ಉತ್ತರಾಖಂಡ: ಹತ್ಯೆಯಾದ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಸಲು ಯತ್ನಿಸಿದ್ದ ಆರೋಪಿಗಳು

Update: 2022-09-24 17:55 GMT
ಪುಲ್ಕಿತ್ ಆರ್ಯ (Photo: Twitter)

ರಿಶಿಕೇಶ್, ಸೆ.24: ಉತ್ತರಾಖಂಡದಲ್ಲಿ ಹತ್ಯೆಯಾದ ಯುವತಿಯನ್ನು ವೇಶ್ಯಾವಾಟಿಕೆಗಿಳಿಯುವಂತೆ  ಆರೋಪಿಗಳು ಬಲವಂತಪಡಿಸಿದ್ದರೆಂಬುದು ಆಕೆ ತನ್ನ ಸ್ನೇಹಿತೆಗೆ ಕಳುಹಿಸಿದ ವಾಟ್ಸ್‌ಆ್ಯಪ್ ಸಂದೇಶಗಳು ದೃಢಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್‌ನ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ತನ್ನ ಕಹಿಅನುಭವಗಳನ್ನು ಗೆಳತಿಯೊಂದಿಗೆ ವಿವರಿಸಿದ ಸಂದರ್ಭದಲ್ಲಿ ಆಕೆ  ಈ ವಿಷಯವನ್ನು ತಿಳಿಸಿದ್ದಳು ಎನ್ನಲಾಗಿದೆ. ‘‘ಅವರು ನನ್ನನ್ನು ವೇಶ್ಯೆಯಾಗಿಸಲು ಯತ್ನಿಸುತ್ತಿದ್ದಾರೆ” ಎಂದು ಯುವತಿಯು ತನ್ನ ಸ್ನೇಹಿತೆಗೆ ಕಳುಹಿಸಿದ ವಾಟ್ಸ್‌ಆ್ಯಪ್ ಸಂದೇಶದಲ್ಲಿ ಹೇಳಿದ್ದಾಗಿ ವರದಿಯಾಗಿದೆ.

 ರೆಸಾರ್ಟ್‌ನ ಗ್ರಾಹಕರಿಗೆ ‘ವಿಶೇಷ ಸೇವೆ’ಗಳನ್ನು ಒದಗಿಸುವಂತೆ ಆರೋಪಿಗಳು ತನ್ನನ್ನು ಬಲವಂತಪಡಿಸಿದ್ದಾರೆಂದು ಯುವತಿ ಹೇಳಿರುವ ವಾಟ್ಸ್‌ಆ್ಯಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಂದೇಶಗಳನ್ನು ಕೊಲೆಯಾದ ಯುವತಿಯೇ ಕಳುಹಿಸಿದ್ದಾಳೆಂಬುದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಆದಾಗ್ಯೂ ಈ ಬಗ್ಗೆ ಇನ್ನೂ ಹೆಚ್ಚಿನ ಅಪರಾಧ ವಿಧಿವಿಧಾನ ಪರೀಕ್ಷೆ ನಡೆಸಲಾಗುವುದೆಂದು ಅವರು ಹೇಳಿದ್ದಾರೆ.

ರೆಸಾರ್ಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾಗಿಯೂ ಸಂತ್ರಸ್ತೆ ತನ್ನ ಸ್ನೇಹಿತೆಯೊಂದಿಗೆ ಹೇಳಿಕೊಂಡಿದ್ದಾರೆ.  ಆತ ಪಾನಮತ್ತನಾಗಿರುವುದರಿಂದ ಸುಮ್ಮನಿರುವಂತೆ ಆರೋಪಿಗಳು ತನಗೆ ಸೂಚಿಸಿದ್ದರೆಂದು ಆಕೆ ವಾಟ್ಸ್‌ಆ್ಯಪ್ ನಲ್ಲಿ ಹೇಳಿಕೊಂಡಿದ್ದಾರೆ. ಸಂತ್ರಸ್ತೆಯು, ರೆಸಾರ್ಟ್‌ನ ಉದ್ಯೋಗಿಯೊಬ್ಬನಿಗೆ ಮಾಡಿದ್ದಳೆನ್ನಲಾದ ದೂರವಾಣಿ ಕರೆಯ ಆಡಿಯೋ ಕೂಡಾ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೋನ್‌ನಲ್ಲಿ ಆಕೆ ಅಳುತ್ತಳೇ, ಆ ವ್ಯಕ್ತಿಗೆ ತನ್ನ ಬ್ಯಾಗನ್ನು ಮಹಡಿಗೆ ತರುವಂತೆ ಹೇಳುತ್ತಿರುವುದು ಕೇಳಿಬಂದಿದೆ.

ಹತ್ಯೆಯಾದ ಯುವತಿಯನ್ನು ಆರೋಪಿ ರಿಸಾರ್ಟ್ ಮಾಲಕನು, ಅತಿಥಿಗಳಿಗೆ ವಿಶೇಷ ಸೇವೆಯನ್ನು ನೀಡುವಂತೆ ಬಲವಂತಪಡಿಸುತ್ತಿದ್ದನೆಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಉತ್ತರಾಖಂಡದ ಹಿರಿಯ ಪೊಲೀಸ್ ವರಿಷ್ಠ ಅಶೋಕ್‌ಕುಮಾರ್  ಕೂಡಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News