ಪುತ್ರಿಯ ಜೊತೆ ಅಶ್ಲೀಲವಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮೇಲ್ಜಾತಿಯ ಯುವಕನಿಂದ ದಲಿತ ದಂಪತಿಯ ಹತ್ಯೆ
ಚೆನ್ನೈ: ತಮ್ಮ ಪುತ್ರಿಯ ಜೊತೆ ಅಶ್ಲೀಲವಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ ದಲಿತ ದಂಪತಿಯನ್ನು ಮೇಲ್ಜಾತಿಯ ಯುವಕನೊಬ್ಬ ಹತ್ಯೆಗೈದಿರುವ ಘಟನೆ ತಮಿಳುನಾಡಿನ ಇರೋಡ್ ನಲ್ಲಿ ನಡೆದಿದೆ.
ದಂಪತಿಯನ್ನು ಹತ್ಯೆಗೈದ ಸೂರ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ದಂಪತಿಯನ್ನು ರಾಮಸಾಮಿ (55) ಮತ್ತು ಅರುಕ್ಕಣಿ (48) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಸೂರ್ಯ ದಂಪತಿಯ ಪುತ್ರಿಗೆ ಅಶ್ಲೀಲ ಮಾತುಗಳನ್ನು ಹೇಳಿದ್ದ ಎಂದು ವರದಿಯಾಗಿದೆ.
ದಂಪತಿಯ ಪುತ್ರಿ, ಆಕೆಯ ಪತಿ ಮತ್ತು ಪುತ್ರ ನಡೆದುಕೊಂಡು ಹೋಗುತ್ತಿದ್ದಾಗ ಸೂರ್ಯ ಮತ್ತಾತನ ಸ್ನೇಹಿತರು ಪಟಾಕಿಗಳನ್ನು ಸಿಡಿಸುತ್ತಿದ್ದರು. ಇದೇ ಸಂದರ್ಭ ಸೂರ್ಯ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ರಾಮಸಾಮಿ ಮೇಲ್ಜಾತಿಯವರನ್ನು ಪ್ರಶ್ನಿಸಿದ್ದು ಹೊಡೆದಾಟ ನಡೆದಿದೆ. ಇದೇ ಸಂದರ್ಭ ಯುವತಿಯ ಸಂಬಂಧಿಕರು ಸೂರ್ಯನಿಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. “ಇದಾದ ಬಳಿಕ ಸೂರ್ಯ ಮನೆಗೆ ಹೋಗಿ ತನ್ನ ತಂದೆಗೆ ವಿಚಾರ ತಿಳಿಸಿದ್ದ. ತಂದೆ ಆತನಿಗೆ ಅವಮಾನಿಸಿ ಪ್ರತೀಕಾರ ಕೈಗೊಳ್ಳುವಂತೆ ಹೇಳಿದ್ದ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಂತರ ಸೂರ್ಯ ಮತ್ತು ಆತನ ಸ್ನೇಹಿತರು ರಾಮಸಾಮಿ ಮನೆಗೆ ನುಗ್ಗಿ ಹರಿತವಾದ ಆಯುಧಗಳಿಂದ ದಾಳಿ ನಡೆಸಿ ದಂಪತಿಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.