ಪ.ಬಂ. ಚುನಾವಣೋತ್ತರ ಹಿಂಸಾಚಾರದ ಸಿಟ್ ತನಿಖೆ ಕೋರಿ ಮನವಿ: ಕೇಂದ್ರ, ಪ.ಬಂ. ಸರಕಾರ, ಇ.ಸಿ.ಗೆ ಸುಪ್ರೀಂ ನೋಟಿಸ್
ಹೊಸದಿಲ್ಲಿ, ಜೂ. 30: ಪಶ್ಚಿಮಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಕಾರಣಗಳ ಕುರಿತು ಸಿಟ್ ತನಿಖೆಗೆ ಆಗ್ರಹಿಸಿದ ಮನವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರ, ಪಶ್ಚಿಮಬಂಗಾಳ ಸರಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸು ಜಾರಿ ಮಾಡಿದೆ.
ಪಶ್ಚಿಮಬಂಗಾಳ ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರು ಹಾಗೂ ಅವರು ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೋರಿ ಕೂಡ ಸಲ್ಲಿಸಲಾದ ಮನವಿಯ ಕುರಿತು ನ್ಯಾಯಮೂರ್ತಿ ವಿನೀತ್ ಸರನ್ ನೇತೃತ್ವದ ನ್ಯಾಯಪೀಠ ಕೇಂದ್ರ ಸರಕಾರ, ಪಶ್ಚಿಮಬಂಗಾಳ ಹಾಗೂ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೋರಿತು.
2021 ಮೇ 2ರಂದು ಪಶ್ಚಿಮಬಂಗಾಳದಲ್ಲಿ ಸಂಭವಿಸಿದ ಚುನಾವಣೋತ್ತರ ಹಿಂಸಾಚಾರದ ಕಾರಣಗಳ ಕುರಿತು ಸುಪ್ರೀಂ ಕೋರ್ಟ್ನ ನಿಯಂತ್ರಣ ಹಾಗೂ ನಿರ್ದೇಶನದಲ್ಲಿ ತನಿಖೆ ನಡೆಸಲು ಸಿಟ್ ರೂಪಿಸಲು ನಿರ್ದೇಶಿಸುವಂತೆ, ಈ ಹಿಂಸಾಚಾರಕ್ಕೆ ಕಾರಣವಾದ ವ್ಯಕ್ತಿಗಳನ್ನು ಪತ್ತೆ ಹಚ್ಚುವಂತೆ ಹಾಗೂ ಅಪರಾಧಿಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’, ನ್ಯಾಯವಾದಿ ರಂಜನ್ ಅಗ್ನಿಹೋತ್ರಿ ಹಾಗೂ ಜಿತೇಂದ್ರ ಸಿಂಗ್ ಈ ಮನವಿ ಸಲ್ಲಿಸಿದ್ದರು.