ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಉತ್ತರಪ್ರದೇಶ ಪೊಲೀಸ್
ಲಕ್ನೋ: ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ವಿರುದ್ಧ ಉತ್ತರಪ್ರದೇಶ ಪೊಲೀಸರು 5,000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಸಾಮೂಹಿಕ ಅತ್ಯಾಚಾರಕ್ಕೀಡಾಗಿ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಉತ್ತರಪ್ರದೇಶದ ಹತ್ರಸ್ ನ ದಲಿತ ಯುವತಿಯ ಕುರಿತು ವರದಿ ಮಾಡಲು ದಿಲ್ಲಿಯಿಂದ ಹತ್ರಸ್ ಗೆ ತೆರಳುತ್ತಿದ್ದ ಕಪ್ಪನ್ ರನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಬಂಧಿಸಲಾಗಿತ್ತು. ಕಪ್ಪನ್ ಹಾಗೂ ಇತರ ಏಳು ಮಂದಿ ಕೋಮು ಉದ್ವಿಗ್ನತೆಯನ್ನುಸೃಷ್ಟಿಸಲು ಸಂಚು ರೂಪಿಸಿದ ಆರೋಪದ ಮೇಲೆ ಯುಎಪಿಎ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಸಾಮೂಹಿಕ ಅತ್ಯಾಚಾರಕ್ಕೀಡಾದ ಬಳಿಕ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ದಲಿತ ಯುವತಿಯನ್ನು ಉತ್ತರ ಪ್ರದೇಶದ ಪೊಲೀಸರೇ ರಾತೋರಾತ್ರಿ ಅಂತ್ಯಕ್ರಿಯೆ ಮಾಡಿ ವಿವಾದಕ್ಕೀಡಾಗಿದ್ದರು. ಈ ಬಗ್ಗೆ ವರದಿ ಮಾಡಲು ಕಪ್ಪನ್ ಹಾಗೂ ಇತರ ಮೂವರು ಹತ್ರಸ್ಗೆ ತೆರಳುತ್ತಿದ್ದರು. ಈ ಮೂವರನ್ನು ಬಂಧಿಸಿದ್ದ ಪೊಲೀಸರು ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಎಫ್ಐಆರ್ನಲ್ಲಿ (ಮೊದಲ ಮಾಹಿತಿ ವರದಿ) ಪೊಲೀಸರು ಯುಎಪಿಎಯ ಒಂದು ಸೆಕ್ಷನ್ ಬಳಸಿದ್ದು ಈ ಸೆಕ್ಷನ್ ಭಯೋತ್ಪಾದಕ ಕೃತ್ಯಕ್ಕಾಗಿ ಹಣವನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದೆ.
ಕೇರಳದ ಪತ್ರಕರ್ತ ಕಪ್ಪನ್ ಈತ ಮಥುರಾ ಜೈಲಿನಲ್ಲಿದ್ದಾರೆ.
"ನಾವು ಇನ್ನೂ ಚಾರ್ಜ್ಶೀಟ್ನ ನಕಲನ್ನು ಸ್ವೀಕರಿಸಿಲ್ಲ. ಇದು ಸುಮಾರು 5,000 ಪುಟಗಳನ್ನು ಹೊಂದಿದೆ. ಒಮ್ಮೆ ನಾವು ಅಧಿಕೃತವಾಗಿ ಒಂದು ನಕಲು ಪ್ರತಿ ಪಡೆದ ನಂತರ, ನಾವು ಅದನ್ನು ಅಧ್ಯಯನ ಮಾಡುತ್ತೇವೆ ಹಾಗೂ ನಮ್ಮ ಕ್ರಮವನ್ನು ನಿರ್ಧರಿಸುತ್ತೇವೆ" ಎಂದು ವಕೀಲ ಮಧುವಾನ್ ದತ್ ಚತುರ್ವೇದಿ ಮಥುರಾದ ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.