ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ; ಮೂವರು ಪೊಲೀಸ್ ವಶಕ್ಕೆ

Update: 2020-10-17 06:25 GMT

ಫಿರೋಝಾಬಾದ್: ಸ್ಥಳಿಯ ಬಿಜೆಪಿ ನಾಯಕನನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ನಾಯಕ ದಯಶಂಕರ್ ಗುಪ್ತಾ ಮೃತಪಟ್ಟವರು.

ದಯಶಂಕರ್ ಅವರ ಪಕ್ಷದ ಸಹೋದ್ಯೋಗಿ ವೀರೇಶ್ ತೋಮರ್ ಮತ್ತು ತೋಮರ್ ರ ಇಬ್ಬರು ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಕೀಯ ದ್ವೇಷಕ್ಕೆ ದಯಶಂಕರ್ ರನ್ನು ಹತ್ಯೆಗೈಯಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಮಂಡಲ ಉಪಾಧ್ಯಕ್ಷರಾದ ದಯಶಂಕರ್ ಅವರು ರಾತ್ರಿ ತಮ್ಮ ಅಂಗಡಿಯನ್ನು ಬಂದ್ ಮಾಡಿ ಹೊರಡುವ ವೇಳೆ ಅವರ ಮೇಲೆ ದಾಳಿ ಮಾಡಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೋಮರ್ ಇತ್ತಿಚೆಗೆ ಬಿಜೆಪಿ ಸೇರಿದ್ದು, ಇದು ದಯಶಂಕರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದಯಶಂಕರ್ ಅವರ ಕುಟುಂಬಸ್ಥರು ಮತ್ತು ಬೆಂಬಲಿಗರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News