ಸಂಬಂಧಿ ಮಹಿಳೆಯ ಸಾವಿನ ಆಘಾತದಿಂದ ಚಿತೆಗೆ ಹಾರಿ ಯುವಕ ಆತ್ಮಹತ್ಯೆ

Update: 2022-06-13 05:06 GMT

ಭೋಪಾಲ್: ಸೋದರ ಸಂಬಂಧಿ ಮಹಿಳೆಯ ಸಾವಿನ ಆಘಾತದಿಂದ ಯುವಕನೋರ್ವ ಮೃತ ಮಹಿಳೆಯ ಅಂತ್ಯಸಂಸ್ಕಾರದ ವೇಳೆ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.

ಮೃತ ಮಹಿಳೆಯ ಶವದತ್ತ ಬಾಗಿದ್ದ ವ್ಯಕ್ತಿ ದಿಢೀರನೇ ಚಿತೆಗೆ ಹಾರಿ ಪ್ರಾಣ ಕಳೆದುಕೊಂಡ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಾಗರ ಜಿಲ್ಲೆಯ ಮಝಗಾವನ್ ಎಂಬ ಗ್ರಾಮದಲ್ಲಿ ಶುಕ್ರವಾರ ಬಾವಿಗೆ ಬಿದ್ದು ಜ್ಯೋತಿ ದಾಗಾ ಎಂಬ ಮಹಿಳೆ ಮೃತಪಟ್ಟಿದ್ದರು. ಶನಿವಾರ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಬಳಿಕ, ಸಂಬಂಧಿಕರು ಅವರವರ ಮನೆಗೆ ತೆರಳಿದರು. ಕೆಲ ಸಮಯದ ಬಳಿಕ ಆಕೆಯ ಸೋದರ ಸಂಬಂಧಿ ಕರಣ್ ಚಿತಾಗಾರಕ್ಕೆ ಆಗಮಿಸಿದ.

ಕರಣ್ ಚಿತಾಗಾರಕ್ಕೆ ಆಗಮಿಸಿದ್ದನ್ನು ನೋಡಿದ ತಕ್ಷಣ ಕುಟುಂಬಕ್ಕೆ ಗ್ರಾಮಸ್ಥರು ಮಾಹಿತಿ ನೀಡಿದರು. ಆದರೆ ಕುಟುಂಬದವರು ಆಗಮಿಸುವ ವೇಳೆಗೆ 21 ವರ್ಷದ ಯುವಕನ ದೇಹ ಬಹುತೇಕ ಸುಟ್ಟುಹೋಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮ ಪಂಚಾಯ್ತಿ ಸರಪಂಚ ಭರತ್ ಸಿಂಗ್ ಘೋಷಿ ಹೇಳಿದ್ದಾರೆ.

ರವಿವಾರ ಯುವಕನ ಅಂತ್ಯಸಂಸ್ಕಾರವನ್ನು ಜ್ಯೋತಿಯ ಚಿತೆಯ ಬಳಿಯಲ್ಲೇ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News