ರಾಜ್ಯಸಭೆಯಲ್ಲಿ ಇನ್ನು ಮುಂದೆ ವಿಧೇಯಕ ಅಂಗೀಕಾರಕ್ಕೆ ಎನ್‌ಡಿಎಗೆ ಬಿಜೆಡಿ, ವೈಎಸ್‌ಆರ್‌ಸಿಪಿ ಅವಲಂಬನೆ ಅನಿವಾರ್ಯ

Update: 2022-08-10 17:49 GMT

ಹೊಸದಿಲ್ಲಿ, ಆ. 10: ಎನ್‌ಡಿಎ ಮೈತ್ರಿಕೂಟದಿಂದ ಜನತಾ ದಳ (ಸಂಯುಕ್ತ) ಹೊರಬಂದಿರುವುದರಿಂದ ರಾಜ್ಯ ಸಭೆಯಲ್ಲಿ ಪ್ರಮುಖ ವಿಧೇಯಕಗಳು ಅಂಗೀಕಾರವಾಗಲು ಬಿಜೆಪಿ ಇದೀಗ ಬಿಜೆಡಿ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನಂತಹ ಪ್ರಾದೇಶಿಕ ಪಕ್ಷಗಳನ್ನು ಹೆಚ್ಚು ಅವಲಂಬಿಸಬೇಕಾಗಿದೆ.   

ಉಪ ಸಭಾಪತಿ ಹರಿಮಂಶ್ ಸೇರಿದಂತೆ ಜೆಡಿಯುನ ಒಟ್ಟು ಐವರು ಸದಸ್ಯರು ರಾಜ್ಯ ಸಭೆಯಲ್ಲಿ ಇದ್ದಾರೆ. ಹರಿವಂಶ್ ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಯಾಕೆಂದರೆ, ಅವರ ಪಕ್ಷ ಎನ್‌ಡಿಎಯ ಮೈತ್ರಿ ಕಡಿದುಕೊಂಡರೂ ಅವರು ಇನ್ನೂ ರಾಜೀನಾಮೆ ನೀಡಿಲ್ಲ. ಆದರೆ, ಅವರು ಸೋಮನಾಥ ಚಟರ್ಜಿ ಅವರಂತೆಯೇ ಅದೇ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಸೋಮನಾಥ್ ಚಟರ್ಜಿ ಅವರು ಸಿಪಿಎಂನಿಂದ ಅಮಾನತುಗೊಂಡ ಬಳಿಕವೂ ಲೋಕಸಭೆಯ ಸ್ಪೀಕರ್ ಹುದ್ದೆಯಲ್ಲಿ ಮುಂದುವರಿದಿದ್ದರು. 

ಜೆಡಿಯು ಲೋಕಸಭೆಯಲ್ಲಿ 16 ಸಂಸದರನ್ನು ಹೊಂದಿದೆ. ಕೆಳಮನೆಯಲ್ಲಿ ಬಿಜೆಪಿಗೆ ಬಹುಮತವಿದೆ. ಆದರೆ, ರಾಜ್ಯ ಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲ. ಮೇಲ್ಮನೆಯಲ್ಲಿ ಬಿಜೆಪಿ ಕೇವಲ 91 ಸದಸ್ಯರನ್ನು ಹೊಂದಿದೆ. ಇಬ್ಬರು ಪಕ್ಷೇತರರು ಹಾಗೂ ಎಐಎಡಿಎಂಕೆಯ ನಾಲ್ವರು ಸಂಸದರು ಸೇರಿದಂತೆ ಒಟ್ಟು 110 ಸಂಸದರ ಬೆಂಬಲವನ್ನು ಬಿಜೆಪಿ ಇಲ್ಲಿ ಹೊಂದಿದೆ. 
245 ಸದಸ್ಯ ಬಲದ ರಾಜ್ಯ ಸಭೆಯಲ್ಲಿ ಬಿಜೆಪಿಗೆ ಸರಳ ಬಹುಮತಕ್ಕೆ 125 ಸದಸ್ಯರ ಬೆಂಬಲ ಅಗತ್ಯತೆ ಇದೆ. ಇದಕ್ಕಾಗಿ ಮೂವರು ಪಕ್ಷೇತರ ಸದಸ್ಯರು ಹಾಗೂ ಬಿಜೆಡಿಯ ಅಥವಾ ವೈಎಸ್‌ಆರ್‌ಸಿಪಿಯನ್ನು ಅವಲಂಬಿಸಬೇಕಾಗಿದೆ. 

ರಾಜ್ಯ ಸಭೆಯಲ್ಲಿ ಬಿಜೆಡಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ತಲಾ 9 ಸದಸ್ಯರು ಇದ್ದಾರೆ. ಇತ್ತೀಚೆಗೆ ಪ್ರಮುಖ ಕಾಯ್ದೆ ಅಂಗೀಕಾರವಾಗಲು ಈ ಎರಡು ಪಕ್ಷಗಳು ಆಡಳಿತರೂಡ ಎನ್‌ಡಿಎಗೆ ಬೆಂಬಲ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News