ಸಂಸದರು, ಹಂತಕರು ಮತ್ತು ‘ಫೈನಲ್ ಸೊಲ್ಯೂಷನ್’

Update: 2021-12-28 18:36 GMT

ಸಂಸದ ಸೂರ್ಯರ ಈ ಕರೆ ಹರಿದ್ವಾರದಲ್ಲಿ ಯಾವ ಹಿಂದೂಯೇತರರು ಹಿಂದುವಾಗದೆ ಉಳಿಗಾಲವಿಲ್ಲ ಎನ್ನುವ ವಾತಾವರಣವನ್ನು ನಿರ್ಮಿಸಬೇಕು ಎಂದು ಕರೆ ನೀಡಿದ ಸಾಧುಗಳ ಕರೆಯ ಕಾರ್ಯಯೋಜನೆಯೇ ಆಗಿದೆ. ಬಿಜೆಪಿ ರಾಜ್ಯಗಳು ತರಾತುರಿಯಲ್ಲಿ ಜಾರಿಗೆ ತರುತ್ತಿರುವ ಮತಾಂತರ ನಿಷೇಧ ಕಾಯ್ದೆಯ ನಿಜವಾದ ವ್ಯಾಖ್ಯಾನವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ತೇಜಸ್ವಿ ಹೇಳಿದ ‘ಫೈನಲ್ ಸೊಲ್ಯೂಷನ್’ ನಾಝಿಗಳ ನರಹಂತಕ ಯೋಜನೆಯ ಭಾರತೀಯ ರೂಪವಾಗಲಿದೆ.


ಸಂಸದ ತೇಜಸ್ವಿ ಸೂರ್ಯ ಮೊನ್ನೆ ಉಡುಪಿ ಮಠದಲ್ಲಿ ಮಾಡಿದ ಒಂದೂವರೆ ಗಂಟೆಯ ಭಾಷಣದ ಬಗ್ಗೆ ಒಂದು ಪ್ಯಾರಾದ ತಾತ್ಕಾಲಿಕ ಕ್ಷಮೆಯನ್ನು ಕೋರಿದ್ದಾರೆ. ಆದರೆ ಆ ಕ್ಷಮಾಪಣೆಯ ಮೂಲ ಪಶ್ಚಾತ್ತಾಪವಲ್ಲ. ಬದಲಿಗೆ ಇತರ ಲೆಕ್ಕಾಚಾರಗಳು. ವಿಶೇಷವಾಗಿ ಕ್ರಿಶ್ಚಿಯನ್ನರು ಹೆಚ್ಚಿರುವ ಗೋವಾದಲ್ಲಿ ಚುನಾವಣೆ ಹತ್ತಿರವಿರುವುದು. ಸಾವರ್ಕರ್ ಕಾಲದಿಂದಲೂ ಇವರ ಸಾರಿಗಳಿಗೆ ಇರುವ ಅರ್ಥ ಇಷ್ಟೇ..

ತಾನು ಉಡುಪಿ ಮಠದಲ್ಲಿ ಮಾಡಿದ ಭಾಷಣದಲ್ಲಿನ ‘ಕೆಲವು ಹೇಳಿಕೆಗಳು’, ‘ಅನಗತ್ಯ ವಿವಾದ’ಗಳಿಗೆ ಎಡೆಮಾಡಿಕೊಟ್ಟಿರುವುದರಿಂದ ಅವುಗಳನ್ನು ಬೇಷರತ್ ಆಗಿ ಹಿಂದೆಗೆದುಕೊಳ್ಳುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಅಂದರೆ ಅವರು ಇಡೀ ಭಾಷಣವನ್ನೇನು ಹಿಂದೆಗೆದುಕೊಂಡಿಲ್ಲ. ಬದಲಿಗೆ ಕೆಲವು ಹೇಳಿಕೆಗಳನ್ನು ಹಿಂದೆಗೆದುಕೊಂಡಿದ್ದಾರೆ(!?). ಆದರೆ ಅವು ಯಾವ ಹೇಳಿಕೆಗಳು? ಅವು ವಿವಾದವಾಗಿದ್ದು ಅಗತ್ಯವಾಗಿಯೋ? ಅನಗತ್ಯವಾಗಿಯೋ? ಇವುಗಳಿಗೆ ಆ ಕ್ಷಮಾಪಣೆಯಲ್ಲಿ ಯಾವುದೇ ಉತ್ತರವಿಲ್ಲ. ಏಕೆಂದರೆ ಸಂಸದ ಸೂರ್ಯ ಅವರ ಇಡೀ ಭಾಷಣವೇ ಒಂದು ಹೇಳಿಕೆ ಹಾಗೂ ಅದು ಒಂದೇ ಒಂದು ಹೇಳಿಕೆ: ‘‘ಇಂಡಿಯಾ ಅಂದರೆ ಭಾರತ. ಭಾರತ ಅಂದರೆ ಹಿಂದೂದೇಶ. ಆದ್ದರಿಂದ ಈ ದೇಶದಲ್ಲಿರುವ ಹಿಂದೂಯೇತರರು ಈ ದೇಶದಲ್ಲಿ ಬದುಕಬೇಕೆಂದರೆ ಹಿಂದೂಗಳಾಗಿ ಬದುಕಬೇಕು ಅಥವಾ ದೇಶಬಿಟ್ಟು ಹೋಗಬೇಕು. ಹಿಂದೂಯೇತರ ಚಿಂತನೆಗಳನ್ನು ದೇಶದ್ರೋಹಿ ಎಂದು ಪರಿಗಣಿಸಿ ಬಹಿಷ್ಕರಿಸಬೇಕು.’’ ಬಿಡಿ ಹೇಳಿಕೆಯಲ್ಲ- ಸಾವರ್ಕರ್ ಕೊಟ್ಟ ಪೂರ್ಣ ಚಿತ್ರ 

ಇದನ್ನೇ ಅವರು ವಿವರವಾಗಿ ಹಲವು ರೀತಿಗಳಲ್ಲಿ ಒಂದೂವರೆ ಗಂಟೆ ಮಾತನಾಡಿದ್ದಾರೆ. ಸೂರ್ಯ ಅವರ ಇಡೀ ಭಾಷಣ ಆರೆಸ್ಸೆಸ್- ಸಾವರ್ಕರ್ ಕನಸಿದ ಹಿಂದೂ ರಾಷ್ಟ್ರದ ಫೋಟೋ ಇಮೇಜ್. ಫೋಟೋ ಇಮೇಜ್‌ಗಳನ್ನು ಎಡಿಟ್ ಮಾಡಲು ಬರುವುದಿಲ್ಲ. ಅದನ್ನು ಇಡಿಯಾಗಿ ಮಾತ್ರ ಹಿಂಪಡೆಯಲು ಸಾಧ್ಯ. ಸಂಸದ ಸೂರ್ಯ ಆ ಫೋಟೋ ಇಮೇಜನ್ನೇನೂ ಹಿಂದೆಗೆದುಕೊಂಡಿಲ್ಲ. ಹೀಗಾಗಿ ಸೂರ್ಯ ಮಾಡಿದ ಈ ಭಾಷಣ ಹರಿದ್ವಾರದಲ್ಲಿ ‘ಹಿಂದೂ ರಕ್ಷಣಾ ಸಮಾವೇಶ’ದ ಹೆಸರಿನಲ್ಲಿ ಸಾಧು ಸಂತರ ಮುಖವಾಡದಲ್ಲಿದ್ದ ಸಂಘಿ ಹಂತಕರು ‘‘ಮುಸ್ಲಿಮರ ಕಗ್ಗೊಲೆ ಮಾಡಬೇಕು’’ ಎಂದು ಕೊಟ್ಟ ಕರೆಯ ಮುಂದುವರಿಕೆ.

ಅದು ಕಾಶಿಯಲ್ಲಿ ಪ್ರಧಾನಿ ಹಿಂದೂ ಸಂತನ ದಿರಿಸಿನಲ್ಲಿ ‘‘ಔರಂಗಜೇಬ್ ಹುಟ್ಟಿದಾಗಲೆಲ್ಲಾ ಒಬ್ಬ ಶಿವಾಜಿ ಹುಟ್ಟುತ್ತಾನೆ’’ ಎಂದು ಮಾಡಿದ ಭಾಷಣದ ಮುಂದುವರಿಕೆ. ಆರೆಸ್ಸೆಸ್‌ನ ಸರಸಂಘಚಾಲಕ ಭಾಗವತ್ ‘‘ಪ್ರತಿಯೊಬ್ಬ ಹಿಂದುವೂ ಒಂದಷ್ಟು ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಘರ್‌ವಾಪ್ಸಿ ಮಾಡಿಸಿ ಹಿಂದೂ ಧರ್ಮಕ್ಕೆ ಕರೆತರಬೇಕು’’ ಎಂದು ಕೊಟ್ಟ ಕರೆಯ ಮುಂದುವರಿಕೆ. ಕೆಲವು ಆರೆಸ್ಸೆಸ್ ಪಾತ್ರಧಾರಿಗಳು ಅದನ್ನು ಹರಿದ್ವಾರದ ಸಾಧು ಸಂತರ ರೀತಿ ಹಸಿಹಸಿಯಾಗಿ ಹಿಂಸಾತ್ತ್ಮಕ ಭಾಷೆಯಲ್ಲಿ ಮಾತನಾಡುತ್ತಾರೆ. ಪ್ರಧಾನಿ ಮೋದಿ ತನ್ನ ವರ್ತನೆ, ಮೌನ, ಶಾಸನಗಳ ಮೂಲಕ ಅದನ್ನೇ ಮಾತನಾಡುತ್ತಾರೆ. ಸೂರ್ಯರಂತಹವರು ಅದೇ ಅನಾಗರಿಕ ಅಜೆಂಡಾವನ್ನೇ ಸಂಸ್ಕೃತ ಮತ್ತು ಇಂಗ್ಲಿಷ್‌ಗಳನ್ನು ಬೆರೆಸಿ ಮಾತನಾಡುತ್ತಾರೆ. ಅಷ್ಟೇ. ಆದ್ದರಿಂದ ಇವು ಬಾಯಿತಪ್ಪಿ ಆಡಿದ ಮಾತುಗಳಲ್ಲ. ಇದು ಬರಲಿರುವ ದಿನಗಳಲ್ಲಿ ಮೋದಿ-ಆರೆಸ್ಸೆಸ್-ಫ್ಯಾಶಿಸ್ಟ್ ಕೂಟ ಭಾರತದ ಮೇಲೆ ಮಾಡಲಿರುವ ನರಹಂತಕ ದಾಳಿಗಳ ನೀಲನಕ್ಷೆ .

ಸಾಧು ಸಂತರೋ? ಪ್ರಭುತ್ವ ಪ್ರಾಯೋಜಿತ ಹಂತಕರೋ?

ಉದಾಹರಣೆಗೆ ಹರಿದ್ವಾರದಲ್ಲಿ ಸಾಧುವೇಷದ ಹಂತಕರು ಮಾಡಿದ ಭಾಷಣಗಳನ್ನೇ ಗಮನಿಸಿ. ‘‘ಇಸ್ಲಾಮೀಯ ಭಾರತದಲ್ಲಿ ಸನಾತನ ಹಿಂದುಗಳ ಭವಿಷ್ಯ: ಸಮಸ್ಯೆ ಮತ್ತು ಸವಾಲುಗಳು’’ ಎಂಬ ಆ ಸಮಾವೇಶದ ವಿಷಯವೇ ಪ್ರಚೋದನಾತ್ಮಕವಾಗಿತ್ತು. ಆದರೂ ಉತ್ತರಾಖಂಡ ಬಿಜೆಪಿ ಸರಕಾರ ಅದಕ್ಕೆ ಕೋವಿಡ್ ನಡುವೆಯೂ ಡಿಸೆಂಬರ್ 17-19ರ ತನಕ ಮೂರುದಿನಗಳ ಸಮಾವೇಶ ಮಾಡಲು ಎಲ್ಲಾ ಸಹಕಾರವನ್ನು ನೀಡಿತು. ಸಭೆಯ ಆಯೋಜಕರಲ್ಲಿ ಒಬ್ಬನಾಗಿರುವ ಯತಿ ನರಸಿಂಗಾನಂದ 2020ರ ದಿಲ್ಲಿ ಹತ್ಯಾಕಾಂಡಕ್ಕೆ ಸಕಲ ತರಬೇತಿ, ಸಿದ್ಧತೆಗಳನ್ನು ಮಾಡಿಕೊಟ್ಟಿದ್ದ ಪ್ರಮುಖ ಆರೋಪಿ. ಈತನ ಎಲ್ಲಾ ನರಹಂತಕ ಯೋಜನೆಗಳಿಗೂ ಬೆಂಬಲ ಕೊಟ್ಟವರಲ್ಲಿ ಹಾಗೂ ದಿಲ್ಲಿ ಗಲಭೆಗಳ ಪ್ರಾಯೋಜಕರಾಗಿದ್ದವರಲ್ಲಿ ಹಲವರು ಈಗ ಬಿಜೆಪಿ ಸಂಸದರಾಗಿದ್ದಾರೆ. ಮೋದಿ ಕ್ಯಾಬಿನೆಟ್‌ನಲ್ಲಿ ಮಂತ್ರಿಗಳಾಗಿದ್ದಾರೆ. ಹೀಗಾಗಿ ಇವರು ಹಿಂದುತ್ವ ಪರಿವಾರದ ಅಂಚಿನ ಜನಗಳಲ್ಲ. ಅಂಚು - ಕೇಂದ್ರ ಎರಡೂ ಒಟ್ಟಿಗೆ ಸೇರಿ ಯೋಜಿಸಿ ಹೆಣೆಯುತ್ತಿರುವ ಪ್ರಭುತ್ವ ಬೆಂಬಲಿತ ದಾಳಿಗಳಿವು. ಆ ಸಭೆಯ ಪ್ರಮುಖ ಭಾಷಣಕಾರರಲ್ಲಿ ಒಬ್ಬನಾಗಿದ್ದ ಸ್ವಾಮಿ ಪ್ರಬೋಧಾನಂದ ಗಿರಿ ಎಂಬವರು ‘‘ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವಂತೆ ಭಾರತದ ರಾಜಕಾರಣಿಗಳು, ಪೊಲೀಸರು, ಮಿಲ್ಟ್ರಿ, ಸಾಧು ಸಂತರು ಎಲ್ಲರೂ ಒಂದಾಗಿ ಮುಸ್ಲಿಮರ ಮೇಲೆ ದಾಳಿ ಮಾಡಬೇಕು’’ ಎಂದು ಕರೆಕೊಟ್ಟರು. ಇವರ ‘ಪಾದಾರವಿಂದ’ಗಳಿಗೆ ಉತ್ತರಾಖಂಡದ ಮುಖ್ಯಮಂತ್ರಿ ತಲೆಬಾಗುತ್ತಿರುವುದು ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಜೊತೆ ಸ್ನೇಹಪೂರ್ವಕವಾಗಿ ತೆಗೆಸಿಕೊಂಡಿರುವ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅದೇ ಸಮಾವೇಶದಲ್ಲಿ ಪೂಜಾ ಶಕುನ್ ಪಾಂಡೆ ಅಲಿಯಾಸ್ ಸಾಧ್ವಿ ಅನ್ನಪೂರ್ಣ ಎಂಬ ಮಹಿಳೆ ‘‘ಒಂದು ನೂರು ಜನ ಹಿಂದೂಗಳು ಕನಿಷ್ಠ 20 ಲಕ್ಷ ಮುಸ್ಲಿಮರನ್ನು ಕೊಲ್ಲಬೇಕು’’ ಎಂದು ಕರೆ ಕೊಡುತ್ತಾಳೆ.

ಈಕೆಯೇ ಕಳೆದ ವರ್ಷ ಗಾಂಧಿ ಹುತಾತ್ಮರಾದ ದಿನ ಗಾಂಧಿ ಫೋಟೊಗೆ ಗುಂಡಿಟ್ಟು ಗೋಡ್ಸೆಯೇ ಈ ದೇಶದ ನಿಜವಾದ ಪಿತಾಮಹ ಎಂದು ಘೋಷಿಸಿದ್ದಳು. ಈಕೆ ಬಿಜೆಪಿಯ ನಾಯಕಿ ಉಮಾಭಾರತಿ ಮತ್ತು ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಚವ್ಹಾಣ್‌ರ ಆಪ್ತ ವರ್ಗಕ್ಕೆ ಸೇರಿದವಳು. ಮತ್ತೊಬ್ಬ ಸಾಧು ಸಾಗರ್ ಸಿಂಧುರಾಜ್ ‘‘ಈ ಸಭೆಯಾದ ಮೇಲೆ ನಮ್ಮ ಪ್ರದೇಶಗಳಿಗೆ ತೆರಳಿ ನಾವು ಯಾವ ರೀತಿ ಕೆಲಸ ಮಾಡಬೇಕೆಂದರೆ ಈ ದೇಶದಲ್ಲಿ ಉಳಿಯಬೇಕೆಂದರೆ ಹಿಂದೂಗಳಾಗದೆ ಗತ್ಯಂತರವಿಲ್ಲ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು’’ ಎಂದು ಕರೆಕೊಟ್ಟ. ಅಷ್ಟು ಮಾತ್ರವಲ್ಲ, ‘‘ನಿಮ್ಮ ಬಳಿ 5,000 ರೂ. ಮೌಲ್ಯದ ಮೊಬೈಲ್ ಮಾತ್ರವಿದ್ದರೂ ಪರವಾಗಿಲ್ಲ. ಮುಸ್ಲಿಮರ ತಲೆ ತೆಗೆಯಲು ಒಂದು ಲಕ್ಷ ಮೌಲ್ಯದ ಉತ್ತಮ ಗುಣಮಟ್ಟದ ಖಡ್ಗವನ್ನು ಇಟ್ಟುಕೊಳ್ಳಿ’’ ಎಂದು ಕರೆ ನೀಡಿದ. ಈತ ಈಗ ಬರಲಿರುವ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್‌ಗೆ ಬೇಡಿಕೆ ಮುಂದಿಟ್ಟಿದ್ದಾನೆ. ಸಹಜವಾಗಿ ಒಂದು ಭೀಕರ ಹತ್ಯಾಕಾಂಡವನ್ನೇ ನಡೆಸಲು ಕರೆ ನೀಡಿದರೂ ಇವರ ಯಾರ ಮೇಲೂ ಕೆಲವು ದಿನಗಳ ಹಿಂದಿನವರೆಗೆ ಯಾವ ಕೇಸುಗಳೂ ಆಗಿರಲಿಲ್ಲ. ಈವರೆಗೆ ಯಾರನ್ನು ಬಂಧಿಸಿಯೂ ಇಲ್ಲ. ಶಿಷ್ಟ ಭಾಷೆಯಲ್ಲಿ ದುಷ್ಟ ಯೋಜನೆ ಇದರ ಮುಂದುವರಿಕೆಯೇ ಸಂಸದ ಸೂರ್ಯರ ಭಾಷಣ. ಹರಿದ್ವಾರದಲ್ಲಿ ಸಾಧು ವೇಷದ ಹಂತಕರು ಮಾಡಿದ ಸಮಾವೇಶದ ವಿಷಯ ‘‘ಇಸ್ಲಾಮೀಯ ಭಾರತದಲ್ಲಿ ಸನಾತನ ಹಿಂದೂಗಳ ಭವಿಷ್ಯ’’ ಎಂಬುದಾಗಿದ್ದರೆ, ಉಡುಪಿ ಮಠದಲ್ಲಿ ಈ ಸಂಸದ ಮಾಡಿದ ಭಾಷಣದ ವಸ್ತು ‘‘ಹಿಂದೂ ಅಸ್ಮಿತೆಯ ಪುನರುತ್ಥಾನ -ಸವಾಲುಗಳು’’ ಎಂಬುದಾಗಿತ್ತು.

ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದಿರುವ ಈ ಸಂಸದ ಹಿಂದೂ ಅಸ್ಮಿತೆಯ ಪುನರುತ್ಥಾನಕ್ಕೆ ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ ಮಾತ್ರವಲ್ಲ, ಸಮಾಜವಾದ ಹಾಗೂ ಸೆಕ್ಯುಲರಿಸಂಗಳು ದೊಡ್ಡ ಶತ್ರುಗಳು ಎಂದು ಘೋಷಿಸಿದರು. ಮಾತ್ರವಲ್ಲದೆ ಅದಕ್ಕೆ ಇರುವ ಏಕೈಕ ಹಾಗೂ ಫೈನಲ್ ಸೊಲ್ಯೂಷನ್ ಎಂದರೆ ಭಾರತವನ್ನು ಸಂಪೂರ್ಣವಾಗಿ ಹಿಂದೂಕರಿಸುವುದು ಎಂದು ಕರೆನೀಡಿದರು. ಮಾತ್ರವಲ್ಲದೆ ಪ್ರತಿ ಹಿಂದೂ ದೇವಸ್ಥಾನ-ಮಠಗಳು ಪ್ರತಿ ವರ್ಷ ಇಂತಿಷ್ಟು ಸಂಖ್ಯೆಯ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರನ್ನು ಹಿಂದೂಗಳನ್ನಾಗಿ ಮಾಡುವ ಟಾರ್ಗೆಟ್ ಇಟ್ಟುಕೊಳ್ಳಬೇಕೆಂದು ಕರೆ ನೀಡಿದರು.. ಸಂಸದ ಸೂರ್ಯರ ಈ ಕರೆ ಹರಿದ್ವಾರದಲ್ಲಿ ಯಾವ ಹಿಂದೂಯೇತರರು ಹಿಂದೂವಾಗದೆ ಉಳಿಗಾಲವಿಲ್ಲ ಎನ್ನುವ ವಾತಾವರಣವನ್ನು ನಿರ್ಮಿಸಬೇಕು ಎಂದು ಕರೆ ನೀಡಿದ ಸಾಧುಗಳ ಕರೆಯ ಕಾರ್ಯಯೋಜನೆಯೇ ಆಗಿದೆ. ಬಿಜೆಪಿ ರಾಜ್ಯಗಳು ತರಾತುರಿಯಲ್ಲಿ ಜಾರಿಗೆ ತರುತ್ತಿರುವ ಮತಾಂತರ ನಿಷೇಧ ಕಾಯ್ದೆಯ ನಿಜವಾದ ವ್ಯಾಖ್ಯಾನವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ತೇಜಸ್ವಿ ಹೇಳಿದ ‘ಫೈನಲ್ ಸೊಲ್ಯೂಷನ್’ ನಾಝಿಗಳ ನರಹಂತಕ ಯೋಜನೆಯ ಭಾರತೀಯ ರೂಪವಾಗಲಿದೆ.

ಏನಿದು ‘ಫೈನಲ್ ಸೊಲ್ಯೂಷನ್’? 

ಈ ಫೈನಲ್ ಸೊಲ್ಯೂಷನ್ ಎಂಬುದು ಜರ್ಮನಿಯ ನಾಝಿಗಳ ಪರಿಭಾಷೆ. ಜರ್ಮನಿಯ ಎಲ್ಲಾ ಸಮಸ್ಯೆಗಳಿಗೆ ಕಾರಣ ಕಮ್ಯುನಿಸ್ಟರು, ವಿರೋಧಪಕ್ಷಗಳು ಮತ್ತು ಯೆಹೂದಿ ಹಾಗೂ ಇನ್ನಿತರ ಆಯಾ ಜರ್ಮನರಲ್ಲದ ಜನಾಂಗಗಳು ಎಂಬುದು ನಾಝಿಗಳ ಹಂತಕ ಧೋರಣೆಯಾಗಿತ್ತು. ಹೀಗಾಗಿ ಆರ್ಯ ಜರ್ಮನರ ಪುನರುತ್ಥಾನವೊಂದೇ ಜರ್ಮನಿಯ ಸಮಸ್ಯೆಗಳಿಗೆ ಏಕೈಕ ಪರಿಹಾರ ಎಂಬುದು ಹಿಟ್ಲರ್ -ನಾಝಿಗಳ ಹಂಚಿಕೆಯಾಗಿತ್ತು. ಜರ್ಮನಿಯ ಜನಾಂಗೀಯ ಶ್ರೇಷ್ಠತೆಯನ್ನು ‘ಪುನರುತ್ಥಾನ’ ಮಾಡಲು ಆರ್ಯ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಆರ್ಯ ರಕ್ತದೊಂದಿಗೆ ಬೆರೆತುಕೊಂಡಿರುವ ಆರ್ಯೇತರ ಯೆಹೂದಿ, ಜಿಪ್ಸಿ ಅಲೆಮಾರಿ ಇನ್ನಿತ್ಯಾದಿ ಜನಾಂಗಗಳನ್ನು ‘ರಾಷ್ಟ್ರವಾಹಿನಿ’ಯಿಂದ ಹೊರದಬ್ಬುವುದು ಮತ್ತು ಆರ್ಯ ಶ್ರೇಷ್ಠತೆಗೆ ಅಡ್ಡಿಯಾಗಿರುವ ಕಮ್ಯುನಿಸ್ಟ್, ಕೆಥೊಲಿಕ್ ಇನ್ನಿತರ ಭಿನ್ನಮತೀಯರನ್ನು ‘ರಾಷ್ಟ್ರ ಜೀವನ’ದಿಂದ ಹೊರಗಟ್ಟುವುದು ಅತ್ಯಗತ್ಯ ಎನ್ನುವುದು ನಾಝಿಗಳ ರಾಷ್ಟ್ರೀಯವಾದಿ ಚಿಂತನೆಯಾಗಿತ್ತು.

ಮೊದಲನೇ ಮಹಾಯುದ್ಧದ ಸೋಲಿನಿಂದ ಕಂಗೆಟ್ಟಿದ್ದ ಜರ್ಮನರ ಆರ್ಥಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಬಳಸಿಕೊಂಡು ಚುನಾವಣೆಗಳ ಮೂಲಕವೇ ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದ ಹಿಟ್ಲರ್ ಮತ್ತು ನಾಝಿಗಳು ಜರ್ಮನಿಯ ಜನಾಂಗೀಯ ಶುದ್ಧತೆಯನ್ನು ಕಾಪಾಡಿಕೊಳ್ಳಲು ಹಂತಹಂತವಾದ ಅನಾಗರಿಕ, ನರಹಂತಕ ಯೋಜನೆಗಳನ್ನು ಪ್ರಾರಂಭಿಸಿದರು. ಅಧಿಕಾರಕ್ಕೆ ಬಂದ ಕೊಡಲೇ ಮೊದಲು ಕಮ್ಯುನಿಸ್ಟರನ್ನು ಕಗ್ಗೊಲೆ ಮಾಡುವ ಮೂಲಕ ಪ್ರಬಲವಾಗಿದ್ದ ಕಮ್ಯುನಿಸ್ಟ್ ವಿರೋಧವನ್ನು ನಿವಾರಿಸಿಕೊಂಡರು... ನಂತರ ಎಲ್ಲ ವಿರೋಧ ಪಕ್ಷ ಗಳನ್ನು ನಿಷೇಧಿಸಿ ಜರ್ಮನಿಯನ್ನು ‘ವಿರೋಧಮುಕ್ತಗೊಳಿಸಿದರು’. 1934-38ರ ನಡುವೆ ಯೆಹೂದಿಗಳಿಗೆ ನಾಗರಿಕ ಸ್ವಾತಂತ್ರ್ಯವನ್ನು, ಉದ್ಯೋಗ ಮತ್ತು ಆಸ್ತಿ ಮಾಡುವ ಹಕ್ಕನ್ನು, ಆನಂತರ ಮತದಾನದ ಹಕ್ಕನ್ನು ಕಿತ್ತುಕೊಂಡರು... 1940ರಲ್ಲಿ ಅಷ್ಟೂ ಯೆಹೂದಿಗಳನ್ನು ಮಡಗಾಸ್ಕರ್ ದ್ವೀಪಕ್ಕೆ ಓಡಿಸುವ ಯೋಜನೆಯನ್ನು ಮಾಡಿದ್ದರು... ಅಂತಿಮವಾಗಿ ಜಗತ್ತಿನಲ್ಲಿ ಜರ್ಮನ್ ಜನಾಂಗೀಯ ಶ್ರೇಷ್ಠತೆಗೆ ಮತ್ತು ನಾಝಿ ಚಿಂತನೆಗೆ ಅಡ್ಡಿಯಿದ್ದ ಎಲ್ಲ ಯೆಹೂದಿಗಳನ್ನು, ಜಿಪ್ಸಿಯಂತಹ ಅಲೆಮಾರಿಗಳನ್ನೂ, ಕಮ್ಯುನಿಸ್ಟರನ್ನೂ, ಭಿನ್ನಮತೀಯ ಕೆಥೊಲಿಕ್, ಪ್ರೊಟೆಸ್ಟೆಂಟರನ್ನೂ.... ಸಾರಾ ಸಗಟು ಕೊಂದುಹಾಕುವ ಫೈನಲ್ ಸೊಲ್ಯೂಷನ್ ಜಾರಿ ಮಾಡಿದರು... 1942-45ರ ಮೂರು ವರ್ಷಗಳ ಅವಧಿಯಲ್ಲಿ ನಾಝಿಗಳು 60 ಲಕ್ಷ ಜನರನ್ನು, ಪ್ರಧಾನವಾಗಿ ಯೆಹೂದಿಗಳನ್ನು ಕೊಂದುಹಾಕಿದರು... ನಾಝಿಗಳ ಈ ಜನಾಂಗೀಯ ಶ್ರೇಷ್ಠತೆಯ ಫ್ಯಾಶಿಸಂನಿಂದಾಗಿ 43 ಲಕ್ಷ ಜರ್ಮನರೂ ಪ್ರಾಣತೆತ್ತರು...

ಸಂಘಪರಿವಾರದ ‘ಫೈನಲ್ ಸೊಲ್ಯೂಷನ್’

ನಾಝಿಗಳಿಂದ ಅಪಾರವಾಗಿ ಪ್ರೇರಿತರಾಗಿರುವ ಸಂಘಪರಿವಾರದವರ ಪ್ರಕಾರ ಭಾರತ ಹಿಂದೂ ದೇಶವಾಗಿದ್ದಾಗ ಮಾತ್ರ ‘ಪುನರುತ್ಥಾನ’ಗೊಳ್ಳಲು ಸಾಧ್ಯ. ಅದಕ್ಕೆ ಅಡ್ಡಿ ಇರುವವರು ಮುಸ್ಲಿಮರು, ಕ್ರಿಶ್ಚಿಯನ್ನರು, ಕಮ್ಯುನಿಸ್ಟರು, ಉದಾರವಾದಿ ಚಿಂತನೆಗಳು ..ಹಾಗೂ ಅವರೆಲ್ಲರೂ ಒಟ್ಟಿಗೆ ಬಾಳಲು ಅವಕಾಶ ಮಾಡಿಕೊಡುತ್ತಿರುವ ಪ್ರಜಾತಂತ್ರ ಮತ್ತು ಸಂವಿಧಾನ. ಈ ಎಲ್ಲಾ ಅಡ್ಡಿಗಳನ್ನು ನಿವಾರಿಸಿಕೊಳ್ಳಲು ಕಳೆದ ನೂರು ವರ್ಷಗಳಿಂದಲೂ ಸಂಘ ಪರಿವಾರ ಹಲವಾರು ಯೋಜನೆಗಳನ್ನು ಹಂತಹಂತವಾಗಿ ಜಾರಿಮಾಡುತ್ತಾ ಬಂದಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಗಳು ಈಗ ಪ್ರಭುತ್ವದ ಬಲ ಮತ್ತು ಶಾಸನ ಶಕ್ತಿಯನ್ನು ಪಡೆದುಕೊಂಡಿದೆ. ಆದರೆ ಭಾರತದಲ್ಲಿ 21 ಕೋಟಿ ಮುಸ್ಲಿಮರು ಮತ್ತು 3 ಕೋಟಿ ಕ್ರಿಶ್ಚಿಯನ್ನರೂ ಇದ್ದಾರೆ. ಅಷ್ಟೊಂದು ಜನರನ್ನು ಕೊಲ್ಲಲೂ ಆಗುವುದಿಲ್ಲ. ಬೇರೆ ಯಾವುದೋ ದ್ವೀಪಕ್ಕೆ ಅಟ್ಟಲೂ ಆಗುವುದಿಲ್ಲ. ಹೀಗಾಗಿ ಇರುವ ಏಕೈಕ ದಾರಿ ಎಂದರೆ - ಫೈನಲ್ ಸೊಲ್ಯೂಷನ್ - ಎಂದರೆ ಈ ‘ಹಿಂದುತ್ವ ಶತ್ರು’ಗಳನ್ನು: - ಸಾಂವಿಧಾನಿಕವಾಗಿ ಮತ್ತು ಹಿಂಸಾತ್ಮಕವಾಗಿ ರಾಷ್ಟ್ರ ವಾಹಿನಿಯಿಂದ ಹೊರಗಟ್ಟಿ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡುವುದು.. -ಹಿಂದೂಯೇತರರು ಘನತೆ ಮತ್ತು ಸ್ವಾಭಿಮಾನದಿಂದ ಬದುಕಲಾಗದ ಪರಿಸ್ಥಿತಿ ಸೃಷ್ಟಿಸುವುದು .. -ಅದಕ್ಕೆ ಶಾಸನಬಲವನ್ನು ಕೊಟ್ಟು ಹತ್ಯಾಕಾಂಡಗಳನ್ನು ಕೂಡಾ ಮಾನ್ಯಗೊಳಿಸುವುದು.

 -ಹಿಂದೂ ಓಟ್ ಬ್ಯಾಂಕ್ ಸೃಷ್ಟಿಸಿ ಯಾವುದೇ ಪಕ್ಷವು ಹಿಂದುತ್ವದ ಹಂತಕ ಅಜೆಂಡಾಗಳಿಗೆ ವ್ಯತಿರಿಕ್ತವಾಗಿ ಚುನಾವಣೆಯನ್ನು ಗೆಲ್ಲುವುದೇ ಕಷ್ಟ ಸಾಧ್ಯಗೊಳಿಸುವುದು.
 
ಸಾಂವಿಧಾನಿಕ ಸಂಸ್ಥೆಗಳಲ್ಲಿ ಹಿಂದುತ್ವ ಅಜೆಂಡಾಗಳಿಗೆ ವಿರುದ್ಧವಿರುವವರನ್ನು ನಿವಾರಿಸಿಕೊಂಡು ಅಲ್ಲಿ ಯೋಜಿತವಾಗಿ ಹಿಂದುತ್ವವಾದಿ ವ್ಯಕ್ತಿಗಳನ್ನು ತುಂಬುತ್ತಾ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡು ಸಾಂವಿಧಾನಿಕವಾಗಿಯೇ ಫ್ಯಾಶಿಸಂ ತರುವುದು .. -ಹಿಂದೂಯೇತರರನ್ನು Disempower (ನಿರ್ಬಲೀಕರಿಸುವುದು ), Disenfranchise (ನಾಗರಿಕತ್ವ ನಿರಾಕರಿಸುವುದು ), ಮಾಡುವುದು.. -ಹಿಂದೂಯೇತರನ್ನು ಮತ್ತು ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಜೀವನವನ್ನು ಹಿಂದೂಕರಿಸುವುದು ...ಇತ್ಯಾದಿ. ಈ ಉನ್ಮಾದದಲ್ಲಿ ಜನತೆಯನ್ನು ತೊಡಗಿಸಿ ದೇಶವನ್ನು ನಿರಾತಂಕವಾಗಿ ದೊಡ್ಡ ಕಾರ್ಪೊರೇಟ್ ಧಣಿಗಳು ಲೂಟಿ ಹೊಡೆಯಲು ಬಿಟ್ಟುಕೊಡುವುದು .. ಇದು ಸಂಘಿಗಳು ಭಾರತದಲ್ಲಿ ಜಾರಿ ಮಾಡುತ್ತಿರುವ ಫೈನಲ್ ಸೊಲ್ಯೂಷನ್..

ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ, ಆರ್ಟಿಕಲ್ 370 ರದ್ದು, ಗೋಹತ್ಯಾ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಗಳು, ಹೊಸದಾಗಿ ಜಾರಿಯಾಗುತ್ತಿರುವ ಡಿ-ಲಿಮಿಟೇಷನ್ ಪ್ರಕ್ರಿಯೆಗಳು, ಪ್ರಧಾನಿ ಹುದ್ದೆಯಲ್ಲಿದ್ದರೂ ಸಂವಿಧಾನ ಬಾಹಿರವಾಗಿ ಹಿಂದೂ ಸಂತನಂತೆ ವರ್ತಿಸುವುದು , ಗುಜರಾತ್-ಮುಝಫ್ಫರ್ ನಗರ್-ದಿಲ್ಲಿಯಂತಹ ಪ್ರಭುತ್ವ ಪ್ರಾಯೋಜಿತ ಹತ್ಯಾಕಾಂಡಗಳು, ಸರಕಾರಿ ಬೆಂಬಲಿತ ಪ್ರಾಯೋಜಿತ ಲಿಂಚಿಂಗ್ -ಹರಿದ್ವಾರದಂತಹ ಸಾಧು ಸಮಾವೇಶಗಳು ..ಸರಕಾರದ ನೀತಿಗಳನ್ನು ವಿರೋಧಿಸುವ ರೈತರನ್ನು, ಕಾರ್ಮಿಕರನ್ನು, ಪತ್ರಕರ್ತರನ್ನು, ಚಿಂತಕರನ್ನು ದುರುಳೀಕರಿಸುವುದು, ಕೊಂದುಹಾಕುವುದು ಅಥವಾ ಭಯೋತ್ಪಾದಕರೆಂದು ಜೈಲಿಗೆ ದೂಡುವುದು... ಇತ್ಯಾದಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತದಲ್ಲಿ ಬಿರುಸಿನಲ್ಲಿ ‘ಫೈನಲ್ ಸೊಲ್ಯೂಷನ್’ ಜಾರಿಯಲ್ಲಿದೆ. ಇದು ಇನ್ನೂ ಹತ್ತುವರ್ಷಗಳು ಮುಂದುವರಿಯುವ ಎಲ್ಲಾ ಸಂಭವವೂ ಇದೆ. ಇದನ್ನು ತಡೆಯಲು ಇರುವ ಏಕೈಕ ದಾರಿ ... ಎಲ್ಲರ ಸಾವಿನಲ್ಲೂ ನನ್ನ ಸಾವನ್ನು ಕಾಣುವುದು ..

ಎಲ್ಲರ ಬದುಕಿನಲ್ಲಿ ಮಾತ್ರ ನನ್ನ ಬದುಕನ್ನು ಕಾಣುವುದು .. ಈ ಸಂದರ್ಭದಲ್ಲಿ ಎಷ್ಟೇ ಕ್ಲೀಷೆಯಾದರೂ ಹಿಟ್ಲರ್‌ನ ಜರ್ಮನಿಯಲ್ಲಿದ್ದ ಪಾದ್ರಿ ಮಾರ್ಟಿನ್ ನೆಮ್ಯೂಲರ್‌ನ ಈ ಕವನ ನೆನಪು ಮಾಡಿಕೊಳ್ಳಲೇ ಬೇಕು .. ನಂತರ ಅವರು ನನ್ನನ್ನೇ ಹುಡುಕಿ ಬಂದಾಗ...

  ಈಗ ಕ್ಲೀಷೆಯೇ ಆಗಿರುವ ಆದರೂ ಅತ್ಯಂತ ಪ್ರಸ್ತುತವಾಗಿರುವ ಕೆಳಗಿನ ಕವನವನ್ನು ಬರೆದದ್ದು ಜರ್ಮನಿನ ಪಾದ್ರಿ ಮಾರ್ಟಿನ್ ನೆಮ್ಯೂಲರ್. ಪ್ರೊಟೆಸ್ಟಂಟ್ ಪಾದ್ರಿಯಾಗಿದ್ದ ಮಾರ್ಟಿನ್ ನೆಮ್ಯೂಲರ್ 1934ರಲ್ಲಿ ಹಿಟ್ಲರ್ ಅಧಿಕಾರ ವಶಪಡಿಸಿಕೊಂಡಿದ್ದನ್ನು ಸಂಭ್ರಮಿಸಿದವರಲ್ಲಿ ಒಬ್ಬನಾಗಿದ್ದರು.

ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ಹಿಟ್ಲರ್‌ನ ಪಡೆಗಳು ಕಮ್ಯುನಿಸ್ಟರ ಕಗ್ಗೊಲೆಯನ್ನು ನಡೆಸುತ್ತಿದ್ದಾಗ ದೈವದ್ರೋಹಿ ಕಮ್ಯುನಿಸ್ಟರನ್ನು ಕೊಂದು ಹಿಟ್ಲರ್ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಎಂದು ಸಂಭ್ರಮಿಸಿದ್ದವರಲ್ಲಿ ಇವರೂ ಒಬ್ಬರು... ಆನಂತರ ಅಶಕ್ತರು, ರೋಗಪೀಡಿತರನ್ನು ಹಿಟ್ಲರ್ ಸೆರೆಗೆ ಅಥವಾ ಕೊಲೆಗೆ ಗುರಿಮಾಡುತ್ತಿದ್ದಾಗಲೂ ಇದರಿಂದ ಒಟ್ಟಾರೆಯಾಗಿ ಜರ್ಮನಿಗೆ ಒಳ್ಳೆಯದೇ ಆಗುತ್ತದೆಂದು ಈ ಪಾದ್ರಿ ಭಾವಿಸಿದ್ದರು. 1938ರಲ್ಲಿ ನಿಧಾನಕ್ಕೆ ಜರ್ಮನಿಯ ಹಲವು ನಗರಗಳ ಹೊರವಲಯಗಳಲ್ಲಿ ಪ್ರಾರಂಭಗೊಂಡ ಹಿಟ್ಲರನ Concentration Campಗಳನ್ನು Workers Campಗಳೆಂದೇ ತಮ್ಮನ್ನು ನಂಬಿಸಿಕೊಂಡಿದ್ದರು.

ಆದರೆ ಜರ್ಮನಿಯ ಜನಾಂಗೀಯ ಶುದ್ಧತೆಯನ್ನು ಕಾಪಾಡಿಕೊಳ್ಳಲು ಜರ್ಮನರ ರಕ್ತ ಮತ್ತು ಚಿಂತನೆಗಳಿಂದ ಅನಾರ್ಯತೆಯನ್ನು ಶುದ್ಧಗೊಳಿಸಲು ಹಿಟ್ಲರ್, ಯೆಹೂದಿಗಳನ್ನು, ಕಮ್ಯುನಿಸ್ಟರನ್ನು, ಭಿನ್ನಮತೀಯ ಕೆಥೊಲಿಕ್-ಪ್ರೊಟೆಸ್ಟೆಂಟುಗಳನ್ನೂ, ಜಿಪ್ಸಿ ಇನ್ನಿತರ ಅಲೆಮಾರಿಗಳನ್ನು ಸಾರಾಸಗಟು ಕೊಂದುಹಾಕುವುದೊಂದೇ ‘ಫೈನಲ್ ಸೊಲ್ಯೂಷನ್’ ಎಂದು ತೀರ್ಮಾನಿಸಿದ ಮೇಲೆ ತಾವು ಮಾತ್ರ ಹಿಟ್ಲರನ ಆಳ್ವಿಕೆಯಲ್ಲಿ ಸುರಕ್ಷಿತರು ಎಂದು ಭಾವಿಸಿಕೊಂಡಿದ್ದ ಪಾಸ್ಟರ್ ನೆಮ್ಯೂಲರ್ ಒಳಗೊಂಡಂತೆ ಸಾವಿರಾರು ಪಾದ್ರಿಗಳು ಬಂಧನಕ್ಕೊಳಗಾದರು. ಕೊಲ್ಲಲ್ಪಟ್ಟರು. ಅದೃಷ್ಟವಶಾತ್ ಈ ಪಾದ್ರಿ ಬದುಕುಳಿದರು. ಆದರೆ, ಎಲ್ಲರನ್ನೂ-ಎಲ್ಲವನ್ನೂ ಬಲಿತೆಗೆದುಕೊಳ್ಳುವ ಈ ನಾಝಿ-ಫ್ಯಾಶಿಸ್ಟರ ರಾಜಕಾರಣವನ್ನು ಅರ್ಥಮಾಡಿಕೊಳ್ಳದೆ ಪಾಸ್ಟರ್ ನೆಮ್ಯೂಲರ್ ಅಂತಹವರೂ, ಉದಾರವಾದಿ ನಿಲುವಿನವರೂ, ಪಶ್ಚಿಮದ ಪ್ರಜಾತಂತ್ರ ಜಗತ್ತು ಪ್ರಾರಂಭದಲ್ಲಿ ಬೆಂಬಲಿಸುವ ಪ್ರಮಾದ ಮಾಡಿದ್ದರು... ಅಂತಹ ಪ್ರಮಾದವನ್ನು ಪ್ರಾರಂಭದಲ್ಲಿ ಗಾಂಧಿ ಕೂಡ ಮಾಡಿದ್ದರು.. ಆದರೆ, ನಂತರ 1945ರಲ್ಲಿ ಬದುಕುಳಿದು ಹೂರಬಂದ ಮಾರ್ಟಿನ್ ನೆಮ್ಯೂಲರ್.. ತಮ್ಮ ತಪ್ಪೊಪ್ಪಿಗೆ ಭಾಷಣದಲ್ಲಿ... ಹಿಟ್ಲರ್ ಪ್ರಾರಂಭದ ದಿನಗಳಲ್ಲಿ ಕಮ್ಯುನಿಸ್ಟರನ್ನು ಕೊಲ್ಲತ್ತಿದ್ದ ಕಾಲದಲ್ಲೇ ಇಡೀ ಜರ್ಮನ್ ಸಮಾಜ ತಿರುಗಿಬಿದ್ದಿದ್ದರೆ, ಜರ್ಮನಿ ಇಂತಹ ದಾರುಣ ಕ್ರೌರ್ಯಗಳನ್ನು ಕಾಣುತ್ತಿರಲಿಲ್ಲವೆಂದು ಮನದಾಳದಿಂದ ಭಾಷಣ ಮಾಡಿದರು. ಇದು ಆ ಭಾಷಣದ ಸಾರ ರೂಪದ ಕವನ ಮೊದಲವರು ಕಮ್ಯುನಿಸ್ಟರನ್ನು ಹುಡುಕಿ ಬಂದರು ನಾನು ಸುಮ್ಮನಿದ್ದೆ ಏಕೆಂದರೆ ನಾನು ಕಮ್ಯುನಿಸ್ಟ್ ಆಗಿರಲಿಲ್ಲ .. ನಂತರ ಅವರು ಟ್ರೇಡ್ ಯೂನಿಯನಿಸ್ಟರನ್ನು ಹುಡುಕಿ ಬಂದರು ನಾನು ಸುಮ್ಮನಿದ್ದೆ ಏಕೆಂದರೆ ನಾನು ಟ್ರೇಡ್ ಯೂನಿಯನಿಸ್ಟ್ ಆಗಿರಲ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News