರವು ಈರುಳ್ಳಿ ಬೆಲೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸುತ್ತಿದ್ದಾಗ ನಮ್ಮ ಭಾರತದ ಮೇರಿ ನಿರ್ಮಲಾ ಅವರು ನಾನು ಈರುಳ್ಳಿ ಬಳಸುವುದೇ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ್ದರು. ಇದು ಈ ಬಾಲ್ಕನಿ ಸರಕಾರಕ್ಕೆ ಸಂಕಷ್ಟದಲ್ಲಿರುವ ಭಾರತದ ಬಗ್ಗೆ ಇರುವ ಗ್ರಹಿಕೆ ಮತ್ತು ಕಾಳಜಿ. ಇದೇ ಧೋರಣೆ ಮೊನ್ನೆ MSME ಕ್ಷೇತ್ರಕ್ಕೆ ಘೋಷಿಸಿದ ಪ್ಯಾಕೇಜ್‌ನಲ್ಲಿ ವ್ಯಕ್ತವಾಗಿತ್ತು. ಅದೇ ಅಮಾನವೀಯ ಧೋರಣೆಯು ನಿನ್ನೆ ವಲಸೆ ಕಾರ್ಮಿಕರಿಗೆಂದು ಘೋಷಿಸಿದ ಪ್ಯಾಕೇಜ್‌ನಲ್ಲಿ ಢಾಳಾಗಿ ಕಾಣುತ್ತಿತ್ತು. ವಾಸ್ತವವಾಗಿ ಅವರ ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ ತಮ್ಮ ಊರುಗಳನ್ನು ಸೇರಿಕೊಳ್ಳಲು ಸಾವಿರ ಕಿ.ಮೀ. ದೂರ ಕ್ರಮಿಸಿದ್ದ 16ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮೇಲೆ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶಗಳಲ್ಲಿ ಎರಡು ಬೇರೆಬೇರೆ ಪ್ರಕರಣಗಳಲ್ಲಿ ವಾಹನಗಳು ಹರಿದು ಪ್ರಾಣ ಬಿಟ್ಟಿದ್ದರು. ಇದೇ ರೀತಿ ಈಗಾಗಲೇ ಮೋದಿ ಸರಕಾರದ ವಿವೇಚನಾ ರಹಿತ ಲಾಕ್‌ಡೌನ್‌ನ ಕ್ರೌರ್ಯಕ್ಕೆ ಬಲಿಯಾಗಿ 383ಕ್ಕೂ ಅಧಿಕ ವಲಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ವಲಸೆ ಕಾರ್ಮಿಕರ ಪ್ಯಾಕೇಜ್‌ನಲ್ಲಿ ಏನಿಲ್ಲವೆಂದರೂ ಇನ್ನು ಬೀದಿಯಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ವ್ಯವಸ್ಥೆಯ ಘೋಷಣೆಯಾದರೂ ಆಗಬೇಕಿತ್ತು. ಆದರೆ ಮೇರಿ ನಿರ್ಮಲಾ ಅವರ ಪತ್ರಿಕಾಗೋಷ್ಠಿಯಲ್ಲಿ ಸರಕಾರದ ಲಾಕ್‌ಡೌನ್ ಮಾಡಿದ ಈ ಕೊಲೆಗಳ ಬಗ್ಗೆ ಒಂದು ಪಶ್ಚಾತ್ತಾಪದ ದನಿಯೂ ಇರಲಿಲ್ಲ. ಊರಿಗೆ ಸೇರಿಸುವ ವ್ಯವಸ್ಥೆಯ ಬಗ್ಗೆ ಒಂದಕ್ಷರವೂ ಇರಲಿಲ್ಲ. ಅದನ್ನು ನಿರೀಕ್ಷೆ ಮಾಡುವುದು ದುರಾಸೆಯೇ ಆದೀತು.
ಹೋಗಲಿ ಘೋಷಿಸಿದ ಪ್ಯಾಕೇಜ್‌ನಲ್ಲಾದರೂ ಏನಿತ್ತು?

ಸರಕಾರದ ನಿನ್ನೆಯ ಘೋಷಣೆಯ ಪ್ರಕಾರ ಭಾರತದಲ್ಲಿ 8 ಕೋಟಿ ವಲಸೆ ಕಾರ್ಮಿಕರಿದ್ದಾರೆ. ಆದರೆ ವಾಸ್ತವದಲ್ಲಿ 2011ರ ಸೆನ್ಸಸ್ ಪ್ರಕಾರ ನೋಡಿದರೂ ಈ ದೇಶದಲ್ಲಿ 12 ಕೋಟಿ ವಲಸೆ ಕಾರ್ಮಿಕರಿದ್ದಾರೆ. ಇನ್ನುಳಿದ ಲೆಕ್ಕಕ್ಕೆ ಸಿಗದ 4 ಕೋಟಿ ಕಾರ್ಮಿಕರು ಈ ಘೋಷಣೆಯಲ್ಲೇ ಅನಾಥರಾಗಿ ಹೋದರು. ಇರಲಿ ಲೆಕ್ಕಕ್ಕಿರುವವರಿಗಾದರೂ ಬದುಕು-ಭವಿಷ್ಯ ಕಟ್ಟಿಕೊಳ್ಳಲು ಏನು ಕೊಡಲಾಗಿದೆ? ಇಂದು ಈ ವಲಸೆ ಕಾರ್ಮಿಕರು ತಮಗಿದ್ದ ಉದ್ಯೋಗ, ಉಳಿತಾಯ, ಆದಾಯ ಎಲ್ಲವನ್ನು ಕಳೆದುಕೊಂಡು ಹಳ್ಳಿಗೆ ಮರಳುತ್ತಿದ್ದಾರೆ. ಹಳ್ಳಿಗಳಲ್ಲಿರುವ ಈ ವಲಸೆ ಕಾರ್ಮಿಕರ ಕುಟುಂಬಗಳು ಸಹ ಇವರು ಪ್ರತಿ ತಿಂಗಳು ಕಳಿಸುತ್ತಿದ್ದ ಹಣವನ್ನು ಆಧರಿಸಿಯೇ ಬದುಕುತ್ತಿದ್ದವು. ಹೀಗಾಗಿ ಊರಿಗೆ ಮರಳುತ್ತಿರುವ ವಲಸೆ ಕಾರ್ಮಿಕರು ಮಾತ್ರವಲ್ಲ ಅವರನ್ನು ನಂಬಿಕೊಂಡು ಊರಲ್ಲೇ ಇದ್ದ ಅವರ ಕುಟುಂಬಗಳಿಗೂ ಸಹ ಈ ಲಾಕ್‌ಡೌನ್‌ನಿಂದ ಹೊತ್ತು ಊಟಕ್ಕೂ ದಾರಿಯಿಲ್ಲದಂತಾಗಿದೆ. ಸದ್ಯಕ್ಕೆ ನಗರದ ಆರ್ಥಿಕತೆಯು ಚೇತರಿಸಿಕೊಳ್ಳುವ ಪರಿಸ್ಥಿತಿಯು ಇಲ್ಲದಿರುವುದರಿಂದ ಸರಕಾರವು ಮುಂದಿನ ಒಂದು ವರ್ಷಕ್ಕಾದರೂ ಈ 12 ಕೋಟಿ ಕುಟುಂಬಗಳ ಆಹಾರ ಹಾಗೂ ಉದ್ಯೋಗ ಖಾತರಿಗಳಿಗೆ ಬೇಕಾಗುವಷ್ಟು ಸಂಪನ್ಮೂಲವನ್ನು ಪ್ಯಾಕೇಜಿನಲ್ಲಿ ಒದಗಿಸಬೇಕಿತ್ತು. ಅಂದರೆ 12 ಕೋಟಿ ಜನರಿಗೆ ಮುಂದಿನ ಕನಿಷ್ಠ 12 ತಿಂಗಳಿಗೆ ಬೇಕಾಗುವಷ್ಟು ಪಡಿತರ ಹಾಗೂ NREGA ಅಡಿಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಬೇಕಾದಷ್ಟು ಸಂಪನ್ಮೂಲವನ್ನು ಒದಗಿಸಬೇಕಿತ್ತು. ಇದಕ್ಕಾಗಿ ಏನಿಲ್ಲವೆಂದರೂ ಕನಿಷ್ಠ 1 ಲಕ್ಷ ಕೋಟಿ ರೂ. ಸಂಪನ್ಮೂಲವನ್ನು ನೇರವಾಗಿ ವರ್ಗಾವಣೆ ಮಾಡಬೇಕಿತ್ತು. ಆದರೆ ಸರಕಾರವು ಈ ಪ್ಯಾಕೇಜ್‌ನಲ್ಲಿ 8 ಕೋಟಿ ವಲಸೆ ಕಾರ್ಮಿಕರಿಗೆ ಮುಂದಿನ ಎರಡು ತಿಂಗಳ ಪಡಿತರವನ್ನು ಮಾತ್ರ ಉಚಿತವಾಗಿ ನೀಡಲಿದೆ ಹಾಗೂ NREGA ಬಾಬತ್ತಿನಲ್ಲೂ ಕೇವಲ ನೂರು ದಿನಗಳು ಅಂದರೆ 3 ತಿಂಗಳ ಉದ್ಯೋಗವನ್ನು ಹಳ್ಳಿಗಳಲ್ಲಿ ಒದಗಿಸಲು ಬೇಕಾಗುವಷ್ಟು ಹಣವನ್ನು ಮಾತ್ರ ಪ್ಯಾಕೇಜ್‌ನಲ್ಲಿ ಒದಗಿಸಿದೆ. ಈ ಲೆಕ್ಕಾಚಾರದ ಭಾಗವಾಗಿ ಕೇವಲ 3,500 ಕೋಟಿ ರೂ.ಮಾತ್ರ ಒದಗಿಸಿದೆ. ಹಾಗಿದ್ದಲ್ಲಿ ಮೂರು ತಿಂಗಳ ನಂತರ ಈ 12 ಕೋಟಿ ಬಡ ಭಾರತೀಯರ ಕಥೆಯೇನು?
 ಸರಕಾರದ, RBI, IMF, NOMURA,  Credit-sussie, PwCನಂತಹ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳ ಅಂದಾಜಿನ ಪ್ರಕಾರ ಈ ವರ್ಷ ಭಾರತದ ಅಭಿವೃದ್ಧಿ ದರ ಶೇ. 1ಕ್ಕೆ ಇಳಿಯಲಿದೆ ಅಥವಾ ನಕಾರಾತ್ಮಕವಾಗಲಿದೆ. ನಿರುದ್ಯೋಗ ದರ ಈಗಾಗಲೇ ಶೇ. 23ಕ್ಕೆ ತಲುಪಿದೆ. ಇದರ ಅರ್ಥವಿಷ್ಟೆ. ಮುಂದಿನ ಇಡೀ 12 ತಿಂಗಳುಗಳ ಕಾಲ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುವುದಿಲ್ಲ. ಹೀಗಾಗಿ ವಲಸಿಗರು ವಾಪಸ್ ಬರಲು ಬೇಕಾದ ಉದ್ಯೋಗಗಳನ್ನು ನಗರಗಳು ಸೃಷ್ಟಿಸುವುದಿಲ್ಲ. ಗ್ರಾಮಗಳಲ್ಲಂತೂ ಈ ಮೊದಲೇ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರವು ಮುಂದೆ ನಿಂತು ಇಡೀ ವರ್ಷಕ್ಕೆ ಉದ್ಯೋಗಗಳನ್ನು ಸೃಷ್ಟಿಸಬೇಕು. ಹಳ್ಳಿಯಲ್ಲಿ ಮಾತ್ರವಲ್ಲ ನಗರದಲ್ಲೂ ನಗರ NREGA ಯೋಜನೆಯನ್ನು ರೂಪಿಸಬೇಕು. ಆದರೆ ಬಾಲ್ಕನಿ ಭಾರತದ ಮೇರಿ ನಿರ್ಮಲಾ ಹಾಗೂ ಆಧುನಿಕ ನೀರೋ ದೊರೆಯಾದ ಪ್ರಧಾನಿ ಮೋದಿಗೂ ಈ ಬಡಪಾಯಿ ಭಾರತದ ದುರಂತಗಳು ಲೆಕ್ಕಕ್ಕೇ ಇಲ್ಲ. ಅವರ ‘ಆತ್ಮನಿರ್ಭರ’ ಯೋಜನೆಗಳಿಗೆ ಬರ್ಬರವಾಗಿ ಬಲಿಯಾಗಲೇ ಬೇಕಾದ ಕೊಲ್ಯಾಟರಲ್ ಡ್ಯಾಮೇಜಷ್ಟೇ.

ಅಷ್ಟು ಮಾತ್ರವಲ್ಲ ಈ ಪ್ಯಾಕೇಜೆಂಬುದೇ ಬಡಭಾರತದ ಬಗ್ಗೆ ಮಾಡುತ್ತಿರುವ ಕ್ರೂರ ಹಾಸ್ಯವೆಂಬುದು ನಿನ್ನೆಯ ಪ್ಯಾಕೇಜ್‌ನ ಗಣಿತದಿಂದ ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ ಪ್ರಧಾನಿ ಮೋದಿ ಮಾಡಿದ ಘೋಷಣೆಯ ಪ್ರಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಮಾರ್ಚ್‌ನಲ್ಲಿ ಘೋಷಿಸಲಾದ 1.76 ಲಕ್ಷ ಕೋಟಿ ರೂ.ಯು ಸೇರಿಕೊಳ್ಳುತ್ತದೆ. ಮಾತ್ರವಲ್ಲ ಎರಡು ಹಂತಗಳಲ್ಲಿ RBI ಘೋಷಿಸಿರುವ ನಗದು ಹರಿವಿನ - ಅಂದರೆ ಹಣದ ವರ್ಗಾವಣೆಯಲ್ಲ. ಸಾಲದ ಪೂರೈಕೆ ಮಾತ್ರ- ಮೊತ್ತವು ಸೇರಿಕೊಳ್ಳುತ್ತದೆ. ಅಂದರೆ 20 ಲಕ್ಷ ಕೋಟಿ ರೂ.ಗಳಲ್ಲಿ ಈವರೆಗೆ ಎಷ್ಟು ಘೋಷಣೆಯಾದಂತಾಯಿತು?. ನಿನ್ನೆ ಘೋಷಿಸಿದ ಪ್ಯಾಕೇಜ್‌ನ ಮೊತ್ತ 3.1 ಲಕ್ಷ ಕೋಟಿ ರೂ., ಮೊನ್ನೆ MSMEಗಳಿಗೆಂದು ಘೋಷಿಸಿದ ಪ್ಯಾಕೇಜ್‌ನ ಮೊತ್ತ 6 ಲಕ್ಷ ಕೋಟಿ ರೂ., ಈಗಾಗಲೇ RBI ಘೋಷಿಸಿರುವ ನಗದು ಹರಿವಿನ ಪ್ಯಾಕೇಜ್ 6 ಲಕ್ಷ ಕೋಟಿ ರೂ. ಮಾರ್ಚ್‌ನಲ್ಲಿ ಘೋಷಿಸಿದ ಮೊದಲ ಪ್ಯಾಕೇಜ್ 1.76 ಲಕ್ಷ ಕೋಟಿ ರೂ. ಅಂದರೆ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಅಂದಾಜು 17 ಲಕ್ಷ ಕೋಟಿ ರೂ. ಘೋಷಣೆ ಆಗಿ ಹೋಗಿದೆ. ಆದರೆ ಇದರಲ್ಲಿ ತಮ್ಮದಲ್ಲದ ತಪ್ಪಿಗೆ ಹಾಗೂ ಸರಕಾರದ ವಿವೇಚನಾರಹಿತ ಹಾಗೂ ಅಮಾನವೀಯ ಲಾಕ್‌ಡೌನ್ ಚಿತ್ರಹಿಂಸೆಗಳಿಗೆ ಗುರಿಯಾಗಿ ಜೀವನ ಮತ್ತು ಜೀವನೋಪಾಯಗಳನ್ನು ಕಳೆದುಕೊಂಡಿರುವ ಈ ದೇಶದ ಶೇ. 85ರಷ್ಟು ಬಡ-ಕೆಳಮಧ್ಯಮ ವರ್ಗಗಳ ಜೇಬಿಗೆ ಅಥವಾ ತಟ್ಟೆಗಳಿಗೆ ನೇರವಾಗಿ ವರ್ಗಾಯಿಸಲಾಗಿರುವುದೆಷ್ಟು? ಮೊದಲು ಘೋಷಿಸಿದ 1.76 ಲಕ್ಷ ಕೋಟಿ ರೂ.ಗಳಲ್ಲಿ 50,000 ಕೋಟಿ ರೂ., MSME  ಗಳಿಗೆಂದು ಘೋಷಿಸಿದ 6 ಲಕ್ಷ ಕೋಟಿ ರೂ., ಪ್ಯಾಕೇಜ್‌ನಲ್ಲಿ ಕೇವಲ 4,000 ಕೋಟಿ ರೂ., ನಿನ್ನೆ ಘೋಷಿಸಲಾದ 3.1 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಕೇವಲ 3,500 ಕೋಟಿ ರೂ. ಅಂದರೆ ಈವರೆಗಿನ 17 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ 110 ಕೋಟಿಗೂ ಹೆಚ್ಚಿ ರುವ ಬಡ ಹಾಗೂ ಕೆಳಮಧ್ಯಮ ವರ್ಗಗಳ ಸಂಕಷ್ಟಗಳಿಗೆ ತುರ್ತಾಗಿ ಒದಗಿ ಬರಬಹುದಾದದ್ದು 60,000 ಕೋಟಿಗೂ ಕಡಿಮೆ. ಉಳಿದ 16.4 ಲಕ್ಷ ಕೋಟಿ ರೂ. ಕೇವಲ ಕನ್ನಡಿಯ ಗಂಟಷ್ಟೆ. ಪಡೆದುಕೊಳ್ಳುವ ಪವಾಡ ಗೊತ್ತಿರುವವರಿಗೆ ಮಾತ್ರ ದಕ್ಕುವ ಮೊತ್ತವದು.

ಆದರೆ ಕೋವಿಡ್-19 ದಾಳಿಯಾಗುವ ಕೆಲವು ತಿಂಗಳ ಹಿಂದೆ ಆರ್ಥಿಕ ಪುನಶ್ಚೇತನದ ಹೆಸರಿನಲ್ಲಿ ಮೋದಿ ಸರಕಾರವು ನೇರ ತೆರಿಗೆಯ ಮೇಲ್ಮಿತಿಯನ್ನು ಶೇ.35 ರಿಂದ ಶೇ.25ಕ್ಕೆ ಇಳಿಸಿದ್ದು ನಿಮ್ಮ ನೆನಪಿನಲ್ಲಿರಬಹುದು. ಆದರೆ ನೇರ ತೆರಿಗೆ ಇಲಾಖೆಯ ಪ್ರಕಾರವೇ ದೇಶದ ಶೇ. 99.1 ಕಂಪೆನಿಗಳ ವಹಿವಾಟು 400 ಕೋಟಿಗಳಿಗಿಂತ ಕಡಿಮೆ ಮತ್ತು ಅವರು ಶೇ.25ರಷ್ಟು ಮಾತ್ರ ನೇರ ತೆರಿಗೆಯನ್ನು ಕಟ್ಟುತ್ತಿದ್ದರು. ಹೀಗಾಗಿ ನೇರ ತೆರಿಗೆಯ ಮೇಲ್ಮಿತಿ ಶೇ.35ರಿಂದ ಶೇ.25ಕ್ಕೆ ಅಂದರೆ ಶೇ.10ರಷ್ಟು ಇಳಿಕೆಯಾದ ಲಾಭ ಪಡೆದುಕೊಂಡಿದ್ದು ಕೇವಲ ಶೇ.0.9ರಷ್ಟು ಕಂಪೆನಿಗಳು ಮಾತ್ರ. ಅರ್ಥಾತ್ 4,500 ಉದ್ದಿಮೆಪತಿಗಳು ಮಾತ್ರ. ಈ ಕ್ರಮದ ಮೂಲಕ ಯಾವ ಸಂಕಷ್ಟದಲ್ಲೂ ಇರದಿದ್ದ 4,500 ಉದ್ದಿಮೆಪತಿಗಳ ಬಳಿ 1,45,000 ಕೋಟಿ ರೂ. ಉಳಿಯುವಂತೆ ಮಾಡಿದ ಮೋದಿ ಸರಕಾರ ಅತ್ಯಂತ ಸಂಕಷ್ಟದಲ್ಲಿರುವ 110 ಕೋಟಿ ಭಾರತೀಯರಿಗೆ ಒದಗಿಸುತ್ತಿರುವುದು ಕೇವಲ 60,000 ಕೋಟಿ ರೂ.ಗಳು ಮಾತ್ರ. ಇದು ಆಧುನಿಕ ಮೇರಿ ನಿರ್ಮಲಾ ಹಾಗೂ ಆಧುನಿಕ ನೀರೋ ಮೋದಿ ಸರಕಾರದ ನಿಜವಾದ ವರ್ಗ ಸ್ವರೂಪ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News