"ಗೋಧಿ ರಫ್ತು ನಿಷೇಧ ರೈತ ವಿರೋಧಿ ಕ್ರಮ": ಪಂಜಾಬ್ ರೈತ ಸಂಘಟನೆಗಳ ಆಕ್ರೋಶ
Update: 2022-05-16 14:46 GMT
ಚಂಡಿಗಡ,ಮೇ 16: ಗೋಧಿ ರಫ್ತನ್ನು ನಿಷೇಧಿಸಿರುವ ಕೇಂದ್ರದ ನಿರ್ಧಾರವನ್ನು ರೈತ ವಿರೋಧಿ ಕ್ರಮ ಎಂದು ಬಣ್ಣಿಸಿರುವ ಪಂಜಾಬಿನ ರೈತ ಸಂಘಟನೆಗಳು,ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯ ಗೋದಿಗೆ ಹೆಚ್ಚಿನ ಬೆಲೆಗಳ ಲಾಭಗಳನ್ನು ಪಡೆಯಲು ಸರಕಾರವು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಬೆಳೆ ನಷ್ಟದಿಂದಾಗಿ ಉಂಟಾಗಿರುವ ಹಾನಿಯನ್ನು ಸರಿದೂಗಿಸಲು ಪ್ರತಿ ಕ್ವಿಂಟಲ್ ಗೋದಿಗೆ 500 ರೂ.ಗಳ ಬೋನಸ್ ಅನ್ನು ಪ್ರಕಟಿಸುವಂತೆ ತಮ್ಮ ಬೇಡಿಕೆಯನ್ನೂ ಕೇಂದ್ರವು ಈಡೇರಿಸಿಲ್ಲ ಎಂದು ಅವು ಕಿಡಿಕಾರಿವೆ.
ಪಂಜಾಬಿನಲ್ಲಿ ಹಲವಾರು ರೈತರು,ವಿಶೇಷವಾಗಿ ದೊಡ್ಡ ಬೆಳೆಗಾರರು ಭವಿಷ್ಯದಲ್ಲಿ ಬೆಲೆಗಳು ಏರುವ ನಿರೀಕ್ಷೆಯಲ್ಲಿ ಗೋದಿಯನ್ನು ದಾಸ್ತಾನು ಮಾಡಿದ್ದು,ರಫ್ತು ನಿಷೇಧದಿಂದ ಅವರಿಗೆ ತೊಂದರೆಯಾಗಲಿದೆ. ಸರಕಾರದ ನಿರ್ಧಾರ ರೈತರ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ ಎಂದು ಈ ಸಂಘಟನೆಗಳು ಹೇಳಿವೆ.