ಪ್ರೇಮಿಯನ್ನು ಮದುವೆಯಾಗಲು ಆಭರಣಗಳನ್ನು ಮಾರಿ ಭಾರತವನ್ನು ತಲುಪಿದ್ದ ಪಾಕ್ ಯುವತಿ

Update: 2023-02-24 17:39 GMT

ಕರಾಚಿ, ಫೆ.24: ನಾಚಿಕೆ ಸ್ವಭಾವದ ಪಾಕಿಸ್ತಾನದ ಹದಿಹರೆಯದ ಯುವತಿ ವೀಸಾವೂ ಇಲ್ಲದೆ ಭಾರತೀಯ ಪ್ರೇಮಿಯನ್ನು ಮದುವೆಯಾಗಲು ಏಕಾಂಗಿಯಾಗಿ ಭಾರತವನ್ನು ತಲುಪಿದ್ದ ಕುತೂಹಲಕಾರಿ ಕಥೆಯನ್ನು ಆಕೆಯ ಚಿಕ್ಕಪ್ಪ ತೆರೆದಿಟ್ಟಿದ್ದಾರೆ. ದುಬೈಗೆ ಮತ್ತು ಅಲ್ಲಿಂದ ಕಠ್ಮಂಡುಗೆ ವಿಮಾನದ ಟಿಕೆಟ್ಗಳನ್ನು ಖರೀದಿಸಲು ಆಕೆ ತನ್ನ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಳು ಮತ್ತು ಸ್ನೇಹಿತೆಯರಿಂದ ಸಾಲ ಪಡೆದಿದ್ದಳು. ಕಠ್ಮಂಡುವಿನಿಂದ ಆಕೆ ಭಾರತವನ್ನು ಪ್ರವೇಶಿಸಿದ್ದಳು ಎಂದು 16 ಹರೆಯದ ಇಕ್ರಾ ಜೀವಾನಿಯ ಚಿಕ್ಕಪ್ಪ ಅಫ್ಝಲ್ ಜೀವಾನಿ ತಿಳಿಸಿದರು.

ಬೆಂಗಳೂರಿನಲ್ಲಿ ಮುಲಾಯಂ ಸಿಂಗ್ ಯಾದವ (26) ಎಂಬಾತನೊಂದಿಗೆ ವಾಸವಾಗಿದ್ದ ಇಕ್ರಾಳನ್ನು ಪೊಲೀಸರು ಪತ್ತೆ ಹಚ್ಚಿ ಗಡಿಪಾರಿಗೆ ಕ್ರಮ ಕೈಗೊಂಡಿದ್ದು, ರವಿವಾರ ವಾಘಾ ಗಡಿಯಲ್ಲಿ ಆಕೆಯನ್ನು ಪಾಕ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಪ್ರಸ್ತುತ ಯಾದವ ಬೆಂಗಳೂರು ಜೈಲಿನಲ್ಲಿದ್ದಾನೆ.

ಆನ್‍‍ಲೈನ್‍‍ನಲ್ಲಿ ಭೇಟಿಯಾಗಿದ್ದ ಅವರಿಬ್ಬರೂ ಪರಸ್ಪರ ಪ್ರೇಮದಲ್ಲಿ ಸಿಲುಕಿದ್ದು,ಮದುವೆಯಾಗಲು ನಿರ್ಧರಿಸಿದ್ದರು. ಇಷ್ಟಾದ ಬಳಿಕ ಕೆಲವು ತಿಂಗಳುಗಳ ಹಿಂದೆ ಇಕ್ರಾ ಕಠ್ಮಂಡು ಮೂಲಕ ಬೆಂಗಳೂರು ತಲುಪಿದ್ದಳು ಮತ್ತು ಅವರಿಬ್ಬರೂ ಮದುವೆಯಾಗಿದ್ದರು.

ಇಕ್ರಾಳ ತಂದೆ,ತಾಯಿ ಮತ್ತು ಚಿಕ್ಕಪ್ಪ ಆಕೆಯನ್ನು ಬರಮಾಡಿಕೊಳ್ಳಲು ಲಾಹೋರ್ಗೆ ತೆರಳಿದ್ದರು ಎಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಕುಟುಂಬದ ಮೂಲಗಳು ತಿಳಿಸಿವೆ. ಸೆಪ್ಟಂಬರ್‌ನಲ್ಲಿ ಕಾಲೇಜಿಗೆ ತೆರಳಿದ್ದ ಇಕ್ರಾ ನಂತರ ಮನೆಗೆ ಮರಳದೆ ನಾಪತ್ತೆಯಾಗಿದ್ದಳು. ಇಕ್ರಾಳೊಂದಿಗೆ ಮಾತನಾಡಲು ಅವಕಾಶಕ್ಕಾಗಿ ಪತ್ರಕರ್ತರ ಮನವಿಗಳನ್ನು ಆಕೆಯ ಕುಟುಂಬ ನಿರಾಕರಿಸಿತ್ತು. ಆದರೆ,ಇದು ಈಗ ಶಾಶ್ವತವಾಗಿ ಮುಗಿದ ಅಧ್ಯಾಯವಾಗಿದೆ ಎಂದು ಆಕೆಯ ತಂದೆ ಸೊಹೈಲ್ ಜೀವಾನಿ ಹೇಳಿದರು.

‘ಒಬ್ಬಳೇ ಭಾರತಕ್ಕೆ ತೆರಳಲು ಆಕೆ ಹೇಗೆ ಧೈರ್ಯ ಮಾಡಿದ್ದಳು ಎನ್ನುವುದು ನಮಗೆ ಇನ್ನೂ ಗೊತ್ತಾಗಿಲ್ಲ,ಆಕೆ ಯಾವಾಗಲೂ ನಾಚಿಕೆ ಸ್ವಭಾವದ ಹುಡುಗಿಯಾಗಿದ್ದಳು. ಎಲ್ಲರಂತೆ ನಮಗೂ ದಿಗ್ಭ್ರಮೆಯಾಗಿದೆ ’ಎಂದರು. ಕಳೆದ ನಾಲ್ಕು ತಿಂಗಳುಗಳಲ್ಲಿ ಅನುಭವಿಸಿರುವ ಆಘಾತದಿಂದ ಕುಟುಂಬವಿನ್ನೂ ಚೇತರಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿದವು.

ಕರಾಚಿಯಿಂದ ದುಬೈಗೆ ಮತ್ತು ನಂತರ ದುಬೈನಿಂದ ಕಠ್ಮಂಡುಗೆ ಮತ್ತು ಅಲ್ಲಿಂದ ಭಾರತಕ್ಕೆ ಪ್ರಯಾಣಿಸುವಲ್ಲಿ ಇಕ್ರಾ ಯಶಸ್ವಿಯಾಗಿದ್ದು ಹೇಗೆ ಎಂಬ ಬಗ್ಗೆ ಪ್ರಶ್ನೆಗಳು ಈಗಲೂ ಉಳಿದುಕೊಂಡಿವೆ. ತನ್ನ ಭಾರತೀಯ ಪ್ರೇಮಿ ಮುಸ್ಲಿಮ್ ಸಾಫ್ಟ್ವೇರ್ ಇಂಜಿನಿಯರ್ ಸಮೀರ್ ಅನ್ಸಾರಿ ಎಂದು ಇಕ್ರಾ ಭಾವಿಸಿದ್ದಳು. ಅನ್ಸಾರಿ ವಾಸ್ತವದಲ್ಲಿ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಯಾದವ ಎನ್ನುವುದು ಆಕೆಗೆ ಭಾರತವನ್ನು ತಲುಪಿದ ನಂತರವಷ್ಟೇ ಗೊತ್ತಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿದವು.

ಕಠ್ಮಂಡುವಿನಿಂದ ಭಾರತ-ನೇಪಾಳ ಗಡಿಯ ಮೂಲಕ ಇಕ್ರಾಳನ್ನು ಬೆಂಗಳೂರಿಗೆ ಕರೆತರಲು ವ್ಯವಸ್ಥೆ ಮಾಡಿದ್ದ ಮೂಲತಃ ಉತ್ತರ ಪ್ರದೇಶದ ನಿವಾಸಿ ಯಾದವ ಬಳಿಕ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದ.

ಭಾರತಕ್ಕೆ ವೀಸಾ ಪಡೆಯಲು ಇಕ್ರಾಗೆ ಸಾಧ್ಯವಾಗಿರಲಿಲ್ಲ, ಹೀಗಾಗಿ ಆಕೆ ದುಬೈಗೆ ತೆರಳಿ ಅಲ್ಲಿಂದ ಕಠ್ಮಂಡುಗೆ ಪ್ರಯಾಣಿಸಿದ್ದಳು ಎಂದು ಅಫ್ಝಲ್ ಜೀವಾನಿ ತಿಳಿಸಿದರು. ರೇವಾ ಎಂಬ ಹಿಂದು ಹೆಸರಿಟ್ಟುಕೊಂಡಿದ್ದ ಇಕ್ರಾ ಮನೆಯಲ್ಲಿ ನಮಾಝ್ ಮಾಡುತ್ತಿದ್ದನ್ನು ಗಮನಿಸಿದ್ದ ನೆರೆಕರೆಯವರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಯಾದವ್ ಇಕ್ರಾಳ ಆಧಾರ್ ಕಾರ್ಡ್ ಅನ್ನೂ ಮಾಡಿಸಿದ್ದ ಮತ್ತು ಭಾರತೀಯ ಪಾಸ್‌ಪೋರ್ಟ್‌ಗಾಗಿ ಅರ್ಜಿಯನ್ನೂ ಹಾಕಿಸಿದ್ದ. ‘ಇಕ್ರಾಳನ್ನು ಮರಳಿ ಪಡೆಯಲು ಮತ್ತು ನಮ್ಮ ಪಾಲಿಗೆ ಈ ಭಯಂಕರ ಅಧ್ಯಾಯವನ್ನು ಅಂತ್ಯಗೊಳಿಸಲು ನೆರವಾಗಿದ್ದಕ್ಕಾಗಿ ಪಾಕಿಸ್ತಾನ ಮತ್ತು ಭಾರತ ಸರಕಾರಗಳಿಗೆ ನಾವು ಆಭಾರಿಯಾಗಿದ್ದೇವೆ ’ಎಂದು ಅಫ್ಝಲ್ ಹೇಳಿದರು.

‘ಇಕ್ರಾ ಮನೆಗೆ ಮರಳಿದಾಗಿನಿಂದ ನಿರಂತರವಾಗಿ ಕ್ಷಮೆಯನ್ನು ಕೋರುತ್ತಿದ್ದಾಳೆ. ಯಾದವ್ ತಾನು ಮುಸ್ಲಿಮ್ ಎಂದು ಹೇಳಿಕೊಂಡು ನಮ್ಮ ಮಗಳನ್ನು ವಂಚಿಸಿದ್ದ ’ಎಂದರು. ಬೆಂಗಳೂರು ತಲುಪಿ ಯಾದವನನ್ನು ಭೇಟಿಯಾದ ಬಳಿಕ ಆಕೆಗೆ ತನ್ನ ತಪ್ಪಿನ ಅರಿವಾಗಿತ್ತು ಮತ್ತು ಪ್ರತಿಯೊಂದನ್ನೂ ತಿಳಿಸಲು ತನ್ನ ತಾಯಿಗೆ ವಾಟ್ಸ್ ಆ್ಯಪ್ ಕರೆಗಳನ್ನು ಮಾಡತೊಡಗಿದ್ದಳು ಎಂದು ಅವರು ತಿಳಿಸಿದರು.

ಈ ಕರೆಗಳ ಬಗ್ಗೆ ಕುಟುಂಬವು ತಮಗೆ ಮಾಹಿತಿ ನೀಡಿತ್ತು ಮತ್ತು ಪಾಕ್ ವಿದೇಶಾಂಗ ಕಚೇರಿಯನ್ನು ಸಂಪರ್ಕಿಸಿದ್ದೆವು. ಅದು ಬಾಲಕಿಯನ್ನು ಪತ್ತೆ ಹಚ್ಚಲು ನೆರವಾಗುವಂತೆ ಭಾರತೀಯ ವಿದೇಶಾಂಗ ಕಚೇರಿಯನ್ನು ಕೋರಿತ್ತು ಎಂದು ಪಾಕ್ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಜೀವಾನಿ ಕುಟುಂಬವು ದಕ್ಷಿಣ ಸಿಂಧ ಪ್ರಾಂತ್ಯದ ಹೈದರಾಬಾದ್ನಲ್ಲಿ ವ್ಯವಹಾರವನ್ನು ಹೊಂದಿದೆ.

Similar News