ಕ.ಸಾ.ಪ. ಚುನಾವಣೆ-ರಾಜಕೀಯ ಪಕ್ಷಗಳ ನೇರ ಭಾಗವಹಿಸುವಿಕೆಯನ್ನು ವಿರೋಧಿಸೋಣ

Update: 2021-11-18 18:18 GMT

ಮಾನ್ಯರೇ,

ಇದೇ ನವೆಂಬರ್ 21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಬಹಿರಂಗ ಚುನಾವಣೆ ನಡೆಯಲಿದೆ. ಈ ಚುನಾವಣೆಗಳಲ್ಲಿ ಕಂಡುಬರುತ್ತಿರುವ ಕೆಲವು ಹೊಸ ಬೆಳವಣಿಗೆಗಳನ್ನು ಕುರಿತು ಕನ್ನಡಿಗರಾದ ನಾವು, ಸಾಹಿತ್ಯ ವಲಯದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆ. ನೂರು ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಈ ಸಂಸ್ಥೆ ಕನ್ನಡ ಸಾಹಿತ್ಯದ ಪರಿಚಾರಕ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಾ ಬಂದಿದೆ. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಕನ್ನಡ ಜನತೆ ಎದುರಿಸುವ ಭಾಷಿಕ, ಪ್ರಾದೇಶಿಕ ಮತ್ತು ಇತರ ಸಾಂಸ್ಕೃತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳೂ ಸಮಾನ ಅವಕಾಶದೊಂದಿಗೆ ಸಮಸ್ತ ಜನಸಮುದಾಯಗಳನ್ನೊಳಗೊಂಡಂತೆ ಪ್ರಗತಿ ಸಾಧಿಸುತ್ತಾ ಬಂದಿದೆ. ಒಂದು ಸಮಾಜಮುಖಿ ಸಂವೇದನಾಶೀಲ ಕನ್ನಡ ಸಾಹಿತ್ಯ ಪರಂಪರೆಯನ್ನು ಪೋಷಿಸುವ ಸಲುವಾಗಿ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಾ ಬಂದಿದೆ.

ದುರದೃಷ್ಟವಶಾತ್ ಇತ್ತೀಚಿನ ಕೆಲವು ವರ್ಷಗಳಲ್ಲಿ ಕ.ಸಾ.ಪ. ಚುನಾವಣೆಗಳಲ್ಲಿ ಜಾತಿ ಪ್ರಭಾವ, ಭ್ರಷ್ಟ ಹಣ ಹಂಚುವಿಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಆಘಾತಕಾರಿ ಸಮಸ್ಯೆಯಾಗಿ ಎದುರಾಗಿತ್ತು. ಇದರ ಜೊತೆಗೆ ಈ ವರ್ಷದ ಕ.ಸಾ.ಪ. ಚುನಾವಣೆಯಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ನೇರ ಪ್ರವೇಶ ದಿಗ್ಭ್ರಮೆ ಹುಟ್ಟಿಸಿದೆ ಅಷ್ಟೇ ಅಲ್ಲ, ಒಂದು ದುಷ್ಟ ಬೆಳವಣಿಗೆಯಾಗಿದೆ. ಇದುವರೆಗೂ ನಡೆದ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷವು ಈ ರೀತಿಯಾಗಿ ನೇರ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ಭಾಜಪವು ಸಾಂಸ್ಕೃತಿಕ ಕ್ಷೇತ್ರಕ್ಕೂ ತನ್ನ ಹಸ್ತಕ್ಷೇಪವನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿ ಎಲ್ಲವನ್ನೂ ಹಾಳುಗೆಡಹಲು ಹೊರಟಿದೆ. ಮಹೇಶ್ ಜೋಶಿಯವರು ಒಬ್ಬ ಸಾಂಸ್ಕೃತಿಕ ಮನಸ್ಸಿನ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಎಲ್ಲರಂತೆ ಭಾಗವಹಿಸಿದ್ದರೆ ನಾವು ಯಾರೂ ವಿರೋಧಿಸುತ್ತಿರಲಿಲ್ಲ. ಈ ಚುನಾವಣೆಯ ಪ್ರಾರಂಭದಲ್ಲಿ ಅವರು ಹಾಗೆಯೇ ನಡೆದುಕೊಂಡಿದ್ದರಿಂದ ನಾವು ಯಾರೂ ಚಕಾರವೆತ್ತಿರಲಿಲ್ಲ. ಆದರೆ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾದ ಕ.ಸಾ.ಪ.ಕ್ಕೆ ಆಳುವ ಪಕ್ಷದ ಬೆಂಬಲವನ್ನು ನೇರವಾಗಿ ಘೋಷಿಸಿಕೊಂಡು ಚುನಾವಣೆಗೆ ಹೊರಟಿರುವುದು ಖಂಡನೀಯ.

ಕ.ಸಾ.ಪ.ದ ಮೂಲ ಆಶಯಕ್ಕೆ ವಿರುದ್ಧವಾದ ನಡೆ ಇದಾಗಿರುವುದರಿಂದ ಅವರು ಅಧ್ಯಕ್ಷ ಪದವಿಗೆ ಸ್ಪರ್ಧಿಸುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಪಕ್ಷವೊಂದರ ಈ ಪರಿಯ ಬೆಂಬಲವನ್ನು ಸಾಂಸ್ಕೃತಿಕ ಮನಸ್ಸಿನ ವ್ಯಕ್ತಿಯಾಗಿ ಅವರು ನಿರಾಕರಿಸಬೇಕಿತ್ತು. ಇದುವರೆಗೆ ತಾವು ಮಾಡಿದ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳೇ ತಮ್ಮ ಚುನಾವಣೆಯ ನೈತಿಕ ಬಲಗಳಾಗಿ ಘೋಷಿಸಿಕೊಳ್ಳಬೇಕಿತ್ತು. ಅದು ಬಿಟ್ಟು ರಾಜಕೀಯ ಪುಢಾರಿಯಂತೆ ಈ ಚುನಾವಣೆಯನ್ನು ಕಲುಷಿತಗೊಳಿಸುತ್ತಿರುವುದು ಖಂಡನೀಯ. ಆಡಳಿತಾರೂಢ ಬಿಜೆಪಿ ಮತ್ತು ಆರೆಸ್ಸೆಸ್ ಮತ್ತದರ ಅಂಗ ಸಂಸ್ಥೆಗಳ ಕಾರ್ಯಕರ್ತರಿಗೆ ತಮ್ಮನ್ನು ಆಯ್ಕೆ ಮಾಡುವಂತೆ ವಿನಂತಿಸುತ್ತಿರುವುದು ಖಂಡನೀಯ. ಇದು ಕ.ಸಾ.ಪ.ದ ಇತಿಹಾಸದಲ್ಲೇ ಮೊದಲ ಬಾರಿ ಹೀಗಾಗುತ್ತಿದ್ದು, ರಾಜಕೀಯ ಪಕ್ಷಗಳ ಅಥವಾ ಗುಂಪುಗಳ ನೇರ ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ಕ.ಸಾ.ಪ.ದಲ್ಲಿ ಅವಕಾಶ ನೀಡುವುದು ತರವಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಕ ಮನಸ್ಸುಗಳು ಮಹೇಶ್ ಜೋಷಿ ಅವರು ಕೋಮುವಾದಿ ಪಕ್ಷ ಸಂಘಟನೆಗಳ ನೇರ ಬೆಂಬಲ ಪಡೆಯಲು ಮುಂದಾಗಿರುವುದನ್ನು ಖಂಡಿಸುವುದೇ ಅಲ್ಲದೆ, ಅವರಿಗೆ ಚುನಾವಣೆಯಲ್ಲಿ ಮತ ನೀಡದಿರುವಂತೆ ಎಲ್ಲ ಸಾಹಿತ್ಯಕ ಮನಸ್ಸುಗಳಲ್ಲಿ ವಿನಂತಿಸಿಕೊಳ್ಳುತ್ತೇವೆ. ಈ ರೀತಿಯ ಧೋರಣೆಯನ್ನು ಅನುಸರಿಸುವ ಯಾವುದೇ ಇತರ ಅಭ್ಯರ್ಥಿಯನ್ನೂ ತಿರಸ್ಕರಿಸುವಂತೆ ಮತದಾರರಲ್ಲಿ ವಿನಂತಿಸುತ್ತೇವೆ.

-ಪ್ರೊ. ಎಸ್.ಜಿ. ಸಿದ್ದರಾಮಯ್ಯ ಡಾ.ವಿಜಯಾ, ಡಾ.ವಸುಂಧರಾ ಭೂಪತಿ, ಡಾ.ಕೆ.ಷರೀಫಾ, ನಾ.ದಿವಾಕರ, ಡಾ.ಬಂಜಗೆರೆ ಜಯಪ್ರಕಾಶ್, ಅಚ್ಯುತ, ವಿಮಲಾ.ಕೆ.ಎಸ್, ನೀಲಾ.ಕೆ., ಎಲ್. ಜಗನ್ನಾಥ್, ಟಿ.ಸುರೇಂದ್ರ ರಾವ್, ಎಸ್.ದೇವೇಂದ್ರ ಗೌಡ, ಪಿ.ಆರ್.ವೆಂಕಟೇಶ್ ಬಳ್ಳಾರಿ, ವೀರಹನುಮಾನ್ ರಾಯಚೂರು, ಡಾ.ವಿ.ಎನ್.ಲಕ್ಷ್ಮೀನಾರಾಯಣ್, ಡಾ.ಲೀಲಾ ಸಂಪಿಗೆ, ಬಿ.ಶ್ರೀಪಾದ ಭಟ್, ಎನ್.ಕೆ.ವಸಂತ ರಾಜ್, ಬಿ.ಐ.ಇಳಿಗೇರ್, ಜೆ.ಸಿ.ಶಶಿಧರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News