ತನ್ನನ್ನು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ತೆಗೆಯುವ ಮಸೂದೆಗೆ ಸಹಿ ಹಾಕಲು ನಿರಾಕರಿಸಿದ ಕೇರಳ ರಾಜ್ಯಪಾಲ

Update: 2023-01-06 05:41 GMT

ತಿರುವನಂತಪುರ: ಮಸೂದೆಯು ನನ್ನನ್ನು ಒಳಗೊಂಡಿರುವುದರಿಂದ ನಾನು ಆ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಸೂದೆಯ ಕುರಿತ ನಿರ್ಣಯವನ್ನು ನನಗಿಂತ ಉನ್ನತಾಧಿಕಾರ ಹೊಂದಿರುವವರು ತೆಗೆದುಕೊಳ್ಳಬೇಕಿದೆ ಎಂಬ ಕಾರಣ ನೀಡಿ, ಕೇರಳ (Kerala) ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ತಮ್ಮನ್ನು ತೆಗೆಯುವ ಮಸೂದೆಗೆ ಸಹಿ ಹಾಕಲು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ (Kerala Governor Arif Mohammed Khan) ನಿರಾಕರಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಗುರುವಾರ ತಿರುವನಂತಪುರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಸೂದೆಯು ನನ್ನನ್ನು ಒಳಗೊಂಡಿರುವುದರಿಂದ ಅದರ ಕುರಿತು ನನಗಿಂತ ಉನ್ನತಾಧಿಕಾರ ಹೊಂದಿರುವವರು ನಿರ್ಣಯ ಕೈಗೊಳ್ಳಬೇಕಿದೆ" ಎಂದು ಹೇಳುವ ಮೂಲಕ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವ ಸೂಚನೆ ನೀಡಿದ್ದಾರೆ.

"ನನ್ನ ಕೆಲಸ ವಿಶ್ವವಿದ್ಯಾಲಯಗಳನ್ನು ನಡೆಸುವುದಲ್ಲ. ವಿಶ್ವವಿದ್ಯಾಲಯಗಳನ್ನು ಉಪ ಕುಲಪತಿಗಳು ನಡೆಸುತ್ತಾರೆ. ಆದರೆ, ವಿಶ್ವವಿದ್ಯಾಲಯಗಳು ಸ್ವಾಯತ್ತವಾಗಿ ಮತ್ತು ಯಾವುದೇ ಹಸ್ತಕ್ಷೇಪವಿಲ್ಲದಂತೆ ನಡೆಯುವುದನ್ನು ಖಾತ್ರಿಗೊಳಿಸುವ ಜವಾಬ್ದಾರಿ ಕುಲಪತಿಯದ್ದಾಗಿದೆ" ಎಂದು ರಾಜ್ಯಪಾಲರು ಹೇಳಿದ್ದಾರೆ.

ಈ ನಡುವೆ, ಡಿಸೆಂಬರ್‌ನಲ್ಲಿ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದ್ದ 17 ಮಸೂದೆಗಳ ಪೈಕಿ ಕುಲಪತಿ ನೇಮಕಾತಿ ಮಸೂದೆ ಹೊರತುಪಡಿಸಿ, ಉಳಿದ ಎಲ್ಲ 16 ಮಸೂದೆಗೆ ರಾಜ್ಯಪಾಲರು ಸಹಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ 13ರಂದು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ರಾಜ್ಯಪಾಲರ ಬದಲು ಸಮರ್ಥ ಶಿಕ್ಷಣ ತಜ್ಞರನ್ನು ನೇಮಿಸಲು ಅವಕಾಶ ನೀಡುವ ಮಸೂದೆಯನ್ನು ಕೇರಳ ವಿಧಾನಸಭೆ ಅಂಗೀಕರಿಸಿತ್ತು.

ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹಾಗೂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ನಡುವೆ ವಿಶ್ವವಿದ್ಯಾಲಯಗಳ ಉಪ ಕುಲಪತಿ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂಘರ್ಷ ಮುಂದುವರಿದಿದೆ.

ಮಸೂದೆಯ ಪ್ರಕಾರ, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ಪ್ರತಿಷ್ಠಿತ ಶಿಕ್ಷಣ ತಜ್ಞರು ಅಥವಾ ಕೃಷಿ, ಪಶು ವೈದ್ಯಕೀಯ ವಿಜ್ಞಾನ, ತಂತ್ರಜ್ಞಾನ, ಔಷಧ ವೈದ್ಯಕೀಯ ವಿಜ್ಞಾನ, ಸಾಮಾಜಿಕ ವಿಜ್ಞಾನ, ಮಾನವಿಕ ಶಾಸ್ತ್ರ, ಸಾಹಿತ್ಯ, ಕಲೆ, ಸಂಸ್ಕೃತಿ, ಕಾನೂನು ಅಥವಾ ಸಾರ್ವಜನಿಕ ಆಡಳಿತ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳನ್ನು ನೇಮಕ ಮಾಡುವ ಅಧಿಕಾರ ಸರ್ಕಾರಕ್ಕೆ ಇರಲಿದೆ.

ಇದನ್ನೂ ಓದಿ: ಚೌಡೇಶ್ವರಿ ಹಾಗೂ ಸೈಯದ್ ಸಾದತ್ ದರ್ಗಾ ಹುಂಡಿ ಹಣ ಎಣಿಕೆಗೆ ಆಗಮಿಸಿದ ತೀರ್ಥಹಳ್ಳಿ ತಹಶೀಲ್ದಾರ್ ಗೆ ಘೇರಾವ್

Similar News