ಸಿಎಂ ಆಗಮನ ಹಿನ್ನೆಲೆ: ಪ್ರತಿಭಟನಾ ನಿರತ ರೈತರ ಮೇಲೆ ಆಶ್ರುವಾಯು ಪ್ರಯೋಗಿಸಿದ ಪೊಲೀಸರು
ಹೊಸದಿಲ್ಲಿ,ಜ.10: ಹರ್ಯಾಣದ ಕರ್ನಾಲ್ ಬಳಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಚದುರಿಸುವ ಸಲುವಾಗಿ ಹರ್ಯಾಣ ಪೊಲೀಸರು ಟಿಯರ್ ಗ್ಯಾಸ್ ಬಳಸಿದ ಘಟನೆಯು ನಡೆದಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ರವರು ಕರ್ನಾಲ್ ಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಕೆಮ್ಲಾ ಗ್ರಾಮಕ್ಕೆ ಆಗಮಿಸಲೆತ್ನಿಸಿದ ರೈತರನ್ನು ತಡೆಯುವ ಸಲುವಾಗಿ ಟಿಯರ್ ಗ್ಯಾಸ್ ಪ್ರಯೋಗಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ವೀಡಿಯೋ ಕೂಡಾ ವೈರಲ್ ಆಗಿದೆ.
ಹರ್ಯಾಣದ ಬಿಜೆಪಿ ಸರಕಾರವು ರೈತರನ್ನು ಹಲವು ಬಾರಿ ತಡೆಯಲು ಯತ್ನಿಸಿತ್ತು. ಶುಕ್ರವಾರದಂದು ಅಲ್ಲಿನ ಸ್ಥಳೀಯ ಬಿಜೆಪಿ ಸದಸ್ಯರಿಗೆ ಹಾಗೂ ರೈತರ ನಡುವೆ ವಾಗ್ವಾದವೂ ನಡೆದಿತ್ತು. ಪ್ರತಿಭಟನಾನಿರತ ರೈತರಿಗೆ ಬಳಿಕ ಅಲ್ಲಿನ ಗ್ರಾಮಕ್ಕೆ ಕಾಲಿಡಲೂ ಸ್ಥಳೀಯರು ಅನುಮತಿಸಿರಲಿಲ್ಲ.
ಈ ಕುರಿತಾದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ, "ಗೌರವಾನ್ವಿತ ಮನೋಹರ್ ಜೀ, ಕೈಮ್ಲಾ ಗ್ರಾಮದಲ್ಲಿ ಕಿಸಾನ್ ಮಹಾಪಂಚಾಯತ್ ನಡೆಸುವ ಸೋಗನ್ನು ನಿಲ್ಲಿಸಿ. ನಮಗೆ ಆಹಾರ ನೀಡುವವರ ಭಾವನೆಗಳ ಜೊತೆಗೆ ಚೆಲ್ಲಾಟವಾಡಬೇಡಿ. ನ್ಯಾಯಾಂಗದೊಂದಿಗಿನ ಈ ಮಧ್ಯವರ್ತಿತನವನ್ನೂ ನಿಲ್ಲಿಸಿ" ಎಂದು ಟ್ವೀಟ್ ಮಾಡಿದ್ದಾರೆ.