2010ರ ಕಾಮನ್‌ವೆಲ್ತ್ ಗೇಮ್ಸ್ ಹಗರಣ: ಚೀನಾ ಪ್ರಜೆಯ ಗಡಿಪಾರಿಗೆ ಕೋರಲಿರುವ ಸಿಬಿಐ

Update: 2022-08-09 18:23 GMT

ಹೊಸದಿಲ್ಲಿ, ಆ. ೯: ದಿಲ್ಲಿಯ ಶಿವಾಜಿ ಕ್ರೀಡಾಂಗಣ ಮೇಲ್ಜರ್ಜೀಕರಣಕ್ಕೆ ಸಂಬಂಧಿಸಿದ ೨೦೧೦  ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳ ಒಂದರಲ್ಲಿ ಬೇಕಾಗಿರುವ ಚೀನಾ ಪ್ರಜೆ ಜಿಯಾಶು ಝಾವೋನನ್ನು ಗಡಿಪಾರಿಗೆ ಕೋರಿ ಸಿಬಿಐ ಶೀಘ್ರ ಅರ್ಜಿ ಸಲ್ಲಿಸಲಿದೆ. 

ಭಾರತದಲ್ಲಿರುವ ಚೀನಾ ರೈಲ್ವೇ ಶಿಸಿಜು ಗ್ರೂಪ್ ಕಾರ್ಪೋರೇಶನ್   ಪ್ರತಿನಿಧಿಯೆಂದು ಹೇಳಲಾದ ಜಿಯಾಶು ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸು ಪಡೆಯುವ ಪ್ರಯತ್ನದಲ್ಲಿ ಸಿಬಿಐ ಇದುವರೆಗೆ ವಿಫಲವಾಗಿದೆ. 
ಭಾರತ ಹಾಗೂ ಚೀನಾದ  ನಡುವಿನ ಪರಸ್ಪರ ಕಾನೂನು ನೆರವು ಒಪ್ಪಂದ (ಎಂಎಲ್‌ಎಟಿ)ದ ಗೈರಿನ ಕಾರಣದಿಂದ ಜಿಯಾಶು
ವಿರುದ್ಧ ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸಲು ಸಿಬಿಐಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. 

ಕಳೆದ ಮೂರು ವರ್ಷಗಳಲ್ಲಿ ಆತನಿಗೆ ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವ ವಿಫಲ ಪ್ರಯತ್ನದ ಕುರಿತ ಇನ್ನಷ್ಟು ವಿವರಗಳನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. 
ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಎನ್‌ಡಿಎಂಸಿ ಹಿರಿಯ ಅಧಿಕಾರಿಗಳ ಜೊತೆಗೆ ಜಿಯಾಶು ಅವರನ್ನು ಕೂಡ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಪ್ರಕರಣದಲ್ಲಿ ಎನ್‌ಡಿಎಂಸಿ ಆಗಿನ ಅಧ್ಯಕ್ಷ ಪರಿಮಳ್ ರಾಯ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಲು ಸಕ್ಷಮ ಪ್ರಾಧಿಕಾರ ನಿರಾಕರಿಸಿತ್ತು.  
ಈ ಪ್ರಕರಣಲ್ಲಿ ಇತರ ಆರೋಪಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧದ ಆರೋಪವನ್ನು ನ್ಯಾಯಾಲಯ ಈಗಾಗಲೇ ಗಮನಕ್ಕೆ ತೆಗೆದುಕೊಂಡಿದೆ. 
ಜಿಯೋಶು ವಿರುದ್ಧ ಸಮನ್ಸ್ ಹಾಗೂ ಜಾಮೀನು ರಹಿತ ಬಂಧನಾದೇಶ ಜಾರಿಗೊಳಿಸಲು ಸಿಬಿಐಗೆ ಸಾಧ್ಯವಾಗದ ಬಳಿಕ ಅವರ ವಿಚಾರಣೆಯನ್ನು ಇತರ ಆರೋಪಿಗಳಿಂದ ಪ್ರತ್ಯೇಕಿಸಲಾಗಿದೆ.  

ಈಗ ಸಿಬಿಐ ಚೀನಾ ಪ್ರಜೆಯಾಗಿರುವ ಜಿಯಾಶು ಅವರ ಗಡಿಪಾರಿಗೆ ಅರ್ಜಿ ಸಲ್ಲಿಸಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ. 
೨೦೧೦ ಕಾಮನ್‌ವೆಲ್ತ್ ಗೇಮ್‌ಗೆ ಶಿವಾಜಿ ಕ್ರೀಡಾಂಗಣವನ್ನು ಮೇಲ್ದರ್ಜೀಕರಣಗೊಳಿಸುವಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News