ಮಣ್ಣಲ್ಲಿ ಹೂಳಲ್ಪಟ್ಟಿದ್ದರೂ ಬದುಕುಳಿದ ನವಜಾತ ಶಿಶು
ಲಕ್ನೋ,ಮೇ 28: ಸಜೀವವಾಗಿ ಮಣ್ಣಲ್ಲಿ ಹೂಳಲ್ಪಟ್ಟಿದ್ದ ನವಜಾತ ಗಂಡು ಶಿಶುವೊಂದು ತನ್ನ ಕ್ಷೀಣ ಅಳುವಿನಿಂದಾಗಿ ಬದುಕುಳಿದಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥ ನಗರ ಜಿಲ್ಲೆಯ ಸೋನೌರಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೆಲವರಿಗೆ ಶಿಶುವಿನ ಕ್ಷೀಣ ಅಳುವಿನ ಧ್ವನಿ ಕೇಳಿತ್ತು. ಕುತೂಹಲದಿಂದ ಧ್ವನಿ ಕೇಳಿಬರುತ್ತಿದ್ದ ದಿಕ್ಕಿನಲ್ಲಿ ಹೆಜ್ಜೆ ಹಾಕಿದ ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ಬಳಿಕ ಪೊದೆಯ ಸಮೀಪ ತಲುಪಿದ್ದರು. ಅಲ್ಲಿ ಮಣ್ಣು ಮತ್ತು ಮರಳಿನ ಗುಡ್ಡೆಯೊಂದು ಅವರ ಕಣ್ಣಿಗೆ ಬಿದ್ದಿದ್ದು,ಅದರಿಂದ ನವಜಾತ ಶಿಶುವಿನ ಪಾದವೊಂದು ಹೊರಚಾಚಿತ್ತು. ಕ್ಷಣವೂ ವಿಳಂಬಿಸದೇ ಮಣ್ಣಿನ ರಾಶಿಯಿಂದ ಶಿಶುವನ್ನು ನಾಜೂಕಾಗಿ ಹೊರತೆಗೆದ ಗ್ರಾಮಸ್ಥರು ಅದನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು.
ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿರುವ ವೈದ್ಯರು,ಅದು ಸ್ವಲ್ಪ ಮಣ್ಣನ್ನು ನುಂಗಿರಬಹುದು ಎಂದಿದ್ದಾರೆ.
ಈ ಸಂಬಂಧ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.