ನಾನು ಜೈಲಿನಲ್ಲಿರುವುದರಿಂದ ಯಾರಿಗೆ ಲಾಭವಾಗಿದೆಯೋ ಗೊತ್ತಿಲ್ಲ, ನನ್ನ ಹೋರಾಟ ಮುಂದುವರಿಸುವೆ: ಕಪ್ಪನ್

Update: 2023-02-02 11:09 GMT

ಲಕ್ನೊ: "ನಾನು ಕಠಿಣ ಕಾನೂನುಗಳ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. 28 ತಿಂಗಳ ಸುದೀರ್ಘ ಹೋರಾಟದ ನಂತರ ಜಾಮೀನು ಲಭಿಸಿದ ಬಳಿಕವೂ ಅವರು ನನ್ನನ್ನು ಜೈಲಿನಲ್ಲಿಟ್ಟರು.  ನಾನು ಜೈಲಿನಲ್ಲಿರುವುದರಿಂದ ಯಾರಿಗೆ ಲಾಭವಾಗಿದೆ ಎಂದು ನನಗೆ ತಿಳಿದಿಲ್ಲ. ಈ ಎರಡು ವರ್ಷಗಳು ತುಂಬಾ ಕಠಿಣವಾಗಿತ್ತು. ಆದರೆ ನಾನು ಎಂದಿಗೂ ಹೆದರಲಿಲ್ಲ”ಎಂದು  ಲಕ್ನೋ ಜೈಲಿನಿಂದ ಬಿಡುಗಡೆಯಾದ ನಂತರ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್(Siddique Kappan)   NDTV ಗೆ ತಿಳಿಸಿದರು.

ತಿಂಗಳುಗಳ ಹಿಂದೆಯೇ ಜಾಮೀನು ಪಡೆದಿದ್ದ ಕಪ್ಪನ್ ಅವರು ನಿನ್ನೆ ಸಂಜೆ  ಜೈಲಿನಿಂದ ಹೊರಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.  ಆದರೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ನಿರತರಾಗಿದ್ದರಿಂದ  ಕಪ್ಪನ್ ರನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.

ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರದ ಕುರಿತು ವರದಿ ಮಾಡಲು ಹೋಗುತ್ತಿದ್ದಾಗ ಮಾರ್ಗ ಮಧ್ಯೆಯೇ ಬಂಧಿತರಾಗಿದ್ದ ಸಿದ್ದಿಕ್ ಕಪ್ಪನ್ ಅವರನ್ನು ಇಂದು ಬಿಡುಗಡೆ ಮಾಡಲಾಯಿತು.   ಕಪ್ಪನ್ ತನ್ನ  ವಿರುದ್ಧದ ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದ ನಂತರವೂ  ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಜೈಲಿನಲ್ಲಿದ್ದರು.

Similar News