ದಿಲ್ಲಿ ಅಬಕಾರಿ ನೀತಿ ಜಾರಿಯಲ್ಲಿ ಅಕ್ರಮ: ತೆಲಂಗಾಣ, ಕರ್ನಾಟಕ ಸೇರಿ ದೇಶಾದ್ಯಂತ 40 ಸ್ಥಳಗಳಲ್ಲಿ ಈಡಿ ದಾಳಿ
ಹೊಸದಿಲ್ಲಿ: ಈಗ ಹಿಂತೆಗೆದುಕೊಂಡಿರುವ ದಿಲ್ಲಿ ಅಬಕಾರಿ ನೀತಿಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಈಡಿ) ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಪಂಜಾಬ್ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಾದ್ಯಂತ ಹರಡಿರುವ 40 ಸ್ಥಳಗಳಲ್ಲಿದಾಳಿ ನಡೆಸಿ ಶೋಧ ಕಾರ್ಯ(Enforcement Directorate Raids 40 Location) ನಡೆಸುತ್ತಿದೆ. ಈ ಪೈಕಿ 20 ಸ್ಥಳಗಳು ಟಿಆರ್ಎಸ್ ಆಡಳಿತವಿರುವ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೂರು ತಿಂಗಳ ಹಿಂದೆ ಬಂಧಿತರಾಗಿರುವ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಮದ್ಯ ಮಾರಾಟ ನೀತಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸುವ ದಿನದಂದು ಈ ಶೋಧ ಕಾರ್ಯ ಆರಂಭವಾದವು.
ತಮ್ಮ ಪಕ್ಷದ ನಾಯಕರ ವಿರುದ್ಧ ರಾಜಕೀಯ ಸೇಡಿಗಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ. ವಿವಾದಾತ್ಮಕ ಮದ್ಯ ನೀತಿ ಜಾರಿಯಲ್ಲಿ ಯಾವುದೇ ಅಕ್ರಮಗಳನ್ನು ಕೇಜ್ರಿವಾಲ್ ನಿರಾಕರಿಸಿದ್ದಾರೆ. ಶೀಘ್ರದಲ್ಲೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.