ಬೋವಿ, ಪರಿವಾರ ನಾಯ್ಕ್ಗೆ ಕಾನೂನು ಬಾಹಿರ ಪರಿಶಿಷ್ಟ ಜಾತಿ ಪ್ರಮಾಣಪತ್ರ: ರಾಜಶೇಖರ್ ಕೋಟೆ ಆರೋಪ
ಉಡುಪಿ: ಜಿಲ್ಲೆಯಲ್ಲಿ ಬೋವಿ ಮತ್ತು ಪರಿವಾರ ನಾಯ್ಕ್ ಜಾತಿಗಳಿಗೆ ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ಜಾತಿಗಳು ಯಾವ ಕಾಲದಲ್ಲಿಯೂ ಅಸ್ಪೃಶ್ಯ ಜಾತಿಗಳಾಗಿರಲಿಲ್ಲ. ಈ ಜಾತಿಗಳು ಪ್ರವರ್ಗ-೧ರಲ್ಲಿ ಬರುವ ಇತರ ಹಿಂದುಳಿದ ಜಾತಿಗಳಾಗಿವೆ. ಇವರಿಗೆ ಜಿಲ್ಲಾಡಳಿತ ಜಾತಿ ಪ್ರಮಾಣಪತ್ರ ನೀಡುತ್ತಿರುವುದರಿಂದ ಜಿಲ್ಲೆಯ ನೈಜ ಪರಿಶಿಷ್ಟ ಜಾತಿಗಳಿಗೆ ಅನ್ಯಾಯ ಆಗುತ್ತಿದೆ ಎಂದರು.
ಈ ಜಾತಿಗಳ ಕುಲಶಾಸ್ತ್ರ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಆಯೋಗದಿಂದ ಶಿಫಾರಸ್ಸುಗೊಂಡು ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು, ಕೇಂದ್ರ ಸರಕಾರವು ಗಜೆಟ್ ನೋಟೀಫಿಕೇಶನ್ ಮಾಡಿದ ನಂತರ ಈ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿ ಜಾತಿ ಪ್ರಮಾಣ ಪತ್ರ ಗಳನ್ನು ನೀಡಬೇಕಾಗಿತ್ತು. ಆದರೆ ಈಗಿನ ರಾಜ್ಯ ಹಿಂದುಳಿದವರ್ಗಗಳ ಆಯೋಗದ ಅಧ್ಯಕ್ಷರ ಶಿಫಾರಸ್ಸಿನಂತೆ ಯಾವುದೇ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಏಕಾಏಕಿ ಈ ಜಾತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡು ತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಈ ಜಾತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಜಿಲ್ಲಾಡಳಿತವು ಈ ಕಾನೂನು ಬಾಹಿರ ಕ್ರಮ ಜರಗಿಸುತ್ತಿದ್ದು, ಈ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಂಘಟನೆ ಕಾನೂನು ಕ್ರಮ ಜರಗಿಸ ಲಿದೆ. ಅಲ್ಲದೆ ಇದರ ವಿರುದ್ದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸ ಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ಜಿಲ್ಲಾ ಸಮಿತಿ ಸದಸ್ಯ ಸಂಜೀವ ಬಳ್ಕೂರು, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಅಂಬೇಡ್ಕರ್ ಭವನವನ್ನು 15 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಬೇಕು ಮತ್ತು ಈ ಭವನದ ಎದುರು ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ರಾಜಶೇಖರ್ ಕೋಟೆ ಆಗ್ರಹಿಸಿದರು.
ಕುಂದಾಪುರ ತಾಲೂಕು ಅಂಬೇಡ್ಕರ್ ಭವನವನ್ನು 10 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಬೇಕು. ಜಿಲ್ಲೆಯಿಂದ ಈ ಆರ್ಥಿಕ ವರ್ಷದಲ್ಲಿ ಬಾಬಾ ಸಾಹೇಬರ ದೀಕ್ಷಾ ಭೂಮಿಗೆ ಪ್ರವಾಸ ಕೈಗೊಂಡ ಪರಿಶಿಷ್ಟ ಜಾತಿ ಪ್ರವಾಸಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಯೋಜನೆಯಂತೆ ಕೂಡಲೇ ಅನುದಾನ ಮಂಜೂರು ಮಾಡಬೇಕು.
ಕರಾವಳಿ ಜಿಲ್ಲೆಯ ಪರಿಶಿಷ್ಟ ದೈವ ನರ್ತಕರಿಗೆ ಸರಕಾರ ಈ ಬಾರಿಯ ಬಜೆಟ್ನಲ್ಲಿ ಮಾಶಾಸನಕ್ಕೆ ಸೂಕ್ತ ಅನುದಾನ ಒದಗಿಸದೆ ಇರುವುದು ಖಂಡನೀಯ. ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ರೋಷ್ಟರ್ ನಿಮಯವನ್ನು ಕಡ್ಡಾಯವಾಗಿ ಆಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಾನೂನು ಬಾಹಿರ ನಿವೇಶನ ಅರ್ಜಿಗಳನ್ನು ರದ್ದುಗೊಳಿಸಲು ದಸಂಸ ಆಗ್ರಹ
ಉಡುಪಿ ನಗರಸಭಾ ವ್ಯಾಪ್ತಿಯ ಸುಬ್ರಹ್ಮಣ್ಯ ನಗರ ವಾರ್ಡ್ನ ಸರ್ವೆ ನಂಬರ್ ೨೩೪/೧ ಮತ್ತು ೨೩೪/೩ರಲ್ಲಿ ಮತ್ತು ಕೆಳಾರ್ಕಳ ಬೆಟ್ಟು ಗ್ರಾಮದ ಸರ್ವೇ ನಂಬರ್ 50ರಲ್ಲಿ ಮನೆ ನಿವೇಶನ ಕೋರಿ ಸಲ್ಲಿಸಿರುವ ಅರ್ಜಿಯನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಒತ್ತಾಯಿಸಿದೆ.
ಸುಬ್ರಹ್ಮಣ್ಯ ನಗರದ ಜಮೀನು ಪೊಟ್ಟುಕೆರೆ ಎಂದು ಪ್ರಸಿದ್ಧಿಯಾಗಿದ್ದು, ಯಾವುದೇ ಕಾರಣಕ್ಕೂ ಕೆರೆ ಒತ್ತುವರಿ ಮಾಡಬಾರದೆಂದು ಸರ್ವೋಚ್ಛ ನ್ಯಾಯಾ ಲಯದ ಆದೇಶ ಇದೆ. ಈ ಹಿಂದೆ ಇದೇ ಜಮೀನಿನಲ್ಲಿ ನಿವೇಶನ ನೀಡಲು ಮಾಜಿ ಸಚಿವರು ಅಧಿಕಾರಿಗಳಿಗೆ ಒತ್ತಡ ಹೇರಿ ನಿವೇಶನ ಮಂಜೂರು ಮಾಡಿದ್ದರು. ಆದುದರಿಂದ ಈ ಜಮೀನಿನಲ್ಲಿ ಮನೆ ನಿವೇಶನ ಮಂಜೂರು ಮಾಡಬಾರದು ಮತ್ತು ಈ ಹಿಂದೆ ಮಂಜೂರು ಮಾಡಿರುವ ಮನೆ ನಿವೇಶನವನ್ನು ರದ್ದುಗೊಳಿಸಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣ ಬಜೆ ಕುಕ್ಕೆಹಳ್ಳಿ ಮತ್ತು ಜಿಲ್ಲಾ ಖಜಾಂಚಿ ಸುಂದರ ಅಂಜಾರು ಜಂಟಿ ಹೇಳಿಕೆಯಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.