ಕೇಂದ್ರ ಸರಕಾರ ತಿರಸ್ಕರಿಸಿದ ಸ್ತಬ್ದ ಚಿತ್ರ ಚೆನ್ನೈಯಲ್ಲಿ ಪ್ರದರ್ಶಿಸಲು ನಿರ್ಧಾರ: ಎಂ.ಕೆ. ಸ್ಟಾಲಿನ್
ಚೆನ್ನೈ, ಜ. 19: ಕೇಂದ್ರ ಸರಕಾರ ತಿರಸ್ಕರಿಸಿದ ಸ್ತಬ್ದಚಿತ್ರವನ್ನು ಗಣರಾಜ್ಯೋತ್ಸವದ ದಿನದಂದು ಚೆನ್ನೈಯಲ್ಲಿ ಪ್ರದರ್ಶಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ಹೇಳಿದ್ದಾರೆ.
ಇದಲ್ಲದೆ, ಸ್ತಬ್ದ ಚಿತ್ರವನ್ನು ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳಲು ರಾಜ್ಯದ ಸ್ತಬ್ದಚಿತ್ರವನ್ನು ತಿರಸ್ಕರಿಸಿರುವುದರ ಬಗ್ಗೆ ಸ್ಟಾಲಿನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರಕಾರದ ಆಯ್ಕೆ ಸಮಿತಿ ಸೂಚಿಸಿದ ಎಲ್ಲ ಮೂರು ತಿದ್ದುಪಡಿಗಳನ್ನು ಮಾಡಲಾಗಿತ್ತು. ಆದರೆ, ನಾಲ್ಕನೇ ಸುತ್ತಿನ ಮಾತುಕತೆಗೆ ನಮಗೆ ಆಹ್ವಾನ ನೀಡಲಿಲ್ಲ. ಅಲ್ಲದೆ, ತಿರಸ್ಕಾರ ಮಾಡಿರುವುದಕ್ಕೆ ಸ್ಪಷ್ಟನೆ ಕೂಡ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಈ ವಿಷಯದ ಕುರಿತಂತೆ ಪ್ರಧಾನಿ ಅವರಿಗೆ ಪತ್ರ ರವಾನಿಸಲಾಗಿದೆ. ಕೇಂದ್ರ ಗೃಹ ಸಚಿವರಿಂದ ಪ್ರತಿಕ್ರಿಯೆ ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.