ತಾನು ಪೋಷಿಸುತ್ತಿದ್ದ ಬೀದಿನಾಯಿ ಸತ್ತ ಬೇಸರದಿಂದ ವಿದ್ಯಾರ್ಥಿನಿ ಆತ್ಮಹತ್ಯೆ!

Update: 2022-11-06 02:26 GMT

ಮೀರಠ್: ತಾನು ಪ್ರೀತಿಯಿಂದ ಪೋಷಿಸುತ್ತಿದ್ದ ಬೀದಿನಾಯಿಯೊಂದು ಅಪಘಾತಕ್ಕೆ ತುತ್ತಾಗಿ ಸತ್ತ ಬೇಸರದಿಂದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಕಾಲೇಜಿನಲ್ಲಿ ಕೌನ್ಸಿಲಿಂಗ್‍ಗೆ ತೆರಳಬೇಕಿದ್ದ 19 ವರ್ಷ ವಯಸ್ಸಿನ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಗೌರಿ ತ್ಯಾಗಿ ಎಂಬ ಯುವತಿ ಬೀದಿನಾಯಿಗಳನ್ನು ಅತೀವವಾಗಿ ಪ್ರೀತಿಸುತ್ತಿದ್ದಳು ಹಾಗೂ ಆಹಾರ ನೀಡುತ್ತಿದ್ದಳು ಎಂದು ನೆರೆಯವರು ಹೇಳಿದ್ದಾರೆ. ಗುರುವಾರ ವಾಕಿಂಗ್ ತೆರಳಿದ್ದಾಗ ವಾಹನವೊಂದು ಬಡಿದು ನಾಯಿ ಗಾಯಗೊಂಡಿದ್ದನ್ನು ನೋಡಿ ಅದನ್ನು ಮನೆಗೆ ತಂದು ಜೀವ ಉಳಿಸಲು ಪ್ರಯತ್ನಿಸಿದಳು. ಆದರೆ ಶ್ವಾನ ಸತ್ತಿತು.

ಇದರಿಂದ ಬೇಸರಗೊಂಡ ಗೌರಿ ರಾತ್ರಿ ಊಟ ಮಾಡಲು ನಿರಾಕರಿಸಿದಳು. ಮರುದಿನ ಆಕೆ ಮನೆಯಿಂದ 300 ಮೀಟರ್ ದೂರ ಇದ್ದ ನೀರಿನ ಟ್ಯಾಂಕ್ ಏರಿ, ಅಲ್ಲಿಂದ ಕೆಳಕ್ಕೆ ಹಾರಿದಳು. ತೀವ್ರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News